ವಿಜಯಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಆದೇಶದಿಂದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್‌ಗೆ ಹಿನ್ನಡೆಯಾಗಿದೆ.

ವಿಜಯಪುರ (ಫೆ.14): ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್‌ಗೆ ಸುಪ್ರೀಂ ಅಂಗಳದಲ್ಲೂ ಮುಖಭಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋದರೆ ಅಲ್ಲೂ ಮುಖಭಂಗ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯತ್ನಾಳ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಹಮೀದ್ ಮುಶ್ರೀಫ್ ಎಲೆಕ್ಷನ್ ಪಿಟಿಷನ್ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕಲಬುರ್ಗಿ ಹೈಕೋರ್ಟ್ ಪೀಠವು, ಕಳೆದ 2025ರ ಜುಲೈ 18 ರಂದೇ ಅರ್ಜಿಯನ್ನು ವಜಾಗೊಳಿಸಿ ಹಮೀದ್ ಅವರಿಗೆ ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಮೀದ್ ಮುಶ್ರೀಫ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದು, ರಿವ್ಯೂ ಪಿಟಿಷನ್ ಅನ್ನೂ ವಜಾಗೊಳಿಸುವ ಮೂಲಕ ಕಾಂಗ್ರೆಸ್ ನಾಯಕನಿಗೆ ಹಿನ್ನಡೆಯಾಗಿದೆ.

'ಸತ್ಯಮೇವ ಜಯತೆ' ಎಂದ ಶಾಸಕ ಯತ್ನಾಳ್

ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟ್ವಿಟರ್ (X) ನಲ್ಲಿ'ಸತ್ಯಮೇವ ಜಯತೆ' ಎಂದು ಪೋಸ್ಟ್ ಮಾಡಿದ್ದಾರೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ವಿಜಯಪುರದ ಜನತೆ ಸದಾ ನನ್ನೊಂದಿಗಿದ್ದಾರೆ ಎಂಬ ಅಚಲ ವಿಶ್ವಾಸ ನನಗಿದೆ ಎಂದು ಬರೆದುಕೊಂಡಿದ್ದಾರೆ. ಕಾನೂನು ಹೋರಾಟದ ಹೆಸರಿನಲ್ಲಿ ತನ್ನ ಇಮೇಜ್‌ಗೆ ಧಕ್ಕೆ ತರಲು ಯತ್ನಿಸಿದವರಿಗೆ ನ್ಯಾಯಾಲಯವೇ ತಕ್ಕ ಪಾಠ ಕಲಿಸಿದೆ ಎಂದು ಯತ್ನಾಳ್ ಗುಡುಗಿದ್ದಾರೆ.

ರಾಜಕೀಯ ನಿರುದ್ಯೋಗಿಗಳಿಗೆ ದಂಡದ ಬಿಸಿ!

ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು 'ರಾಜಕೀಯ ನಿರುದ್ಯೋಗಿ' ಎಂದು ಜರೆದಿರುವ ಯತ್ನಾಳ್, ಅನಗತ್ಯವಾಗಿ ನ್ಯಾಯಾಲಯದ ಸಮಯ ವ್ಯರ್ಥ ಮಾಡುವವರಿಗೆ ಕೋರ್ಟ್ ದಂಡ ವಿಧಿಸುವ ಮೂಲಕ ಸರಿಯಾದ ಕ್ರಮ ಜರುಗಿಸಿದೆ ಎಂದಿದ್ದಾರೆ. ಪದೇ ಪದೇ ಅರ್ಜಿ ಸಲ್ಲಿಸಿ ರಾಜಕೀಯ ಲಾಭ ಪಡೆಯಲು ನಡೆಸಿದ ಷಡ್ಯಂತ್ರ ಈಗ ಬಯಲಾಗಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಎಂದಿಗೂ ಹೆದರುವುದಿಲ್ಲ ಎಂದು ಅವರು ಖಡಕ್ ಸಂದೇಶ ರವಾನಿಸಿದ್ದಾರೆ.

ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಎಚ್ಚರಿಕೆ

ಕೇವಲ ಜಯದ ಸಂಭ್ರಮಕ್ಕೆ ಸೀಮಿತವಾಗದ ಯತ್ನಾಳ್, ತಮ್ಮ ಮೇಲೆ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತ ಆರೋಪ ಮಾಡಿದವರ ವಿರುದ್ಧ ಈಗ ಕಾನೂನು ಸಮರ ಸಾರಲು ಸಜ್ಜಾಗಿದ್ದಾರೆ. ಸುಳ್ಳು ಆರೋಪ ಹೊರಿಸಿದವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ತಿಳಿಸುವ ಮೂಲಕ ಮುಂದಿನ ದಿನಗಳಲ್ಲಿ ಹಮೀದ್ ಮುಶ್ರೀಫ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗುವ ಮುನ್ಸೂಚನೆ ನೀಡಿದ್ದಾರೆ.

YouTube video player