ಬೆಂಗಳೂರಿನ ಕೆಲವು ಕಡೆಗಳಲ್ಲಿ ಸೋಮವಾರ ಸಂಜೆ ಸುರಿದ ಜೋರು ಮಳೆ ಮಳೆಗೆ ಪ್ರತ್ಯೇಕ ಕಡೆಗಳಲ್ಲಿ ಮೂರು ಮರ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಹವಾಮಾನ ವೈಪರಿತ್ಯದಿಂದ ನಗರದಲ್ಲಿ ಇನ್ನೂ ಎರಡು ದಿನ 48 ಗಂಟೆಗಳ ಕಾಲ ಅತ್ಯಧಿಕ ಪ್ರಮಾಣದಲ್ಲಿ ಮಳೆ

ಬೆಂಗಳೂರು (ಅ.19): ಬೆಂಗಳೂರಿನ (Bengaluru) ಕೆಲವು ಕಡೆಗಳಲ್ಲಿ ಸೋಮವಾರ ಸಂಜೆ ಸುರಿದ ಜೋರು ಮಳೆಗೆ (Rain) ಪ್ರತ್ಯೇಕ ಕಡೆಗಳಲ್ಲಿ ಮೂರು ಮರ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಪ್ರಮುಖ ರಸ್ತೆಗಳು (Road) ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದ್ದರಿಂದ ಜನರು ಪರದಾಡಿದರು.

Add Asianetnews Kannada as a Preferred SourcegooglePreferred

ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತಾದರೂ ಮಳೆ ಬಂದಿರಲಿಲ್ಲ. ಸಂಜೆ ಮಹದೇವಪುರ, ಪೂರ್ವ ಮತ್ತು ಯಲಹಂಕ (Yalahanka) ವಲಯ ವ್ಯಾಪ್ತಿಯಲ್ಲಿ ಗಾಳಿ (Wind) ಮತ್ತು ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು. ಇದರಿಂದ ಮಲ್ಲೇಶ್ವರಂನ (Malleshwaram) 12ನೇ ಅಡ್ಡರಸ್ತೆ, ಸಂಜಯನಗರದ ರಾಧಾಕೃಷ್ಣ ವಾರ್ಡ್‌ ರಸ್ತೆ ಹಾಗೂ ತಿಪ್ಪಸಂದ್ರ ಮಾರುಕಟ್ಟೆಪ್ರದೇಶದಲ್ಲಿ ತಲಾ ಒಂದು ಮರ ಉರುಳಿದವು.

ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

ನಗರದಲ್ಲಿ (City) ಕೊಂಚ ವಿರಾಮ ನೀಡಿದ್ದ ಮಳೆ ಸೋಮವಾರ ಸುಮಾರು ಒಂದು ಗಂಟೆ ಸಮಯ ಜೋರಾಗಿ ಅಬ್ಬರಿಸಿತು. ಹೆಬ್ಬಾಳ, ಮೆಜೆಸ್ಟಿಕ್‌ (Mejestic), ರಾಜಾಜಿನಗರ, ಮಲ್ಲೇಶ್ವರಂ, ಇಂದಿರಾನಗರ, ಜಯನಗರ, ಕೋರಮಂಗಲ, ಕೊಡಿಗೇಹಳ್ಳಿ, ಜಕ್ಕೂರು, ಯಲಹಂಕ, ಸಂಪಂಗಿರಾಮ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಯಿತು. ಯಶವಂತಪುರ, ರಾಜಮಹಲ್‌ ಗುಟ್ಟಹಳ್ಳಿ ಹಾಗೂ ಶಿವಾಜಿನಗರ ಸೇರಿದಂತೆ ಕೆಲವು ರಸ್ತೆಗಳ ಮೇಲೆ ನೀರು ನಿಂತಿತ್ತು.

ಮಳೆ ಮುನ್ಸೂಚನೆ

ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಉಂಟಾದ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಮಳೆ ಅರ್ಭಟ ಹೀಗೆ ಮುಂದುವರಿಯಲಿದೆ. ಕೆಲವೆಡೆ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆ, ಇನ್ನು ಕೆಲವು ಬಡಾವಣೆಗಳಲ್ಲಿ ಸಾಮಾನ್ಯ ಮಳೆ ಆಗಲಿದೆ. ತಾಪಮಾನ ಗರಿಷ್ಠ 27ರಿಂದ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬೆಳ್ಳಂದೂರಲ್ಲಿ ಅಧಿಕ ಮಳೆ

ರಾತ್ರಿ 9.30ರ ವೇಳೆಗೆ ನಗರದ ಬೆಳ್ಳಂದೂರಲ್ಲಿ(2) ಅಧಿಕ 29.5ಮಿ.ಮೀ. ಮಳೆ ಸುರಿದಿದೆ. ಹೊರಮಾವು (2)24, ದೊಡ್ಡಾನೆಕ್ಕುಂದಿ 22.5, ಮನೋರಾಯಪಾಳ್ಯ 19.5, ನಂದಿನಿ ಲೇಔಟ್‌ ಮತ್ತು ಬೆಳ್ಳಂದೂರು (1) 18.5, ಕೆ.ಆರ್‌.ಪುರಂ ಮತ್ತು ಹಗದೂರು ತಲಾ 17.5, ಯಲಹಂಕ 16, ವನ್ನಾರಪೇಟೆ 15.5, ಎಚ್‌ಎಎಲ್‌ ವಿಮಾನ ನಿಲ್ದಾಣ, ಯಲಹಂಕ ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್‌ ತಲಾ 15, ರಾಮಮೂರ್ತಿ ನಗರ, ವಿದ್ಯಾರಣ್ಯಪುರ, ಹೊರಮಾವು (1) ಕೋನೇನ ಅಗ್ರಹಾರದಲ್ಲಿ ತಲಾ 13 ಮಿ.ಮೀ. ಮಳೆ ದಾಖಲಾಗಿದೆ.

ಹವಾಮಾನ ವೈಪರೀತ್ಯ 2 ದಿನ ಮಳೆ

ಹವಾಮಾನ ವೈಪರಿತ್ಯದಿಂದ ನಗರದಲ್ಲಿ ಇನ್ನೂ ಎರಡು ದಿನ 48 ಗಂಟೆಗಳ ಕಾಲ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.