ನೆರೆ ಪರಿಹಾರ: ಬಿಎಸ್ವೈ, ಸಿದ್ದು ವಾಕ್ಸಮರ, ಇಬ್ಬರು ಹೇಳಿದ್ದಿಷ್ಟು
ಉತ್ತರ ಕರ್ನಾಟಕದಲ್ಲಿ ವರುಣ ತೋರಿದ ಆರ್ಭಟಕ್ಕೆ ಜನರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರಕಾರವೂ ರಾಜ್ಯದ ಕಡೆಗೆ ನಿರ್ಲಕ್ಷ್ಯ ತೋರಿದ್ದು, ಅಂತೂ ಇಂತೂ ತುಸು ಪರಿಹಾರ ಬಿಡುಗಡೆ ಮಾಡಿದೆ. ಆದರೆ, ಅದರ ಹಂಚಿಕೆ ಬಗ್ಗೆ ಇನ್ನೂ ಮುಗಿದಿಲ್ಲ ಪ್ರತಿಪಕ್ಷಗಳ ಆರೋಪ.
3 ತಿಂಗಳಾದರೂ ನೆರೆ ಪರಿಹಾರ ಕೊಡದ ಸರ್ಕಾರ ಸತ್ತಿದೆ: ಸಿದ್ದು
ಬೆಳಗಾವಿ (ಅ.29): ನೆರೆ ಪರಿಹಾರ ಹಂಚಿಕೆ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನೆರೆ ಬಂದು ಮೂರು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ ಎಂದರೆ ಸರ್ಕಾರ ಸತ್ತು ಹೋಗಿದೆ ಎಂದು ಟೀಕಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನೆರೆ ಹಾಗೂ ಪ್ರವಾಹದಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತು ಸಾವಿರ ಪರಿಹಾರ ನೀಡಿರುವುದನ್ನು ಬಿಟ್ಟರೆ ಉಳಿದ ಯಾರಿಗೂ ನಯಾ ಪೈಸೆ ಪರಿಹಾರ ನೀಡಿಲ್ಲ. ಒಂದು ಮನೆಯಲ್ಲಿ ಇಬ್ಬರು, ಮೂವರು ಜನ ಇರುವ ಸಹೋದರರಿಗೆ ಸರಿಯಾಗಿ ಪರಿಹಾರ ಹಂಚಿಕೆ ಮಾಡಿಲ್ಲ. ಪರಿಹಾರವನ್ನೇ ಕೊಟ್ಟಿಲ್ಲ. ಹತ್ತು ಸಾವಿರ ರು. ಪರಿಹಾರದ ಲಿಸ್ಟೇ ಆಗಿಲ್ಲ. ಬೆಳೆ ಪರಿಹಾರ ಇಲ್ಲ, ಶಾಲೆಗಳನ್ನು ದುರಸ್ತಿ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.
ಸದನ ನಡೆಸಿ ಅಂದರೆ ಸಂತ್ರಸ್ತರ ಕಡೆ ಹೋಗಬೇಕೆಂದು ತರಾತುರಿಯಲ್ಲಿ ಅಧಿವೇಶನ ನಡೆಸಿದರು. ಬಿಜೆಪಿ ಸರ್ಕಾರ ಜನವಿರೋಧಿ ಹಾಗೂ ಕೆಟ್ಟಸರ್ಕಾರ. ಜನರ ಕಷ್ಟಅರಿಯುವ ಮನಸ್ಸು ಇಲ್ಲದ ಬಿಜೆಪಿ ನಾಯಕರು ಟಿಕೆಟ್ ಹಂಚಿಕೆ ಮಾಡುವುದಕ್ಕೆ ಹುಬ್ಬಳ್ಳಿಗೆ ಬರುತ್ತಾರೆ ಎಂದು ಕಿಡಿಕಾರಿದರು. ರಾಜ್ಯದ ಉಪಚುನಾವಣೆಯಲ್ಲಿ ಜನ ಬಿಜೆಪಿಯವರಿಗೆ ಪಾಠ ಕಲಿಸುತ್ತಾರೆ. ರಾಜ್ಯದ ಜವಾಬ್ದಾರಿ ತೆಗೆದುಕೊಂಡ ಮೇಲೆ ಸಮರ್ಪಕವಾಗಿ ನಿಭಾಯಿಸಬೇಕು. ಅದು ಬಿಜೆಪಿಯವರಿಗೆ ಕಷ್ಟಸಾಧ್ಯವಾಗುತ್ತದೆ ಎಂದರು.
ಇನ್ನೆರಡು ದಿನ ಕರಾವಳಿ, ಮಲೆನಾಡಿಲ್ಲಿ ಮತ್ತೆ ಮಳೆ
ಬಿಎಸ್ವೈ ಟಾಂಗ್:
ಪ್ರವಾಹ ಪೀಡಿತರಿಗೆ ನ್ಯಾಯ ಸಮ್ಮತವಾಗಿ ಪರಿಹಾರ ನೀಡಿದ್ದರೂ, ಸರಕಾರವನ್ನು ದೂಷಿಸುತ್ತಿರುವುದು ಸರಿಯಿಲ್ಲ. ಈಗಾಗಲೇ 1 ಲಕ್ಷ ಮಂದಿಗೆ ಪರಿಹಾರ ನೀಡಲಾಗಿದೆ, ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
"