ಕಳಸಾ ಬಂಡೂರಿ ಕಾಮಗಾರಿ ಪ್ರದೇಶಕ್ಕೆ ಗೋವಾ ಫಾರ್ವಡ್ ಪಕ್ಷದ ಅಧ್ಯಕ್ಷ ಸರದೇಸಾಯಿ ಭೇಟಿ, ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಲು ಸಿಎಂ ಸಾವಂತ್ ಮೌನ: ಆಕ್ರೋಶ
ಪಣಜಿ(ನ.18): ಗೋವಾ ಮಾಜಿ ಉಪಮುಖ್ಯಮಂತ್ರಿ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿ ಅಧ್ಯಕ್ಷ ವಿಜಯ ಸರದೇಸಾಯಿ ಅವರು ನಿನ್ನೆ(ಗುರುವಾರ) ಕರ್ನಾಟಕದ ಮಹದಾಯಿ ನದಿ (ಕಳಸಾ-ಬಂಡೂರಿ) ಪಾತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು, ‘ಕರ್ನಾಟಕವು ನದಿ ಯನ್ನು ತಿರುಗಿಸುವ ಯತ್ನ ನಡೆಸಿದೆ. ಆದರೂ ಗೋವಾ ಸರ್ಕಾರ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದು ಸುಮ್ಮನಿದೆ. ಗೋವಾ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನದಿ ತಿರುವು ಯೋಜನೆ ತಡೆಯಬೇಕು’ ಎಂದು ಆಗ್ರಹಿಸಿದರು.
ಕಳಸಾ ಬಂಡೂರಿ ಕಾಮಗಾರಿ ಸ್ಥಳವಾದ ಕಣಕುಂಬಿಗೆ ಆಗಮಿಸಿದ್ದ ಅವರು, ಕರ್ನಾಟಕ ನದಿ ತಿರುವು ಕಾಮಗಾರಿ ನಡೆಸುತ್ತಿರುವ ದ್ಯೋತಕ ಎಂದು ಹೇಳಿಕೊಂಡು ಕೆಲವು ಫೋಟೋಗಳನ್ನೂ ಬಿಡುಗಡೆ ಮಾಡಿದರು.
ಸರ್ಕಾರದಿಂದ ಮಹದಾಯಿ ಮೂಲಸ್ವರೂಪವೇ ಬದಲು: ಎನ್.ಎಚ್. ಕೋನರಡ್ಡಿ
‘ಕರ್ನಾಟಕವು ಮಹದಾಯಿ ಕಾಮಗಾರಿ ನಡೆಸುತ್ತಿದ್ದರೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುಮ್ಮನಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ಇದೆ. ಹೀಗಾಗಿ ಬಿಜೆಪಿಯನ್ನು ಅಲ್ಲಿ ಗೆಲ್ಲಿಸುವ ಸಲುವಾಗಿ ಸಾವಂತ್ ಅವರು ಕಾಮಗಾರಿಗೆ ಅವಕಾಶ ನೀಡುತ್ತಿದ್ದಾರೆ. ಕನ್ನಡ ಭವನಕ್ಕೆ ಗೋವಾದಲ್ಲಿ ಜಮೀನನ್ನೂ ನೀಡುತ್ತಿದ್ದಾರೆ. ಹೀಗೇ ಮಾಡುತ್ತ ಹೋದರೆ ಗೋವನ್ನರು ನೀರಿಗಾಗಿ ಬಾಯಿ ಬಿಡುವ ಸ್ಥಿತಿ ಎದುರಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ಬಳಿಕ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿ, ಮಧ್ಯಪ್ರವೇಶಿಸಲು ಆಗ್ರಹಿಸಿದರು.
