ಹೈಕೋರ್ಟ್ ನಿರ್ದೇಶನದಂತೆ, ಬೈಕ್ ಟ್ಯಾಕ್ಸಿ ಸೇವೆಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಕಾನೂನುಬಾಹಿರ ವಾಣಿಜ್ಯ ಚಟುವಟಿಕೆ ಹಾಗೂ ಸರ್ಕಾರದ ಮಾರ್ಗಸೂಚಿಗಳ ಅನುಪಸ್ಥಿತಿಯೇ ಕಾರಣ. ಓಲಾ, ಉಬರ್, ರ‍್ಯಾಪಿಡೋ ಸೇವೆಗಳು ಬಂದ್ ಆಗಿ, ಬಳಕೆದಾರರು ಮತ್ತು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.

ಜನ ಸಾಮಾನ್ಯರಿಗೆ ಹೆಚ್ಚು ಜನಪ್ರಿಯವಾಗಿದ್ದ, ರ‍್ಯಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ. ಇದರಿಂದ ಆಟೋ ಚಾಲಕರು ಹಾಗೂ ಇತರ ಕ್ಯಾಬ್​ಗಳಿಗೆ ಭಾರಿ ಸಂತೋಷ ಉಂಟಾಗಿದೆ. ಆದರೆ ಬಸ್​ ಸೌಲಭ್ಯಗಳು ಸರಿಯಾಗಿ ಇಲ್ಲದ ಈ ದಿನಗಳಲ್ಲಿ, ಪ್ರತಿನಿತ್ಯ ಕಚೇರಿಗೆ ಹೋಗುತ್ತಿದ್ದವರಿಗೆ ಇದರಿಂದ ಭಾರಿ ನಷ್ಟವುಂಟಾಗಿದೆ. ಇಂದಿನಿಂದ ಈ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಅಷ್ಟಕ್ಕೂ ಈ ಆದೇಶ ಹೊರಟಿರುವುದಕ್ಕೆ ಕಾರಣ, ಹೈಕೋರ್ಟ್​ ನೀಡಿದ್ದ ನಿರ್ದೇಶನ.

 ದ್ವಿಚಕ್ರವನ್ನು ಸಾರಿಗೆ ವಾಹನಗಳಾಗಿ ಪರಿವರ್ತಿಸಿ ನೋಂದಾಯಿಸಲು 2022 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. ಈ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಕಳೆದ ತಿಂಗಳು ವಜಾಗೊಳಿಸಿ , ಬೈಕ್ ಟ್ಯಾಕ್ಸಿಗಳ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಓಲಾ, ಉಬರ್ ಮತ್ತು ರ‍್ಯಾಪಿಡೋಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿದ್ದರು. ಆರು ವಾರಗಳಲ್ಲಿ ಈ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

ಇನ್ನೂ ಹತ್ತೇ ವರ್ಷ: ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಬಿಲ್​ ಗೇಟ್ಸ್​ ಶಾಕಿಂಗ್​ ವಿಷ್ಯ ರಿವೀಲ್​!

1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93 ಮತ್ತು ಅದರ ಅಡಿಯಲ್ಲಿರುವ ನಿಯಮಗಳ ಅಡಿಯಲ್ಲಿ ರಾಜ್ಯ ಸರ್ಕಾರವು ಸಂಬಂಧಿತ ಮಾರ್ಗಸೂಚಿಗಳನ್ನು ತಿಳಿಸದ ಹೊರತು, ಅರ್ಜಿದಾರರು ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡುವ ಸಂಗ್ರಾಹಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳು ವಾಣಿಜ್ಯ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಿಲ್ಲದ ಕಾರಣ ಬೈಕ್ ಟ್ಯಾಕ್ಸಿಗಳು ಕಾನೂನು ಬಾಹಿರ ಎಂದು ರಾಜ್ಯ ಸರ್ಕಾರ ವಾದಿಸಿತ್ತು. ಇದನ್ನು ಪರಿಗಣಿಸಿರುವ ನ್ಯಾಯಾಲಯ ಇಂಥದ್ದೊಂದು ಆದೇಶ ಹೊರಡಿಸಿತ್ತು. ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ನೀಡಿದ ಮಧ್ಯಂತರ ಆದೇಶದ ಆಧಾರದ ಮೇಲೆ ಓಲಾ, ಉಬರ್ ಮತ್ತು ರ್ಯಾಪಿಡೊ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸುತ್ತಿವೆ ಎಂಬ ಅಂಶಗಳನ್ನು ಗಮನಿಸಿತು. ಆದ್ದರಿಂದ ಇದನ್ನು ಮುಂದುವರಿಸಲು ಆರು ವಾರಗಳ ಕಾಲಾವಕಾಶ ನೀಡಿತ್ತು. ಹಾಗೂ ಆರು ವಾರಗಳ ನಂತರ ಇದನ್ನು ನಿಷೇಧಿಸಬೇಕೆಂದು ಹೇಳಿತ್ತು. ಜೊತೆಗೆ ರಾಜ್ಯ ಸರ್ಕಾರ ಇದನ್ನು ಖಚಿತಪಡಿಸಬೇಕೆಂದು ಕೂಡ ನ್ಯಾಯಾಲಯ ನಿರ್ದೇಶಿಸಿತ್ತು.

ಅದರ ಅನ್ವಯ ಈ ಆದೇಶವನ್ನು ಸಾರಿಗೆ ಸಚಿವರು ಇಂದು ಹೊರಡಿಸಿದ್ದಾರೆ. ಅಂದಹಾಗೆ, ಬೆಂಗಳೂರು, ಮೈಸೂರು ನಗರಗಳಲ್ಲಿ ಈ ಸೇವೆ ಬಹಳ ಪ್ರಚಲಿತದಲ್ಲಿದೆ. ಪ್ರತಿನಿತ್ಯ ಸಹಸ್ರಾರು ಮಂದಿ ಈ ಬೈಕ್​ ಸೇವೆಯನ್ನು ಪಡೆಯುತ್ತಿದ್ದಾರೆ. ಇದೀಗ ಆದೇಶದಿಂದಾಗಿ ಜನರಿಗೆ ಮಾತ್ರವಲ್ಲದೇ ಈ ಬೈಕ್​ ನಂಬಿದ್ದ ಹಲವಾರು ಉದ್ಯೋಗಿಗಳ ಉದ್ಯೋಗಕ್ಕೂ ಕತ್ತರಿ ಬಿದ್ದಂತಾಗಿದೆ. ಇದು ಕಾನೂನು ಬಾಹಿರವಾಗಿದ್ದ ಹಿನ್ನೆಲೆಯಲ್ಲಿ ಇಂಥದ್ದೊಂದು ಆದೇಶ ಹೊರಡಿಸಲಾಗಿದೆ.

ವರ್ಷಗಟ್ಟಲೆ ರಜೆ ಕೊಟ್ಟು ಉದ್ಯೋಗಿಗಳಿಗೆ ಲಕ್ಷ ಲಕ್ಷ ಸಂಬಳ ಕೊಡ್ತಿದೆ ಗೂಗಲ್​: ಕಾರಣ ಮಾತ್ರ ವಿಚಿತ್ರ!