ಪಿಎಸ್ಐ ಹಗರಣದಲ್ಲಿ ಪ್ರಭಾವಿಯೊಬ್ಬರ ಮಗನು ಕೂಡ ಭಾಗಿಯಾಗಿರುವ ವಿಷಯ ಹೇಳುವ ಕಾಲ ಬರುತ್ತದೆ. ಆದರೆ, ಅವರ ಹೆಸರು ಹೇಳಿ ಏನು ಉಪಯೋಗವಿದೆ? ಅದನ್ನು ಸರಿಪಡಿಸುವ ತಾಕತ್ತು ಗೃಹಸಚಿವರಿಗೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬಾಗಲಕೋಟೆ (ಮೇ.10): ಪಿಎಸ್ಐ ಹಗರಣದಲ್ಲಿ (PSI Recruitment Scam) ಪ್ರಭಾವಿಯೊಬ್ಬರ ಮಗನು ಕೂಡ ಭಾಗಿಯಾಗಿರುವ ವಿಷಯ ಹೇಳುವ ಕಾಲ ಬರುತ್ತದೆ. ಆದರೆ, ಅವರ ಹೆಸರು ಹೇಳಿ ಏನು ಉಪಯೋಗವಿದೆ? ಅದನ್ನು ಸರಿಪಡಿಸುವ ತಾಕತ್ತು ಗೃಹಸಚಿವರಿಗೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪ್ರಭಾವಿಯೊಬ್ಬರ ಮಗನ ಹೆಸರು ಬಹಿರಂಗವಾದರೆ ಸರ್ಕಾರವೇ ಬೀಳುತ್ತದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಆತನೇ ಕಿಂಗ್ಪಿನ್. ಆತನನ್ನು ಬಂಧಿಸುವ ತಾಕತ್ತು ಈ ಸರ್ಕಾರಕ್ಕಿಲ್ಲ.
ಹೀಗಾಗಿ, ಆತನ ಹೆಸರು ಹೇಳಿ ಏನೂ ಪ್ರಯೋಜನವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯದಲ್ಲಿ (Karnataka) ಬಿಜೆಪಿ (BJP) ಆಡಳಿತದಲ್ಲಿ ನಡೆದ ಹಗರಣ ಮತ್ತು ಅಕ್ರಮಗಳ ಕುರಿತು ಈ ಸರ್ಕಾರ ಎಷ್ಟುಪ್ರಾಮಾಣಿಕವಾಗಿ ತನಿಖೆ ಮಾಡಿದೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಈಗ ಪಿಎಸ್ಐ ನೇಮಕಾತಿ ಹಗರಣದ ಪ್ರಕರಣದಲ್ಲಿಯೂ ಕೆಲವರ ಅಮಾನತು, ಕೆಲವರ ಬಂಧನ ಮಾಡಿ, ಮುಖ್ಯ ಸೂತ್ರಧಾರರನ್ನು ರಕ್ಷಿಸಿ ತನಿಖೆ ಮುಗಿಸಿಬಿಡುವ ಉದ್ದೇಶ ಈ ಸರ್ಕಾರದ್ದಾಗಿದೆ. ಈ ಹಿಂದೆ ಡ್ರಗ್್ಸ ಹಾಗೂ ರೇವ್ಪಾರ್ಟಿ ವಿಚಾರದಲ್ಲಿ ಇವರು ಯಾವ ರೀತಿ ತನಿಖೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲವೆ ಎಂದು ಹೇಳಿದರು.
Janata Jaladhare: ಮೇ 13ರಂದು ನೆಲಮಂಗಲ ಬಳಿ ಜೆಡಿಎಸ್ ಬೃಹತ್ ಜಲಧಾರೆ ಸಮಾವೇಶ
ಕಟೀಲಗೆ ನಾಚಿಕೆ ಆಗಲ್ವಾ?: ಅರ್ಕಾವತಿ ಪ್ರಕರಣದ ವರದಿಯನ್ನು ಇಟ್ಟರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆಂಬ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಈ ರೀತಿ ಹೇಳಲು ನಾಚಿಕೆ ಆಗಬೇಕು. ವರದಿಯನ್ನು ಇಟ್ಟುಕೊಂಡು ಪೂಜೆ ಮಾಡುವ ಬದಲು ಅದನ್ನು ಬಿಡುಗಡೆ ಮಾಡಬೇಕು. ಪ್ರತಿನಿತ್ಯ ಸಿದ್ದರಾಮಯ್ಯ ಬಿಜೆಪಿಯವರು ಭ್ರಷ್ಟರು ಎಂದು ಬಯ್ಯುತ್ತಾ ತಿರುಗುತ್ತಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ನಾನು ಯಾವಾಗಲೂ ಹೇಳುತ್ತೇನೆ ಎಂದು ಛೇಡಿಸಿದರು.
ಮೊದಲಿನಿಂದಲೂ ರಾಜ್ಯದ ಖಜಾನೆ ಲೂಟಿ ಮಾಡಿ ದೆಹಲಿಯ ಹೈಕಮಾಂಡ್ಗೆ ಸಂದಾಯ ಮಾಡುವುದು ಕಾಂಗ್ರೆಸ್ ಸಂಪ್ರದಾಯ. ಈಗ ಬಿಜೆಪಿಯವರೂ ಇದೇ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದವರೇ ಆದ ಸಚಿವ ಆರ್.ಅಶೋಕ ಹೇಳಿರುವಂತೆ ಚುನಾವಣೆ ಮಾಡಲೆಂದು ಬರುವ ದೊಡ್ಡ ನಾಯಕರಿಗೆ ಕಾಣಿಕೆ ಸಂದಾಯ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಅಲ್ಲದೆ, ಜವಾಬ್ದಾರಿಯುತ ಶಾಸಕರಾಗಿರುವ ಯತ್ನಾಳ ಅವರು ಮಾಡಿರುವ ಆರೋಪವನ್ನು ಗಮನಿಸಿದರೆ ಕೇಂದ್ರದಲ್ಲಿರುವ ಬಿಜೆಪಿಯ ಕೆಲ ದಲ್ಲಾಳಿಗಳು ಹಣದ ಆಧಾರದ ಮೇಲೆ ಅಧಿಕಾರ ಕೊಡುವುದು ನಿಜ ಎಂದು ಸಾಬೀತಾಗಿದೆ.
ಪಾಪದ ಹಣದ ಮೂಲಕ ಕೆಲ ಶಾಸಕರನ್ನು ಖರೀದಿಸಿ, ಈ ಸರ್ಕಾರ ಮಾಡಿದ್ದಾರೆ. ಇದು ಪರಿಶುದ್ಧ ಸರ್ಕಾರವೇ? ಇದು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಸಚಿವ ಸಂಪುಟವಾಗಿದೆ ಎಂದು ಜರಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಲ್ಲದಕ್ಕೂ ದಾಖಲೆ ಕೇಳುತ್ತಾರೆ. ನಾನು 2008ರಿಂದ ಟನ್ಗಟ್ಟಲೇ ದಾಖಲೆಗಳನ್ನು ಇಟ್ಟಿದ್ದೇನೆ. ಆ ದಾಖಲೆಗಳನ್ನು ಇಟ್ಟುಕೊಂಡು ಯಾರಾರಯರೋ ದುಡ್ಡು ಮಾಡಿಕೊಂಡರು. ಅಂದು ನಾನು ದಾಖಲೆ ಬಿಡುಗಡೆ ಮಾಡಿದ್ದರ ಪರಿಣಾಮವೇ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು ಎಂದು ಹೇಳಿದರು.
ಸಿದ್ದರಾಮಯ್ಯ ಸ್ಪರ್ಧೆ ಕುರಿತು ಲಘುವಾಗಿ ಮಾತನಾಡಲ್ಲ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಅವರು ಹಲವಾರು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ, ಶಾಸಕನಾಗಿ ಅಭಿವೃದ್ಧಿ ಮಾಡಿದ್ದೇನೆ ಎಂಬ ಭಾವನೆ ಇಟ್ಟುಕೊಂಡಿದ್ದಾರೆ. ಹೀಗಾಗಿ, 8ರಿಂದ 10 ಕ್ಷೇತ್ರಗಳ ಕಾರ್ಯಕರ್ತರು ಅವರನ್ನು ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಕರೆಯುತ್ತಿದ್ದಾರೆ. ಆದ್ದರಿಂದ ಸುದೀರ್ಘ ರಾಜಕೀಯ ಮಾಡಿದ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ನಾನು ಲಘುವಾಗಿ ಮಾತನಾಡುವುದಿಲ್ಲ. ಮನುಷ್ಯನಿಗೆ ಸೋಲು-ಗೆಲುವು ಸಾಮಾನ್ಯ. ಅವರು ಎಲ್ಲಿ ನಿಲ್ಲಬೇಕು ಎಂದು ಅವರ ಪಕ್ಷ ತೀರ್ಮಾನ ಮಾಡುತ್ತದೆ. ಮುಂಬರುವ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದಕ್ಕಾಗಿ ನಮ್ಮ ಪಕ್ಷ ಹೋರಾಟ ಮಾಡುತ್ತಿದೆ ಎಂದರು.
ಗುತ್ತಿಗೆದಾರರಿಂದ ಸರ್ಕಾರ ಶೇ.60ರಷ್ಟು ಕಮಿಷನ್ ವಸೂಲಿ: ಎಚ್.ಡಿ ಕುಮಾರಸ್ವಾಮಿ
ಮುತಾಲಿಕನಂಥವರನ್ನು ಒದ್ದು ಒಳಗೆ ಹಾಕಿ: ರಾಜ್ಯದಲ್ಲಿ ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಕೆಂಡಾಮಂಡಲವಾದ ಕುಮಾರಸ್ವಾಮಿ, ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಬೇಕಾದರೆ ಮುತಾಲಿಕನಂಥವರನ್ನು ಒದ್ದು ಒಳಗಡೆ ಹಾಕಬೇಕು ಎಂದು ಆಗ್ರಹಿಸಿದರು. ಅವರದ್ದು ರಾಮಸೇನೆಯೋ, ರಾವಣಸೇನೆಯೋ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇಂತಹ ವಿಷಯಗಳನ್ನು ಬೃಹದಾಕಾರವಾಗಿ ಬೆಳೆಯಲು ಸರ್ಕಾರವೇ ಮೌನವಾಗಿ ಒಪ್ಪಿಗೆ ಸೂಚಿಸಿದಂತಿದೆ. ಕೂಡಲೇ ಇದನ್ನು ನಿಲ್ಲಿಸಬೇಕು, ಸಮಾಜದಲ್ಲಿ ಒಮ್ಮೆ ಸಾಮರಸ್ಯ ಕದಡಿದರೆ, ಅದನ್ನು ಸುಲಭವಾಗಿ ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಚ್ ನಿಗದಿಪಡಿಸಿದ ಧ್ವನಿ ಪ್ರಮಾಣದ ಮಿತಿಯಲ್ಲಿ ಸರ್ಕಾರ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಬೇಕು. ಇದಕ್ಕೆ ಪ್ರಚಾರದ ಅವಶ್ಯಕತೆ ಬೇಕಿಲ್ಲ ಎಂದರು.
ಎಲ್ಲರೂ ಒಂದಾಗಿ ಬಾಳುವ ಸ್ಥಿತಿ ಇರಲಿ: ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ರೂಪಿಸಿರುವ ಸಂಚು ಬಹಿರಂಗವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕುಮಾರಸ್ವಾಮಿ, ರಾಜ್ಯದಲ್ಲಿ ಕೆಲವು ಸಂಘಟನೆಗಳಿಂದ ಇಲ್ಲವೇ, ಕೆಲ ಕಿಡಿಗೇಡಿಗಳಿಂದ ಇಂದು ಸಮಾಜದಲ್ಲಿ ಶಾಂತಿ ಕದಡಿದ್ದು, ಅವರಿವರನ್ನು ಹತ್ಯೆ ಮಾಡಬೇಕೆನ್ನುವ ಯೋಚನೆ ನಡೆಯುತ್ತಿದೆ. ಇದನ್ನು ತಡೆಯಬೇಕಾದದ್ದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇಂತಹ ವಾತಾವರಣ ನಿರ್ಮಾಣವಾಗಲಿಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದ ಅವರು, ಎಲ್ಲರೂ ಒಂದಾಗಿ ಬಾಳುವ ಪರಿಸ್ಥಿತಿ ನಿರ್ಮಾಣವಾಗಬೇಕು. ಸರ್ಕಾರವು ಸಹ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ, ಸಮಯೋಚಿತ, ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದರು.
