Asianet Suvarna News Asianet Suvarna News

ಮಾತೃ ಭಾಷೆಯಲ್ಲೇ ಮಾಹಿತಿ ಸಿಗಲಿ: ಸಿಎಂ ಬೊಮ್ಮಾಯಿ

ಮಾತೃಭಾಷೆಯಲ್ಲಿ ನಾವು ವಿಶ್ವವನ್ನು ಸಂಭಾಳಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್‌ ಮಹಾಸಂಘದ 8ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 

Get information in mother tongue says cm basavaraj bommai gvd
Author
First Published Nov 12, 2022, 10:16 AM IST

ಬೆಂಗಳೂರು (ನ.12): ಮಾತೃಭಾಷೆಯಲ್ಲಿ ನಾವು ವಿಶ್ವವನ್ನು ಸಂಭಾಳಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್‌ ಮಹಾಸಂಘದ 8ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಮಾತೃಭಾಷೆಯಲ್ಲಿನ ಕಲಿಕೆಗೆ ಅತ್ಯಂತ ಮಹತ್ವವಿದೆ. ಮಾತೃಭಾಷೆಯಲ್ಲಿಯೇ ಎಲ್ಲ ಮಾಹಿತಿ ಸಿಗುವಂತೆ ಆಗಬೇಕು. ಶಬ್ದದಿಂದ ಅಕ್ಷರ, ಅಕ್ಷರದಿಂದ ಸಾಹಿತ್ಯ, ಸಾಹಿತ್ಯದಿಂದ ಜ್ಞಾನ, ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ ಎಂಬ ಪರಿಕಲ್ಪನೆಯ ಅನುಷ್ಠಾನದಲ್ಲಿ ಮಾತೃಭಾಷೆಯ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಈ ಹಿಂದಿನ ಶತಮಾನದಲ್ಲಿ ಭೂಮಿ ಮತ್ತು ಸಂಪತ್ತು ಇದ್ದವರು ಶಕ್ತಿಶಾಲಿಯಾಗಿದ್ದರು. ಆದರೆ 21ನೇ ಶತಮಾನದಲ್ಲಿ ಜ್ಞಾನ ಇದ್ದವರೇ ಪ್ರಭಾವಿಗಳು. ಈ ಶತಮಾನದಲ್ಲಿ ಯಾರಲ್ಲಿ ಜ್ಞಾನ ಇದೆಯೋ ಅವರು ವಿಶ್ವಗುರು ಆಗುತ್ತಾರೆ. ಅದೇ ರೀತಿ ಸಮಾಜದಲ್ಲಿಯೂ ಜ್ಞಾನಕ್ಕೆ ಹೆಚ್ಚಿನ ಬೆಲೆ ಸಿಗಲಿದೆ. ಆದ್ದರಿಂದ ನಮ್ಮ ಮೌಲ್ಯಗಳನ್ನು ಗಟ್ಟಿಮಾಡಿಕೊಂಡು ಹೊಸ ಹೊಸ ಜ್ಞಾನ ಸಂಪಾದನೆ ಮಾಡಬೇಕು ಎಂದು ಹೇಳಿದರು.

ಉಚಿತ ರೈಲು ಪ್ರಯಾಣಕ್ಕೆ ಮುಗಿಬಿದ್ದ ಜನ: ಐಷಾರಾಮಿ ಸೌಕರ್ಯಕ್ಕೆ ಫಿದಾ

ನಮ್ಮಲ್ಲಿ ಗುರುವಿಗೆ ಅತ್ಯಂತ ಎತ್ತರದ ಸ್ಥಾನವಿದೆ. ಗುರುವಿಗೆ ಮನ್ನಣೆ ನೀಡದೇ ಹೋದರೆ ಆ ಕಲಿಕೆಗೂ ಮಹತ್ವ ಇಲ್ಲ. ಸರಸ್ವತಿಯ ವಾಹನ ಹಂಸ. ಶಿಕ್ಷಕರು ಸರಸ್ವತಿಯ ವಾಹನ ಇದ್ದಂತೆ. ಹಂಸ ಅತ್ಯಂತ ಶುಭ್ರ. ಹಾಗೆಯೇ ಶಿಕ್ಷಕರು ಕೂಡ ಆದರ್ಶದ ಶುಭ್ರ ಜೀವನ ನಡೆಸಬೇಕು. ಹಂಸ ಭಾರಿ ಗಾತ್ರದ ಪಕ್ಷಿಯಾದರೂ ಹೇಗೆ ಅತಿ ಎತ್ತರದಲ್ಲಿ ಹಾರುತ್ತದೆಯೋ ಆದೇ ರೀತಿ ಶಿಕ್ಷಕರು ತಮ್ಮ ಆದರ್ಶಗಳಿಂದ ಎತ್ತರದ ಸ್ಥಾನಕ್ಕೆ ಏರಬೇಕು ಎಂದು ಹೇಳಿದರು.

ಮೆಕಾಲೆ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ಯೋಚನಾಶಕ್ತಿ, ಸೃಜನಶೀಲತೆ, ಅಭಿವ್ಯಕ್ತಿಗೆ ವಿಭಿನ್ನತೆಗೆ ಅವಕಾಶ ನೀಡಿರಲಿಲ್ಲ. ಒತ್ತಾಯ ಪೂರ್ವಕವಾಗಿ ಮಾಹಿತಿ ಸಂಗ್ರಹ, ಉರು ಹೊಡೆಯುವುದಕ್ಕೆ ಮಾತ್ರ ಅವಕಾಶ ಇತ್ತು. ಆದರೆ ಇದನ್ನು ಬದಲಾಯಿಸಿ ಭಾರತೀಯ ಪರಂಪರೆಯ ಮೌಲ್ಯ, ಸಂಸ್ಕಾರ, ವ್ಯಕ್ತಿತ್ವ ವಿಕಸನ, ಗ್ರಹಿಸುವಿಕೆ, ತಾರ್ಕಿಕವಾಗಿ ಯೋಚನೆ ಮಾಡುವುದನ್ನು ಕಲಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕು. ಪರಂಪರೆಯ ಶಿಕ್ಷಣದ ಜೊತೆಗೆ ಅತ್ಯಾಧುನಿಕ ವಿಷಯಗಳ ಬಗ್ಗೆಯೂ ಮಕ್ಕಳಿಗೆ ಮಾಹಿತಿ ಸಿಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಬಿಜೆಪಿ ಕೆಂಪೇಗೌಡರ ಆಡಳಿತ ಏಕೆ ಅನುಸರಿಸುತ್ತಿಲ್ಲ: ಕಾಂಗ್ರೆಸ್‌

ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ನಾಗೇಶ್‌, ಎಸ್‌.ಟಿ.ಸೋಮಶೇಖರ್‌, ಎಬಿಆರ್‌ಎಸ್‌ಎಂ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಜಗದೀಶ್‌ ಪ್ರಸಾದ್‌ ಸಿಂಘಾಲ್‌, ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪೂರ ಹಾಜರಿದ್ದರು.

Follow Us:
Download App:
  • android
  • ios