ರಾಜ್ಯ ಬಜೆಟ್ ಅಭಿವೃದ್ಧಿ ಶೂನ್ಯ ಮತ್ತು ಸಾಲದ ಸುಳಿಗೆ ಸಿಲುಕಿಸಲಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 80 ಸಾವಿರ ಕೋಟಿ ಪಾಲು ಬಾರದ ಕಾರಣ ಸಾಲ ಮಾಡಬೇಕಾಗಿದೆ ಎಂದ ಅವರು, ಪ್ರಧಾನಿ ಮೋದಿ ಮಾಡಿದ 200 ಲಕ್ಷ ಕೋಟಿ ಸಾಲದ ಬಗ್ಗೆಯೂ ಪ್ರಶ್ನಿಸಿದ್ದಾರೆ.
ಬೀದರ್ (ಮಾ.7): ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ ಅಭಿವೃದ್ಧಿ ಶೂನ್ಯ, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಲಿದೆ ಎಂಬ ವಿರೋಧ ಪಕ್ಷಗಳು ಆರೋಪ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯವರಿಗೆ ದೇಶ, ರಾಜ್ಯ ಹೇಗೆ ನಡೆಸಬೇಕು ಅನ್ನೋದು ಗೊತ್ತಿಲ್ಲ
ಬಜೆಟ್ ಕುರಿತು ವಿರೋಧ ಪಕ್ಷಗಳ ಆರೋಪಕ್ಕೆ ಬೀದರ್ನಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರಿಗೆ ದೇಶ ಮತ್ತು ರಾಜ್ಯವನ್ನ ಆರ್ಥಿಕವಾಗಿ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ ಎಂದು ಹರಿಹಾಯ್ದರು. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ. ಕೇಂದ್ರ ಸರ್ಕಾರ ನಮ್ಮ 80 ಸಾವಿರ ಕೋಟಿ ಪಾಲನ್ನ ಇನ್ನುವರೆಗೆ ನೀಡಿಲ್ಲ, ಅದೇ ಕಾರಣಕ್ಕೆ ನಾವು ಸಾಲ ಮಾಡುವಂತಾಗಿದೆ. JJM ಯೋಜನೆ ಕೇಂದ್ರದ ಪಾಲಾದ 15 ಸಾವಿರ ಕೋಟಿಯನ್ನು ನಾವೇ ಕೊಟ್ಟಿದ್ದೇವೆ. ಪಂಚಾಯ್ತಿಗೆ ಕೊಡಬೇಕಾದ 15ನೇ ಹಣಕಾಸಿನ ಪಾಲನ್ನು ಕೂಡಾ ಕೇಂದ್ರ ನೀಡಿಲ್ಲ. ರಾಜ್ಯಕ್ಕೆ ಬರಬೇಕಾದ ಪಾಲು ಬಿಡಿ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳಿಗೆ ನಾವೇ ಅನುದಾನ ಕೊಡುತ್ತಿದ್ದೇವೆ ಎಂದರು.
ಮೋದಿ ಸಾಲ ಮಾಡಿಲ್ವಾ?
ಬಿಜೆಪಿಯವರು ನಾವು ಸಾಲ ಮಾಡಿದ್ದನ್ನು ಹೇಳ್ತಾರೆ. ಆದರೆ ಮೋದಿಯವರು 200 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರು ಕೂಡ ಸಾಲ ಮಾಡಿದ್ದಾರೆ. ಬಿಜೆಪಿಯವರು ಇದಕ್ಕೆ ಏನು ಹೇಳ್ತಾರೆ? ಕೇಂದ್ರ ಸರ್ಕಾರ ಸಾಲದಲ್ಲಿ ನಡೆಯುತ್ತಿದೆ. ಸಾಲದಿಂದ ದೇಶ ನಡೆಸಲಿಕ್ಕೆ ಮೋದಿ ಒಬ್ಬರೇ ಬೇಕಾ? ಎಂದು ಪ್ರಶ್ನಿಸಿದರು.
ಬಿಜೆಪಿಯವರನ್ನ ದೇವರೇ ಕಾಪಾಡಬೇಕು
ಬಿಜೆಪಿಯವರು ತಲೆಬುಡ ಇಲ್ಲದೆ ಮಾತನಾಡ್ತಾರೆ. ಚಿಕ್ಕಮಕ್ಕಳು ಸಹ ಬಿಜೆಪಿಯವರಂತೆ ಮಾತನಾಡಲ್ಲ. ಅವರನ್ನ ದೇವರೇ ಕಾಪಾಡಬೇಕು ಎಂದು ಲೇವಡಿ ಮಾಡಿದರು. ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ 'ಫೋನ್ ಟ್ಯಾಪಿಂಗ್' ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿಯವರು ದಿನಾ ಬೆಳಗಾದರೆ ಅಮಿತ್ ಶಾ
ಪಕ್ಕಾನೇ ಕೂತ್ಕೋತಾರೆ. ಫೋನ್ ಟ್ಯಾಪಿಂಗ್ ಆಗಿದ್ರೆ ತನಿಖೆ ಮಾಡಲಿಕ್ಕೆ ಒತ್ತಾಯ ಮಾಡಲಿ, ಸಾಕ್ಷಿಗಳನ್ನ ಕೊಡಲಿ. ಅದುಬಿಟ್ಟು ಯಾವಾಗಲೂ ಹಿಟ್ ಅಂಡ್ ರನ್ ರೀತಿ ಮಾಡುವುದು ಕುಮಾರಸ್ವಾಮಿಯವರಿಗೆ ಘನತೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.
ಗ್ಯಾರಂಟಿಯಿಂದ ಅನುದಾನ ಕಡಿತ ಬಿಜೆಪಿ ಆರೋಪಕ್ಕೆ ಖರ್ಗೆ ಹೇಳಿದ್ದೇನು?
ಇನ್ನು ಪಂಚ ಗ್ಯಾರಂಟಿಗಳಿಂದ ಬೊಕ್ಕಸ ಬರಿದಾಗಿದೆ. ಇದರಿಂದಾಗಿ ಅಭಿವೃದ್ಧಿಗೆ ಅನುದಾನ ಕಡಿತವಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಖರ್ಗೆ ಅವರು, ಬಿಜೆಪಿಯವರು ಗ್ಯಾರಂಟಿ ಕೊಟ್ರೆ ಸಾಮಾಜಿಕ ಬದ್ಧತೆ, ಆರ್ಥಿಕ ಸ್ಥಿರತೆ, ಮಾಸ್ಟರ್ ಸ್ಟ್ರೋಕ್ ಅಂತಾರೆ, ನಾವು ಕೊಟ್ರೆ ಸಾಲದ ಸುಳಿಗೆ ಸಿಲುಕಿಸ್ತಾರೆ ಅಂತಾ ಟೀಕಿಸ್ತಾರೆ. ಬಿಹಾರದಲ್ಲಿ ಕಳೆದ ಚುನಾವಣೆಯಲ್ಲಿ ಪ್ರತಿ ಮಹಿಳೆಗೆ 10 ಸಾವಿರ ಕೊಟ್ರಲ್ಲ ಹಾಗಾದ್ರೆ ಅದೇನು? ಬಿಜೆಪಿಯವರು ಹೇಗೆ ಅಂದ್ರೆ ತಾವು ಕೊಟ್ರೆ ಅದನ್ನ ಮಾಸ್ಟರ್ ಸ್ಟ್ರೋಕ್ ಅಂತಾ ಹೊಗಳ್ತಾರೆ, ನಾವು 2 ಸಾವಿರ ಕೊಟ್ರೆ ಇವರಿಗೆ ತ್ರಾಸ್ ಆಗುತ್ತೆ. ಗ್ಯಾರಂಟಿಗಳಿಂದ ಯಾವ ಯೋಜನೆ ನಿಂತಿದೆ ಹೇಳಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ಬಂದಿಲ್ವಾ? ಎಂದು ತಿರುಗೇಟು ನೀಡಿದರು.
ಯತ್ನಾಳ್ ಭವಿಷ್ಯ ಏನು ಅಂತಾ ಅವರಿಗೇ ಗೊತ್ತಿಲ್ಲ
ಸಿದ್ದರಾಮಯ್ಯ ಅವರದು ಇದು ಕೊನೆಯ ಬಜೆಟ್ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಯತ್ನಾಳ್ ಅವರ ಭವಿಷ್ಯವೇ ಅವರಿಗೆ ತಿಳಿದಿಲ್ಲ. ಅವರನ್ನ ಬಿಜೆಪಿ ಉಚ್ಚಾಟನೆ ಮಾಡೋದು ಅವರಿಗೆ ಗೊತ್ತಿತ್ತಾ? ಮುಂದಿನ ಬಜೆಟ್ ಯಾರು ಮಂಡಿಸ್ತಾರೆ ಎಂಬ ತೀರ್ಮಾನ ಸಿದ್ದರಾಮಯ್ಯನವರು ಇಲ್ಲ ಹೈಕಮಾಂಡ್ ತಗೊಳ್ಳುತ್ತೆ. ಸದ್ಯ ಇಬ್ಬರಲ್ಲೂ ಇಂಥ ಚರ್ಚೆ ನಡೆದಿಲ್ಲ. ಇದೆಲ್ಲ ಬಿಜೆಪಿಯವರು, ಯತ್ನಾಳ್ ಅವರಂಥವರು ಕೆಲಸ ಇಲ್ಲದೆ ಮಾತನಾಡ್ತಾರೆ ಎಂದರು.


