ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 200ಕ್ಕೂ ಹೆಚ್ಚು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸರ್ಕಾರವೇ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ನಿಯಂತ್ರಿಸಲಿದ್ದು, ಟ್ಯಾಬ್ ಮೂಲಕ ರೋಗಿಯ ಸ್ಥಿತಿಗತಿ ವೀಕ್ಷಿಸುವ ನೂತನ ವ್ಯವಸ್ಥೆ ಜಾರಿಯಾಗಲಿದೆ ಎಂದರು.

ಧಾರವಾಡ (ಏ.28): ಹಾವೇರಿ: ರಾಜ್ಯದ 1300 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ವೈದ್ಯರ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಸೋಮವಾರ ಸರ್ಕಾರದ ಆಸ್ಪತ್ರೆಗಳಲ್ಲಿ ರೆಡಿಯೋಲಾಜಿಸ್ಟ್‌ ಕೊರತೆಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೆಡಿಯೋಲಜಿ ತಜ್ಞರ ಕೊರತೆ ಮೊದಲಿನಿಂದಲೂ ಇದೆ. ಅವರಿಗೆ ಹೆಚ್ಚಿನ ಬೇಡಿಕೆ ಇದ್ದು, ಟೆಲಿ ರೆಡಿಯಾಲಾಜಿ‌ ಮೂಲಕ ಈ ಕೊರತೆ ನೀಗಿಸುತ್ತೇವೆ ಎಂದರು. 

ಕರ್ನಾಟಕದಲ್ಲಿ ಇನ್ನು ಮುಂದೆ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡದೇ ಸರ್ಕಾರವೇ ಕಂಟ್ರೋಲ್ ಮಾಡುತ್ತದೆ. ಆ್ಯಂಬುಲೆನ್ಸಗಳಿಗೆ ಟ್ಯಾಬ್ ಅಳವಡಿಕೆ ಮಾಡುತ್ತೇವೆ. ಆಗ ಸಿಬ್ಬಂದಿ ರೋಗಿಯನ್ನು ಟ್ಯಾಬ್ ಮೂಲಕ ತೋರಿಸಿ ವೈದ್ಯರ ಬಳಿ ಮಾತಾಡಬಹುದು. ರೋಗಿಯ ಸ್ಥಿತಿಗತಿ ವೀಕ್ಷಿಸಬಹುದು ಎಂದರು.

ರೋಗಿ ಎಷ್ಟು ಹೊತ್ತು ಆ್ಯಂಬುಲೆನ್ಸ್‌ನಲ್ಲಿ ಇದ್ದ, ಆಸ್ಪತ್ರೆಗೆ ಕರೆತಂದ ಸಮಯ, ತುರ್ತು ಚಿಕಿತ್ಸೆಯ ಎಲ್ಲಾ ವಿವರ ಸಿಗಲಿದೆ. ದೇಶದಲ್ಲೇ ಮೊದಲ ಬಾರಿಗೆ ಈ ವ್ಯವಸ್ಥೆ ಜಾರಿ ಮಾಡುತ್ತಿದ್ದೇವೆ. ಮುಂದಿನ ತಿಂಗಳು ಸಿಎಂ ಸಿದ್ದರಾಮಯ್ಯ ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಗರ್ಭಕಂಠ ಕ್ಯಾನ್ಸರ್‌ ಲಸಿಕೆ ಬಗ್ಗೆ ಆತಂಕ ಬೇಡ:

ಗರ್ಭಕಂಠ ಕ್ಯಾನ್ಸರ್‌ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಾಲಕಿಯರಿಗೆ ಕೊಡುತ್ತಿರುವ ಲಸಿಕೆ ಎಲ್ಲ ರೀತಿಯಲ್ಲಿ ಪ್ರಮಾಣೀಕರಿಸಿದ್ದು, ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಇದನ್ನು ಇಡೀ ವಿಶ್ವದಲ್ಲಿಯೇ ಕೊಡಲಾಗುತ್ತಿದ್ದು, 14 ವರ್ಷದ ಬಾಲಕಿಯರು ಈ ಲಸಿಕೆ ಪಡೆದರೆ ಭವಿಷ್ಯದಲ್ಲಿ ಗರ್ಭಕಂಠ ಕ್ಯಾನ್ಸರ್‌ ಬರುವುದಿಲ್ಲ. ಈಗಾಗಲೇ ಇಲಾಖೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಬಾಲಕಿಯರಿಗೆ ಈ ಲಸಿಕೆ ನೀಡಲಾಗಿದೆ ಎಂದರು.

- ಸರ್ಕಾರದಿಂದಲೇ ಆ್ಯಂಬುಲೆನ್ಸ್ ಕಂಟ್ರೋಲ್‌: ಸಚಿವ