Asianet Suvarna News Asianet Suvarna News

ಸಂಧಾನ ವಿಫಲ: ಪಂಚಮಸಾಲಿ ಮಠಾಧೀಶರಿಂದ ಪ್ರತಿಭಟನೆ, ಇಂದು ಶ್ರೀಮಠಕ್ಕೆ ಪ್ರಶಾಂತ ದೇವರು ಭೇಟಿ

ಉತ್ತರ ಕರ್ನಾಟಕದ ದೊಡ್ಡ ಮಠಗಳಲ್ಲಿ ಒಂದಾದ ಇಲ್ಲಿಗೆ ಸಮೀಪದ ಗರಗ ಮಡಿವಾಳೇಶ್ವರ ಮಠಕ್ಕೆ ನೇಮಕ ಮಾಡಲಾಗಿರುವ ಉತ್ತರಾಧಿಕಾರಿ ವಿಚಾರವಾಗಿ ವೀರಶೈವ ಪಂಚಮಸಾಲಿ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶ್ರೀಮಠಕ್ಕೆ ವೀರಶೈವ ಪಂಚಮಸಾಲಿ ಸಮುದಾಯದ ಸ್ವಾಮೀಜಿಯನ್ನೇ ಮುಂದಿನ ಉತ್ತರಾಧಿಕಾರಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

Garaga Madivaleshwar Math Negotiation failed, protest by Swamiji today at dharwad rav
Author
First Published Jul 30, 2023, 6:15 AM IST

ಧಾರವಾಡ (ಜು.30):  ಉತ್ತರ ಕರ್ನಾಟಕದ ದೊಡ್ಡ ಮಠಗಳಲ್ಲಿ ಒಂದಾದ ಇಲ್ಲಿಗೆ ಸಮೀಪದ ಗರಗ ಮಡಿವಾಳೇಶ್ವರ ಮಠಕ್ಕೆ ನೇಮಕ ಮಾಡಲಾಗಿರುವ ಉತ್ತರಾಧಿಕಾರಿ ವಿಚಾರವಾಗಿ ವೀರಶೈವ ಪಂಚಮಸಾಲಿ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶ್ರೀಮಠಕ್ಕೆ ವೀರಶೈವ ಪಂಚಮಸಾಲಿ ಸಮುದಾಯದ ಸ್ವಾಮೀಜಿಯನ್ನೇ ಮುಂದಿನ ಉತ್ತರಾಧಿಕಾರಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಈ ಮೊದಲು ಪೀಠಾಧಿಪತಿಗಳಾಗಿದ್ದ ಚನ್ನಬಸವ ಸ್ವಾಮೀಜಿ(Channabasavara swamiji) ಲಿಂಗೈಕ್ಯಕ್ಕೂ ಮುಂಚೆ ಎರಡು ವರ್ಷಗಳ ಹಿಂದೆಯೇ ಶ್ರೀಮಠದ ಟ್ರಸ್ಟ್‌ ಜಂಗಮ ಸಮಾಜದ ಪ್ರಶಾಂತ ದೇವರು ಎಂಬುವರನ್ನು ಉತ್ತರಾಧಿಕಾರಿಯಾಗಿ ಮಾಡಲು ನಿರ್ಧಾರ ತೆಗೆದುಕೊಂಡಿತ್ತು. ಇದೀಗ ಹಿರಿಯ ಸ್ವಾಮೀಜಿ ನಿಧನ ನಂತರ ಮಠಕ್ಕೆ ಪ್ರಶಾಂತ ದೇವರು ಅವರನ್ನು ಪೀಠಾಧಿಪತಿ ಮಾಡಲು ಟ್ರಸ್ಟ್‌ ಮುಂದಾಗಿದ್ದು, ಅಂತೆಯೇ, ಜುಲೈ 30ರಂದು ಸ್ವಾಮೀಜಿ ಅವರನ್ನು ಬರಮಾಡಿಕೊಳ್ಳಲು ಎಲ್ಲ ರೀತಿಯ ಸಿದ್ಧತೆ ಸಹ ನಡೆಸಿದೆ.

Dharwad: ಗರಗ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

ಈ ಹಿನ್ನೆಲೆಯಲ್ಲಿ ವೀರಶೈವ ಪಂಚಮಸಾಲಿ ಮಠಾಧೀಶರು ಯಾವುದೇ ಕಾರಣಕ್ಕೂ ಮಠಕ್ಕೆ ಜಂಗಮ ಸ್ವಾಮೀಜಿ ಬೇಡ. ಪಂಚಮಸಾಲಿ ಸ್ವಾಮೀಜಿಯನ್ನೇ ನೇಮಿಸಬೇಕು ಎಂದು ಶ್ರೀಮಠದ ಎದುರು ಶನಿವಾರ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಮಾಜದ ಮಠಾಧೀಶರು ಪ್ರತಿಭಟನೆ ಸಹ ನಡೆಸಿದರು.

ಕಾನೂನು ಮೊರೆ ಹೋಗುತ್ತೇವೆ:

ಶ್ರೀಮಠಕ್ಕೆ ಹಿಂದಿನಿಂದಲೂ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳನ್ನೇ ಉತ್ತರಾಧಿಕಾರಿಯಾಗಿ ಮಾಡಲಾಗಿದೆ. ಇದು ಮಠದ ಕಾನೂನು ಸಹ ಹೌದು. ಇತ್ತೀಚೆಗೆ ದೇಸಾಯಿ ಮನೆತನದವರು ಟ್ರಸ್ಟ್‌ನ ಬಹುತೇಕ ಟ್ರಸ್ಟಿಗಳಾಗಿದ್ದು ತಮಗೆ ಬೇಕಾದವರನ್ನು ಸ್ವಾಮೀಜಿ ಮಾಡಲು ಹೊರಟಿದ್ದಾರೆ. ಒಂದು ವೇಳೆ ಪ್ರಶಾಂತ ದೇವರು ಅವರನ್ನೇ ಉತ್ತರಾಧಿಕಾರಿ ಮಾಡಿದರೆ ಈ ಪ್ರಕ್ರಿಯೆ ತಡೆಯುವುದಲ್ಲದೇ ಕಾನೂನು ಮೊರೆ ಸಹ ಹೋಗುತ್ತೇವೆ ಎಂದು ಬೆಂಗಳೂರಿನ ಸಿದ್ಧಾರೂಢ ಮಠದ ಆರೂಢ ಭಾರತಿ ಸ್ವಾಮೀಜಿ, ಸಿದ್ಧಲಿಂಗ ದೇವರು, ಶಿವಶಂಕರ ಶಿವಾಚಾರ್ಯರು, ಗುರುಬಸವ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ ಸೇರಿದಂತೆ ಹಲವಾರು ಪಂಚಮಸಾಲಿ ಸ್ವಾಮೀಜಿಗಳು ಎಚ್ಚರಿಸಿದರು.

ನಾವು ಹಿಂದೆ ಸರಿಯುವುದಿಲ್ಲ:

ಈ ಕುರಿತು ಶ್ರೀಮಠದಲ್ಲಿ ನಡೆದ ಸ್ವಾಮೀಜಿಗಳ ಹಾಗೂ ಟ್ರಸ್ಟ್‌ ಸಭೆಯಲ್ಲಿ ಮಠದ ಟ್ರಸ್ಟ್‌ ಕಾನೂನು ಪ್ರಕಾರವೇ ಸ್ವಾಮೀಜಿ ನೇಮಕ ಮಾಡಿದೆ. ಹಂಗರಕಿ, ಗರಗ ಗ್ರಾಮದ ಹಿರಿಯರೆಲ್ಲರೂ ಸೇರಿ ಉತ್ತರಾಧಿಕಾರಿಯನ್ನಾಗಿ ಪ್ರಶಾಂತ ದೇವರು ಅವರನ್ನು ಮಾಡಲಾಗಿದೆ. ಎರಡು ವರ್ಷಗಳಿಂದ ಯಾವುದೇ ಆಕ್ಷೇಪಗಳೂ ಬಂದಿಲ್ಲ. ಚನ್ನಬಸವ ಸ್ವಾಮೀಜಿ ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಗಳನ್ನು ಕರೆತರುವಾಗ ಈ ರೀತಿ ವಿರೋಧ ಮಾಡುವುದು ಸರಿಯಲ್ಲ. ಎರಡೂ ಗ್ರಾಮದವರು ಸೇರಿ ಟ್ರಸ್ಟ್‌ ರಚನೆ ಮಾಡಲಾಗಿದೆ. ನಮ್ಮದು ಜಾತ್ಯತೀತ ಮಠ. ಯಾವುದೇ ಧರ್ಮದವರು ಪೀಠಾಧಿಪತಿ ಆಗಬಹುದು. ಹೀಗಾಗಿ, ಕಾನೂನು ಬದ್ಧವಾಗಿ ಉತ್ತರಾಧಿಕಾರಿ ನೇಮಕದ ಹಿನ್ನೆಲೆಯಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಟ್ರಸ್ಟ್‌ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಸಭೆ ವಿಫಲವಾಯಿತು.

 

ಧಾರವಾಡದಲ್ಲಿ ತೀವ್ರವಾಗಿ ಹಬ್ಬುತ್ತಿದೆ ಮದ್ರಾಸ್‌ ಐ!

ಇದಾದ ಬಳಿಕ ಪಂಚಮಸಾಲಿ ಮಠಾಧೀಶರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಟ್ರಸ್ಟ್‌ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು. ಶ್ರೀಮಠದಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಗರಗ ಪೊಲೀಸರು ಸೂಕ್ತ ಬಂದೋಬಸ್‌್ತ ವಹಿಸಿದ್ದರು. ಜುಲೈ 30ರ ಭಾನುವಾರ ಪ್ರಶಾಂತ ದೇವರು ಉತ್ತರಾಧಿಕಾರಿಯಾಗಿ ಬರಲಿದ್ದು ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.

Follow Us:
Download App:
  • android
  • ios