*  ಮಧ್ಯಪ್ರದೇಶ, ತಮಿಳುನಾಡಿನ ದಕ್ಷಿಣ ಭಾಗದವರೆಗೂ ಮಳೆಯಾಗುವ ಸಾಧ್ಯತೆ*  ಮುನ್ನೆಚ್ಚರಿಕೆ ನೀಡಿದ ಭಾರತೀಯ ಹವಾಮಾನ ಇಲಾಖೆ *  ಬೆಂಗಳೂರು ಮತ್ತು ಗ್ರಾಮಾಂತರ, ದಕ್ಷಿಣ ಕನ್ನಡ ಮತ್ತು ರಾಮನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ  

ಬೆಂಗಳೂರು(ಅ.20): ರಾಜ್ಯ(Karnataka) ಕರಾವಳಿ(Coastal) ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್‌ 23ರವರೆಗೆ ಅಲ್ಲಲ್ಲಿ ಭಾರಿ ಮಳೆಯಾಗುವ(Rain) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ಮುನ್ನೆಚ್ಚರಿಕೆ ನೀಡಿದೆ. 

Add Asianetnews Kannada as a Preferred SourcegooglePreferred

ಬಂಗಾಳ ಕೊಲ್ಲಿಯಲ್ಲಿನ(Bay of Bengal) ಪ್ರಬಲ ಆಗ್ನೇಯ ಮಾರುತವು ಟ್ರಫ್‌ ನಿರ್ಮಾಣ ಮಾಡುತ್ತಿರುವುದರಿಂದ ಮಧ್ಯಪ್ರದೇಶ(Madhya Pradesh), ತಮಿಳುನಾಡಿನ(Tamil Nadu) ದಕ್ಷಿಣ ಭಾಗದವರೆಗೂ ಮಳೆಯಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕಾಗಿ ರಾಜ್ಯದಲ್ಲೂ ಮಳೆ ಮುಂದುವರೆಯಲಿದೆ ಎಂದು ತಿಳಿಸಿದೆ.

ಬುಧವಾರ ಒಳನಾಡಿನ ಶಿವಮೊಗ್ಗ(Shivamogga), ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು(Bengaluru) ನಗರ ಮತ್ತು ಗ್ರಾಮಾಂತರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆ ಭಾರಿ ಮಳೆ ಸುರಿಯಲಿದೆ. ಗುರುವಾರದ ಬಳಿಕ ಈ ಜಿಲ್ಲೆಗಳೊಂದಿಗೆ ದಾವಣಗೆರೆ, ಚಿತ್ರದುರ್ಗ ಮತ್ತು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕೆಲ ಭಾಗದಲ್ಲಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಧಾರಾಕಾರ ಮಳೆ : ಹುಷಾರ್!

ಸೋಮವಾರ 8.30 ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲ ಕಡೆಗಳಲ್ಲಿ ಭಾರಿ ಮಳೆಯಾಗಿದೆ. ರಾಮನಗರದ ಎಂ.ಬಿ. ಹಳ್ಳಿ 7.7 ಸೆಂಮೀ, ಮತ್ತಿಕೆರೆ 6.3 ಸೆಂಮೀ, ಬೆಂಗಳೂರು ಗ್ರಾಮಾಂತರದ ಹೊಸಕೋಟೆ 4 ಸೆಂಮೀ, ಮಂಡ್ಯದ ಮದ್ದೂರು 3 ಸೆಂಮೀ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಬೆಂಗಳೂರು ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣ(HAL Airport), ಜಿಕೆವಿಕೆ ತಲಾ 2 ಸೆಂಮೀ ಮಳೆ ಸುರಿದಿದೆ.

ಬೆಂಗಳೂರು(Bengaluru) ನಗರ ಮತ್ತು ಗ್ರಾಮಾಂತರ, ದಕ್ಷಿಣ ಕನ್ನಡ ಮತ್ತು ರಾಮನಗರದಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆ ದುರ್ಬಲವಾಗಿದೆ. ಚಾಮರಾಜನಗರ, ರಾಯಚೂರು, ಗದಗ, ಯಾದಗಿರಿ, ವಿಜಯಪುರ, ಧಾರವಾಡ, ಕಲಬುರಗಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಒಣ ಹವೆ ಇತ್ತು.