Asianet Suvarna News Asianet Suvarna News

ಪಿಎಂ ಫಸಲ್ ಬಿಮಾ ಯೋಜನೆಯಲ್ಲಿ ಗೋಲ್ಮಾಲ್; ರೈತರ ಹೆಸರಲ್ಲಿ ಬಂದ ಲಕ್ಷ ಲಕ್ಷ ಹಣ ಲೂಟಿ!

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ರೈತರಿಗೆ ಬಂದ ವಿಮೆ ಹಣ ರೈತರಿಗೇ ಗೊತ್ತಾಗದಂತೆ ಲೂಟಿ ಮಾಡಿರುವ ಪ್ರಕರಣ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬೆಳಕಿಗೆ ಬಂದಿದೆ.

Golmal in PM Fasal Bima Yojana; Lakhs of money looted in the name of farmers at raichur rav
Author
First Published Jul 4, 2023, 1:28 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜು.4) : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರಿಗೆ ಬಂದ ವಿಮೆ ಹಣ ರೈತರಿಗೇ ಗೊತ್ತಾಗದಂತೆ ಲೂಟಿ ಮಾಡಿರುವ ಪ್ರಕರಣ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬೆಳಕಿಗೆ ಬಂದಿದೆ.

ಕೇಂದ್ರ ಸರ್ಕಾರ ಬೆಳೆ ಹಾನಿಯಾದ ರೈತರಿಗೆ ಅನುಕೂಲವಾಗಲಿವೆಂದು ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ(Pradhan Mantri Fasal Bhima Yojana) ಜಾರಿಗೆ ತಂದಿದೆ. ಆದ್ರೆ ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ಇನ್ಸೂರೆನ್ಸ್ ಕಂಪನಿಯ ಸಿಬ್ಬಂದಿ ಸೇರಿಕೊಂಡು ರೈತರು ಕಟ್ಟಿದ ಹಣಕ್ಕೆ ಪರಿಹಾರ ನೀಡದೇ ತಾವೇ ಗುಳಂ ಮಾಡಿದ ವ್ಯವಸ್ಥಿತ ದಂಧೆವೊಂದು ಈಗ ಬಯಲಾಗಿದೆ. 

ರೈತರ ಖಾತೆಗೆ ಜಮಾ ಆಯ್ತು 7.1 ಕೋಟಿ ರು

ರಾಯಚೂರಿನಲ್ಲಿ ಬೆಳೆ ಹಾನಿಯಿಂದ ಕಂಗಾಲಾಗುವ ರೈತರಿಗೆ ಪುನಶ್ಚೇತನ ನೀಡಬೇಕಾದ ಯೋಜನೆ ಹಳ್ಳ ಹಿಡಿದಿದೆ. ರೈತರಿಗೆ ಸೇರಬೇಕಾದ ಲಕ್ಷ- ಲಕ್ಷ ರೂಪಾಯಿ ಹಣ ವಿಮಾ‌ ಕಂಪನಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಗುಳಂ ಮಾಡಿದ್ದಾರೆ. ಜಿಲ್ಲೆಯ ಸಿರವಾರ ತಾಲೂಕಿನ ಹಳ್ಳಿಹೊಸರು, ಸಣ್ಣಹೊಸೂರು, ಹಳ್ಳಿ, ಮಾಡಗಿರಿ, ಹರವಿ ಸೇರಿ ಇತರೆ ಗ್ರಾಮಗಳಲ್ಲಿ ರೈತರಿಗೆ ಮಾಹಿತಿಯಿಲ್ಲದೆ 40ಕ್ಕೂ ಹೆಚ್ಚು ರೈತರ ಪಹಣಿ ದುರ್ಬಳಕೆ ಮಾಡಿಕೊಂಡು ಸುಮಾರು 75 ಲಕ್ಷ ದಿಂದ 1ವರೆ ಕೋಟಿ ರೂಪಾಯಿ ವರೆಗೆ ಗೋಲ್ ಮಾಲ್ ನಡೆದಿದೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಸಿಬ್ಬಂದಿ ರೈತರ ಪಹಣಿ ಬಳಸಿ ವಿಮಾ ಹಣವನ್ನ ಎತ್ತುವಳಿ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಗ್ರಾಮ ಒನ್ ಕೇಂದ್ರದಲ್ಲಿ ಬಯಲಾಯ್ತು ವಿಮೆ ಗೋಲ್ಮಾಲ್!

ರೈತರು ಪ್ರತಿ ವರ್ಷ ಬೆಳೆ ವಿಮೆ ಮಾಡಿಸಿದ್ರು. ಎರಡು - ಮೂರು ವರ್ಷವಾದರೂ ವಿಮೆ ಹಣ ಬಂದಿರಲಿಲ್ಲ. ಆದ್ರೂ 2022-23ನೇ ಸಾಲಿನ ವಿಮೆ ಮಾಡಿಸಲು ರೈತರು ಗ್ರಾಮ ಒನ್ ಕೇಂದ್ರ ಸಿಬ್ಬಂದಿ ರೈತರ ವಿಮೆ ಪರಿಹಾರದ ಹಣದ ಬಗ್ಗೆ ಚೆಕ್ ಮಾಡಿದ್ದಾರೆ. ಆಗ ರೈತರ ಪಹಣಿ ಹೆಸರಿನಲ್ಲಿ ಹಣ ಜಮಾವಾಗಿದೆ. ಆದ್ರೆ ಪಹಣಿ ಹೊಂದಿರುವ ರೈತರ ಖಾತೆಗೆ ಹಣ ಜಮಾವಾಗದೇ ಬೇರೆ ಯಾರದೋ ಖಾತೆಗೆ ಹಣ ಜಮಾವಾಗಿದ್ದು ಬಯಲಾಗಿದೆ.

ಅತೀ ಹೆಚ್ಚು ಮಳೆಯಿಂದಾಗಿ ಹಳ್ಳ ಬಂದು ರೈತನ ಬೆಳೆ ಹಾಳಾಗಿತ್ತು. ಬೆಳೆಹಾನಿಯಾದ  ರೈತನ ಖಾತೆಗೆ ಹಣ ಜಮಾವಾಗಬೇಕಿತ್ತು. ಇಲ್ಲಿ ಮಾತ್ರ ರೈತನ ಬದಲಿಗೆ ಇನ್ಯಾರಿಗೂ ಹಣ ಜಮಾವಾಗಿದೆ. ಹೀಗಾಗಿ ರೈತರು ಫ್ಯೂಚರ್ ಜನರಲ್ ಇಂಡಿಯಾ ಇನ್ಸೂರೆನ್ಸ್ ಕಂಪನಿ(Future General India Insurance Company) ಹಾಗೂ ಅಧಿಕಾರಿಗಳ ವಿರುದ್ದ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಇತ್ತ ನಾವು ವಿಮೆ ಕಟ್ಟಿದಾಗ ಪರಿಹಾರ ಬಂದಿಲ್ಲ. ಈಗ ನಮ್ಮ ಜಮೀನಿನ ಮೇಲೆ ಇನ್ಯಾರೋ ಪರಿಹಾರ ಪಡೆದಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ವಿಮೆ ಹಣ ಲೂಟಿ ಮಾಡಿದವರ ವಿರುದ್ಧ ತನಿಖೆಗಾಗಿ ದೂರು ದಾಖಲು
 
2022-23ನೇ ಸಾಲಿನ ಮುಂಗಾರು ಬೆಳೆ ಅತಿಯಾದ ಮಳೆಯಿಂದ ಹಳ್ಳದ ನೀರಿಗೆ ಕೊಚ್ಚಿಹೋಗಿತ್ತು. ಆದ್ರೆ ಆಗ ಕೆಲ ರೈತರು ಬೆಳೆ ವಿಮೆ ಮಾಡಿಸಿದ್ರೆ, ಇನ್ನೂ ಕೆಲವರು ಮಾಡಿಸಿರಲಿಲ್ಲ. ಎಲ್ಲೋ ಕೆಲವರಿಗೆ ವಿಮೆ ಹಣ ಬಂದಿರುವುದು ಬಿಟ್ಟರೆ ಉಳಿದವರ ಪರಿಹಾರದ ಹಣವೇ ಬರದೇ ಗೋಲ್ ಮಾಲ್ ನಿಂದಾಗಿ ಬೇರೆಯವರ ಖಾತೆಗೆ ಹಣ ಜಮಾ ಆಗಿದೆ. ಹೀಗಾಗಿ ವಿಮೆ ಹಣ ಗೋಲ್ಮಾಲ್ ಮಾಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ರೈತರು ರಾಯಚೂರು ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ ಅವರಿಗೆ ದೂರು ನೀಡಿದ್ದಾರೆ. ರೈತರ ದೂರನ್ನ ಆಧರಿಸಿ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾದರೂ ತನಿಖೆ ಮಾತ್ರ ನಡೆಯುತ್ತಿಲ್ಲವೆಂಬುವುದು ರೈತರ ಅರೋಪವಾಗಿದೆ.

 

PMFBY: ರೈತರ ಮನೆ ಬಾಗಿಲಿಗೇ ಫಸಲ್ ಬಿಮಾ ಪಾಲಿಸಿ: ಬಿ.ಸಿ. ಪಾಟೀಲ್‌

ಒಟ್ನಲ್ಲಿ, ರೈತರು ತಮ್ಮ ಬೆಳೆಗೆ ವಿಮೆ ಮಾಡಿಸದಿದ್ದರೂ, ಖತರ್ನಾಕ್ ಕುಳಗಳು ಮಾತ್ರ ರೈತರ ಪಹಣಿ ಬಳಸಿಕೊಂಡು ವಿಮೆ ಹಣ ದೋಚಿದ್ದಾರೆ. ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕಾಗಿದೆ.

Follow Us:
Download App:
  • android
  • ios