ರಾಜ್ಯ ಸರ್ಕಾರವು ಡಿ.ಕೆ.ಶಿವಕುಮಾರ್‌ ಅವರ ಪ್ರಕರಣದ ತನಿಖೆಯನ್ನು ಸಿಬಿಐನಿಂದ ವಾಪಸ್‌ ಪಡೆದಿರುವುದು ಅಕ್ಷಮ್ಯ ಅಪರಾಧ. ಶಿವಕುಮಾರ್‌ ಅವರನ್ನು ರಕ್ಷಿಸಲು ಕಾನೂನು ಬಾಹಿರ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ದಾಖಲೆ ಸಮೇತ ಬೆಳಗಾವಿ ಅಧಿವೇಶನದಲ್ಲಿ ಪಕ್ಷದ ಶಾಸಕರು ಮಾತನಾಡುತ್ತಾರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 

ಬೆಂಗಳೂರು(ನ.25): ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಪತ್ರದ ಆಧಾರದ ಮೇಲೆ ಮತ್ತು ರಾಜ್ಯದ ಅಡ್ವೋಕೇಟ್‌ ಜನರಲ್‌ ಒಪ್ಪಿಗೆಯ ಮೇರೆಗೇ ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ವಹಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಡಿ.ಕೆ.ಶಿವಕುಮಾರ್‌ ಅವರ ಪ್ರಕರಣದ ತನಿಖೆಯನ್ನು ಸಿಬಿಐನಿಂದ ವಾಪಸ್‌ ಪಡೆದಿರುವುದು ಅಕ್ಷಮ್ಯ ಅಪರಾಧ. ಶಿವಕುಮಾರ್‌ ಅವರನ್ನು ರಕ್ಷಿಸಲು ಕಾನೂನು ಬಾಹಿರ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ದಾಖಲೆ ಸಮೇತ ಬೆಳಗಾವಿ ಅಧಿವೇಶನದಲ್ಲಿ ಪಕ್ಷದ ಶಾಸಕರು ಮಾತನಾಡುತ್ತಾರೆ ಎಂದು ತಿಳಿಸಿದರು.

ಡಿಕೆಶಿ ಕೇಸ್‌: ಒಬ್ಬ ಭ್ರಷ್ಟ ಆರೋಪಿಯ ಪರ ಇಡೀ ಸಂಪುಟ ನಿಂತಿದೆ, ಸಿ.ಟಿ.ರವಿ

ಈಗಿನ ಸರ್ಕಾರ ತನ್ನ ನಿಲುವು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಪ್ರಕರಣದ ತನಿಖೆಯನ್ನು ವಾಪಸ್‌ ಪಡೆದಿರುವ ಸರ್ಕಾರದ ಕ್ರಮವನ್ನು ಜನತೆ ಒಪ್ಪುವುದಿಲ್ಲ. ರಾಜ್ಯದ ಜನತೆಯ ಕ್ಷಮೆಯನ್ನು ಮುಖ್ಯಮಂತ್ರಿಗಳು ಕೇಳಬೇಕು ಎಂದು ಆಗ್ರಹಿಸಿದರು.

ಅಡೋಕೇಟ್‌ ಜನರಲ್‌ ಒಪ್ಪಿಗೆ ಇಲ್ಲದೆ ಕಾನೂನು ಬಾಹಿರವಾಗಿ ಸಿಬಿಐ ತನಿಖೆಗೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಆದರೆ, ವಾಸ್ತವವಾಗಿ ಜಾರಿ ನಿರ್ದೇಶನಾಲಯ ಬರೆದ ಪತ್ರದ ಆಧಾರದ ಮೇಲೆ ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಪಡೆದು ಸಿಬಿಐಗೆ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಇ.ಡಿ. ಸಂಸ್ಥೆಯು ರಾಜ್ಯ ಸರ್ಕಾದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಡಿ.ಕೆ.ಶಿವಕುಮಾರ್‌ ಆಸ್ತಿ ಸಂಪಾದನೆಯಲ್ಲಿ ಅಕ್ರಮ ಎಸಗಿದ್ದು, ನಿಬಂಧನೆಗಳನ್ನು ಉಲ್ಲಂಘನೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು. ಇದರ ಬಗ್ಗೆ ಅಡೋಕ್ವೇಟ್‌ ಜನರಲ್‌ ಬಳಿಕ ಚರ್ಚಿಸಿ ಅಭಿಪ್ರಾಯವನ್ನು ಪಡೆದುಕೊಳ್ಳಲಾಗಿತ್ತು. ಅವರ ಅಭಿಪ್ರಾಯದ ಮೇರೆಗೆ ಸಿಬಿಐಗೆ ನೀಡಬಹುದು ಎಂದು ಹೇಳಿದ್ದರಿಂದ ಪ್ರಕರಣವನ್ನು ಸಿಬಿಐ ನೀಡುವಂತೆ ಕ್ರಮ ಕೈಗೊಳ್ಳಲಾಯಿತು ಎಂದು ವಿವರಿಸಿದರು.

ಕ್ಯಾಬಿನೆಟ್ ಡಿಕೆಶಿ ಪಾದದಡಿ ಇದೆ: ಕುಮಾರಸ್ವಾಮಿ ಕಿಡಿ

ಪ್ರಕರಣದ ತನಿಖೆ ಇದೀಗ ಪ್ರಗತಿಯಲ್ಲಿದೆ. ಸರ್ಕಾರ ನಡೆಯನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಈ ವೇಳೆ ಅಡ್ವೋಕೇಟ್‌ ಜನರಲ್‌ ಸಮರ್ಥಿಸಿಕೊಂಡಿದ್ದರು. ಹೀಗಾಗಿ ಹೈಕೋರ್ಟ್‌ ಶಿವಕುಮಾರ್‌ ಅವರ ಅರ್ಜಿಯನ್ನು ವಜಾಗೊಳಿಸಿತ್ತು ಎಂದರು

ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟ ಸದಸ್ಯರ ಜತೆ ಗುಟ್ಟಾಗಿ ಸಭೆ ನಡೆಸಿ ಪ್ರಕರಣವನ್ನು ವಾಪಸ್‌ ಪಡೆದುಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ಪುನರ್‌ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.