ಕರ್ನಾಟಕಕ್ಕೆ ಬೇಡಿಕೆಯಷ್ಟು ವಿದ್ಯುತ್: ಕೇಂದ್ರ ಸಚಿವ ಆರ್.ಕೆ.ಸಿಂಗ್
ಬೇಡಿಕೆಗೆ ತಕ್ಕಂತೆ ಪೂರೈಕೆ ಮತ್ತು ಅಗತ್ಯ ವಿದ್ಯುತ್ ಪೂರೈಕೆಗಾಗಿ ದೇಶದ ಎಲ್ಲೆಡೆ ಸಾಮರ್ಥ್ಯ ವೃದ್ಧಿಸುವ ಯೋಜನೆಗಳು ಪ್ರಗತಿಯಲ್ಲಿವೆ: ಕೇಂದ್ರ ಇಂಧನ, ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್
![Electricity as much as the demand for Karnataka Says Union Minister RK Singh grg Electricity as much as the demand for Karnataka Says Union Minister RK Singh grg](https://static-ai.asianetnews.com/images/01hjw5knpw7hjzy5vs6w13npr6/1xnzpp-a-400x400_363x203xt.jpg)
ಬೆಂಗಳೂರು(ಡಿ.30): ವಿದ್ಯುತ್ ಬೇಡಿಕೆ ಏರಿಕೆಯಾದರೂ, ಕೊರತೆ ಎದುರಿಸಿದರೂ ಅದನ್ನು ಈಡೇರಿಸುವ, ಪೂರೈಸುವ ಜವಾಬ್ದಾರಿ ನಮ್ಮದಾಗಿದ್ದು. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಕೇಂದ್ರ ಇಂಧನ, ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.
ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್ಆರ್) ₹23 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್ ಆವರಣದಲ್ಲಿ ನಿರ್ಮಿಸಿರುವ 270 ಹಾಸಿಗೆಯ ಸುಸಜ್ಜಿತ ‘ವಿಶ್ರಾಮ ಸದನ’ವನ್ನು ಉದ್ಘಾಟಿಸಿ ಮಾತನಾಡಿದರು.
ರಾಯಚೂರು: ವೈಟಿಪಿಎಸ್ ಒಂದನೇ ಘಟಕ, ವಿದ್ಯುತ್ ಉತ್ಪಾದನೆಯ ಶತಕದ ಸಾಧನೆ..!
‘ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾಗಿರುವುದು ಉತ್ತಮ ಬೆಳವಣಿಗೆ. ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. 2014ರಲ್ಲಿ ದೇಶದಲ್ಲಿ 136 ಸಾವಿರ ಮೆಗಾವ್ಯಾಟ್ ವಿದ್ಯುತ್ಗೆ ಬೇಡಿಕೆ ಇತ್ತು, ಈಗ ಅದು 243 ಸಾವಿರ ಮೆಗಾವ್ಯಾಟ್ಗೆ ತಲುಪಿದೆ. ಕಳೆದ 9 ವರ್ಷಗಳಲ್ಲಿ ಇಂಧನ ಬೇಡಿಕೆ ಶೇ.70ರಷ್ಟು ಏರಿಕೆಯಾಗಿದೆ. ಇದು ನಮ್ಮ ದೇಶದ ಆರ್ಥಿಕತೆ ಚೆನ್ನಾಗಿ ಬೆಳೆಯುತ್ತಿರುವುದರ ಸಂಕೇತವಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮತ್ತು ಅಗತ್ಯ ವಿದ್ಯುತ್ ಪೂರೈಕೆಗಾಗಿ ದೇಶದ ಎಲ್ಲೆಡೆ ಸಾಮರ್ಥ್ಯ ವೃದ್ಧಿಸುವ ಯೋಜನೆಗಳು ಪ್ರಗತಿಯಲ್ಲಿವೆ’ ಎಂದು ಸಚಿವರು ಹೇಳಿದರು.
‘ನವೀಕರಿಸಬಹುದಾದ ಮೂಲಗಳಿಂದ 99,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆ ಪ್ರಗತಿಯಲ್ಲಿದೆ. ಹೈಡ್ರೋ ಮೂಲಕ 18 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರಗಳು ನಿರ್ಮಾಣ ಹಂತದಲ್ಲಿದ್ದು, ಹೆಚ್ಚುವರಿಯಾಗಿ 24 ಸಾವಿರ ಮೆಗಾವ್ಯಾನ್ ಸಾಮರ್ಥ್ಯದ ಯೋಜನೆಗಳನ್ನು ಸೇರಿಸಲಾಗಿದೆ. ಅಲ್ಲದೇ, 80,000 ಮೆಗಾವ್ಯಾಟ್ ಸಾಮರ್ಥ್ಯದ ನ್ಯೂಕ್ಲಿಯರ್ ವಿದ್ಯುತ್ ಯೋಜನೆಗಳು, 27,000 ಮೆಗಾವ್ಯಾಟ್ ಥರ್ಮಲ್ ವಿದ್ಯುತ್ ಯೋಜನೆಗಳು ಪ್ರಗತಿಯಲ್ಲಿವೆ. ವಾರ್ಷಿಕ ವಿದ್ಯುತ್ ಬೇಡಿಕೆ ಹೆಚ್ಚಳ ದರ ಶೇ.10ರಷ್ಟು ಇದೆ’ ಎಂದು ತಿಳಿಸಿದರು.
ರೈತರಿಗೆ ಕನಿಷ್ಠ 7 ಗಂಟೆ ವಿದ್ಯುತ್ ಪೂರೈಸಲು ಸೂಚನೆ
ವಿಶ್ರಾಮ ಸದನದ ಕುರಿತು ಮಾತನಾಡಿದ ಅವರು, ‘ದೇಶದ ನಾನಾ ಭಾಗಗಳಿಂದ ಬಡ ಜನರು ನಿಮ್ಹಾನ್ಸ್ಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ರೋಗಿಗಳ ಜೊತೆಗೆ ಕುಟುಂಬದವರು ಇರುತ್ತಾರೆ. ವಸತಿಗಾಗಿ ಬೆಂಗಳೂರಿನಲ್ಲಿ ದುಬಾರಿ ವೆಚ್ಚ ಮಾಡಲು ಕಷ್ಟವಾಗುತ್ತದೆ. ಹೀಗಾಗಿ, ವಿಶ್ರಾಮ ಸದನ ನಿರ್ಮಿಸಲಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹಿಂಜರಿಯಬಾರದು. ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದೆ’ ಎಂದು ಹೇಳಿದರು.
ಆನ್ಲೈನ್ ಮೂಲಕ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಸದ ತೇಜಸ್ವಿ ಸೂರ್ಯ, ನಿಮ್ಹಾನ್ಸ್ ನಿರ್ದೇಶಕಿ ಡಾ। ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.
ಕೇಂದ್ರದ ಸ್ಪಂದನೆಗೆ ಸಚಿವರ ಧನ್ಯವಾದ
ವಿದ್ಯುತ್ ಬೇಡಿಕೆ ಹೆಚ್ಚಳ ಮತ್ತು ಮನ್ಸೂನ್ ಕೈಕೊಟ್ಟು ರಾಜ್ಯದಲ್ಲಿ ತೀವ್ರ ವಿದ್ಯುತ್ ಕೊರತೆ ಎದುರಾಗಿರುವ ಬಗ್ಗೆ ಕೇಂದ್ರ ಸರಕಾರಕ್ಕೆ ತಿಳಿಸಿ, ವಿದ್ಯುತ್ ಪೂರೈಸಲು ಮನವಿ ಸಲ್ಲಿಸಿದ ಕೂಡಲೇ ಸ್ಪಂದಿಸಲಾಗಿದೆ. ಇದರಿಂದಾಗಿ ಕೃಷಿ ಹೊರತುಪಡಿಸಿ ಬೇರೆ ವಲಯಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸಾಧ್ಯವಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೇಂದ್ರ ಸಚಿವರಿಗೆ ಧನ್ಯವಾದ ಹೇಳಿದರು. ಪವರ್ಗ್ರಿಡ್ನಂತೆ ಕೆಪಿಟಿಎಸ್ಎಲ್ನಿಂದಲೂ ಸಿಎಸ್ಆರ್ ನಿಧಿ ಬಳಸಿ ಉತ್ತಮ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು.