ರಾಜ್ಯದಲ್ಲಿ ಮಳೆಯಿಲ್ಲದೆ 21 ಜಿಲ್ಲೆಗಳಲ್ಲಿ ಬರಗಾಲದ ವಾತಾವರಣ ಕಂಡುಬರುತ್ತಿದೆ. ಡ್ಯಾಮ್‌ಗಳಲ್ಲಿ ನೀರು ಖಾಲಿಯಾಗಿದ್ದು, ಮಲೆನಾಡಿನಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಠಿಯಾಗಿದೆ.

ಚಿತ್ರದುರ್ಗ (ಜು.16): ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಉತ್ತರ ಕರ್ನಾಟಕ ಭಾಗಗಳಷ್ಟೇ ಅಲ್ಲದೇ ಮಲೆನಾಡಿನಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಠಿಯಾಗಿದೆ. ಡ್ಯಾಮ್‌ಗಳಲ್ಲಿ ನೀರು ಖಾಲಿಯಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಬರಗಾಲದ ವಾತಾವರಣ ಕಂಡುಬರುತ್ತಿದೆ. ಆದರೂ, ಇತ್ತೀಚೆಗೆ ಆಡಳಿತ‌ಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಫಂದಿಸುವುದನ್ನು ಬಿಟ್ಟು ಕೆಲಸಕ್ಕೆ ಬಾರದ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ವೈ. ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Add Asianetnews Kannada as a Preferred SourcegooglePreferred

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸದಿರುವುದು ದುರ್ದೈವದ ಸಂಗತಿಯಾಗಿದೆ. ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲೆನಾಡಿನಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಠಿಯಾಗಿದೆ. ಆಡಳಿತ‌ಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ಮರೆತಿದೆ ಎಂದು ಟೀಕೆ ಮಾಡಿದ್ದಾರೆ. 

ದೇಶದ ಪ್ರವಾಹಕ್ಕೆ ಹವಾಮಾನ ವೈಪರೀತ್ಯವೇ ಕಾರಣ: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ

ಬಜೆಟ್ ನಲ್ಲಿ ಕೃಷಿಗೆ 5,500 ಕೋಟಿ ಕಡಿತ: ಕಾಂಗ್ರೆಸ್‌ ನಾಯಕರು ಕೇವಲ ಐದು ಗ್ಯಾರಂಟಿಗಳ ಬಗ್ಗೆ ಮಾತಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರ್ಣ ಆಗುತ್ತಿದ್ದರೂ, ಅಧಿವೇಶನದಲ್ಲಿ ಗ್ಯಾರಂಟಿ ಕಾರ್ಡ್ ಚರ್ಚೆ ಆಗ್ತಿದೆ. ಬಜೆಟ್ ನಲ್ಲಿ ಕೃಷಿಗೆ 5,500 ಕೋಟಿ ಕಡಿತ ಮಾಡಿದ್ದಾರೆ. ಇದು ರೈತಪರ‌ ಸರ್ಕಾರ ಎಂದು ಹೇಳಲು ಸಾಧ್ಯವಾಗದು. ರೈತ ವಿರೋಧಿ, ಬಡವರ ವಿರೋಧಿ ಸರ್ಕಾರಕ್ಕೆ ವಿಪಕ್ಷವಾಗಿ ಕಿವಿ‌ ಹಿಂಡುತ್ತೇವೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಪಕ್ಷ‌ ತೀರ್ಮಾನಿಸಲಿದೆ ಎಂದು ಹೇಳಿದರು. 

21 ಜಿಲ್ಲೆಗಳಲ್ಲಿ ಬರಗಾಲದ ವಾತಾವರಣ: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಹಿನ್ನೆಲೆಯಲ್ಲಿ 21 ಜಿಲ್ಲೆಗಳಲ್ಲಿ ಬರಗಾಲದ ವಾತಾವರಣ ಇದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹನಿಮೂನ್ ಪೀರಿಯಡ್ ನಿಂದ ಇನ್ನೂ ಹೊರ ಬಂದಿಲ್ಲ. ರಾಜ್ಯದ ರೈತರು ಕಂಗಾಲಾಗಿದ್ದಾರೆ. ಮಲೆನಾಡಿನಲ್ಲೂ ಕುಡಿಯುವ ನೀರಿನ ಹಾಹಾಕಾರ ಎದ್ದಿದೆ. ಡ್ಯಾಮ್ ನಲ್ಲಿ ನೀರಿಲ್ಲ. ಗುಲ್ಬರ್ಗಾ ಭಾಗದಲ್ಲಿ ತೊಗರಿ, ಹೆಸರು ಬೆಳೆದ ರೈತರು ಕಂಗಾಲಾಗಿದ್ದಾರೆ. ಒಂದು ಕಡೆ ಬೆಲೆ ಏರಿಕೆ, ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ರಾಜ್ಯದ ಜನರು ಚರ್ಚೆ ಮಾಡ್ತಾ ಇದ್ದಾರೆ. ಅಧಿವೇಶನದಲ್ಲಿ ಇದ್ಯಾವುದೂ ಚರ್ಚೆ ಆಗುತ್ತಿಲ್ಲ. ಕೆಲಸಕ್ಕೆ ಬಾರದ ವಿಷಯಗಳು ಚರ್ಚೆ ಆಗುತ್ತಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ರಾಷ್ಟ್ರೋತ್ಥಾನ ಪರಿಷತ್‌ ಭೂಮಿ ವಾಪಸ್‌: ರಾಷ್ಟ್ರೋತ್ಥಾನ ಪರಿಷತ್ ಅಡಿಯಲ್ಲಿ ಜನಸೇವಾ ವಿದ್ಯಾ ಕೇಂದ್ರ ಕಳೆದ 30 -40 ವರ್ಷಗಳಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿದೆ. ಸಾವಿರಾರು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಶಿಕ್ಷಣದಲ್ಲಿ ವ್ಯಾಪಾರೀಕರಣದ ಚರ್ಚೆಯಾಗುತ್ತಿದೆ. ಆದರೆ ನಮ್ಮ ಜನ ಸೇವಾ ವಿದ್ಯಾ ಕೇಂದ್ರದಲ್ಲಿ ಸಾವಿರಾರು ಬಡ ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಸೇರಿದ್ದಾರೆ. ಹೊಸ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ 35 ಎಕರೆ ಭೂಮಿ ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿರುವುದು ದುರಂತವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ 'ಆಷಾಢ ಅಶುಭ' ಆಚರಣೆ: ನಟ ಅಹಿಂಸಾ ಚೇತನ್‌ ಕಿಡಿ

ಕಳೆದ 30 ವರ್ಷಗಳಲ್ಲಿ ಭೂಮಿ ಹಂಚಿಕೆಯಾದ ಬಗ್ಗೆ ಚರ್ಚೆ ಮಾಡಲಿ: ಶಿಕ್ಷಣದ ಕ್ಷೇತ್ರದ ಮೇಲೂ ಈ ಸರ್ಕಾರದ ವಕ್ರ ದೃಷ್ಟಿ ಬೀರಿದೆ. ಇದು ಸಚಿವರಿಗೆ, ಸಿಎಂ ಅವರಿಗೆ ಶೋಭೆ ತರ ತಕ್ಕಂಥದ್ದಲ್ಲ. ವಿನಾಕಾರಣ ರಾಜಕಾರಣ ಮಾಡಬಾರದು. ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಶಿಕ್ಷಣ ಕೇಂದ್ರಕ್ಕೆ ಕೊಟ್ಟ ಭೂಮಿಯನ್ನು ಹಿಂಪಡೆಯಬಾರದು. ಯಾರ್ಯಾರಿಗೆ ಭೂಮಿ ಕೊಟ್ಟಿದ್ದಾರೆ ಎಂಬ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿ. ಭೂಮಿಯನ್ನು ಪಡೆದ ಶಿಕ್ಷಣ ಸಂಸ್ಥೆಗಳು ಯಾವ ರೀತಿ ಉಪಯೋಗಿಸುತ್ತಿದ್ದಾರೆ ಚರ್ಚೆಯಾಗಲಿ. ನ್ಯಾಯಯುತವಾಗಿ ಕೊಟ್ಟಂತ ಜಮೀನಿಗೂ ಕನ್ನ ಹಾಕುತ್ತಿದ್ದಾರೆ. ಮೂಗು ತೂರಿಸುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಅಂದ್ರೆ ದೇವರು ಮೆಚ್ಚುವುದಿಲ್ಲ. ಕಳೆದ 30 ವರ್ಷದಲ್ಲಿ ಯಾವ್ಯಾವ ಸರ್ಕಾರ ಯಾರ್ಯಾರಿಗೆ ಭೂಮಿ ಕೊಟ್ಟಿದೆ, ಪರಭಾರೆ ಮಾಡಿದೆ, ಆ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.