*  ವೇತನ ಹೆಚ್ಚಳಕ್ಕೂ ಪ್ರಯತ್ನ: ಡಾ.ಸುಧಾಕರ್‌*  ನೌಕರರ ಸೇವೆಯಿಂದ ವಿಶ್ವಾಸ*  ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ 

ಬೆಂಗಳೂರು(ಜು.08): ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ- ಹೊರ ಗುತ್ತಿಗೆ ನೌಕರರ ವೇತನ ಹೆಚ್ಚಳಕ್ಕೆ ಪ್ರಯತ್ನಿಸುತ್ತಿದ್ದು, ಆರೋಗ್ಯ ವಿಮೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ನೌಕರರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ಕಾಯಂ ನೌಕರರಿಗೆ ಕೊಡುವಷ್ಟೇ ವೇತನವನ್ನು ನಮಗೂ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ, ಈ ನೌಕರರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡರ ವ್ಯಾಪ್ತಿಯಲ್ಲಿಯೂ ಬರುತ್ತಾರೆ. ರಾಜ್ಯ ಸರ್ಕಾರದ ನಿರ್ಧಾರ ಒಂದರಿಂದ ಕಾಯಂ ನೌಕರರಂತೆ ಸಮಾನ ವೇತನ ಕೊಡಲು ಸಾಧ್ಯವಾಗುವುದಿಲ್ಲ. ಆದರೆ, ಈಗ ಇರುವ ವೇತನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 49 ಕಾರ್ಯಕ್ರಮಗಳನ್ನು ನಿರ್ದಿಷ್ಟ ಸಮಯದ ತನಕ ಮಾಡಲಿವೆ. ಹೀಗಾಗಿ, ಗುತ್ತಿಗೆ ನೌಕರರನ್ನು ಕಾಯಂ ಮಾಡಿಕೊಳ್ಳಲು ಅಡಚಣೆಗಳಿವೆ’ ಎಂದು ತಿಳಿಸಿದರು.

ವೈದ್ಯರ ಸೇವೆ ಹಣದಿಂದ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆರೋಗ್ಯ ವಿಮೆ ವಿಸ್ತರಣೆ, 10 ದಿನಗಳ ವೇತನ ಸಹಿತ ರಜೆಯ ಬೇಡಿಕೆಗಳನ್ನು ಇಟ್ಟಿದ್ದು, ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಪ್ರತಿಭಟನಾನಿರತ ನೌಕಕರು ಕೇಳಿರುವ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಶ್ರೀನಿವಾಸಾಚಾರಿಯವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ನೌಕರರ ಸೇವೆಯಿಂದ ವಿಶ್ವಾಸ:

ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರು ಬಹಳ ವಿಶ್ವಾಸ ಇಟ್ಟಿದ್ದು, ಇದಕ್ಕೆ ಮೂಲಸೌಲಭ್ಯ ಮಾತ್ರ ಕಾರಣವಲ್ಲ. ಅವಿರತ ಸೇವೆ ಸಲ್ಲಿಸುತ್ತಿರುವ ನೌಕರರಿಂದ ಆರೋಗ್ಯ ಸೇವೆಗೆ ಉತ್ತಮ ಹೆಸರು ಬಂದಿದೆ. ಅವರಿಗೆ ನೋವು ಕೊಟ್ಟು ನಾವು ಮುಂದುವರಿಯುವುದು ಅಸಾಧ್ಯ. ಕೆಲವು ಬೇಡಿಕೆ ಈಡೇರಿಸಲು ಕಾನೂನಾತ್ಮಕ, ತಾಂತ್ರಿಕ ತೊಡಕುಗಳಿವೆ. ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ, ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ತಿಳಿಸಿದರು.