ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗರಿಗೆ 'ನನ್ನ ಖಾತೆ ನನ್ನ ಹಕ್ಕು' ಅಭಿಯಾನದ ಮೂಲಕ 6ನೇ ಗ್ಯಾರಂಟಿ ಘೋಷಿಸಿದ್ದಾರೆ. ಬಿ-ಖಾತಾ ವರ್ಗಾವಣೆ, ಅಕ್ರಮ-ಸಕ್ರಮ ರಿಯಾಯಿತಿ ಮತ್ತು ಗ್ರೀನ್ ಬೆಂಗಳೂರು ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು (ಮೇ 13): ರಾಜ್ಯ ಸರ್ಕಾರವು ಐದು ಗ್ಯಾರಂಟಿಗಳ ಯಶಸ್ಸಿನ ಬೆನ್ನಲ್ಲೇ, ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗಾಗಿ "6ನೇ ಗ್ಯಾರಂಟಿ"ಯನ್ನು ಘೋಷಿಸಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಇಂದು ಪತ್ರಿಕಾಗೋಷ್ಠಿಯಲ್ಲಿ 'ಭೂ ಗ್ಯಾರಂಟಿ - ನನ್ನ ಖಾತೆ ನನ್ನ ಹಕ್ಕು' ಎಂಬ ಐತಿಹಾಸಿಕ ಅಭಿಯಾನಕ್ಕೆ ಚಾಲನೆ ನೀಡಿದರು. ಆಸ್ತಿ ದಾಖಲಾತಿಗಳ ಅಕ್ರಮಕ್ಕೆ ಕಡಿವಾಣ ಹಾಕಲು ಮತ್ತು ಮಾಲೀಕರಿಗೆ ಅಧಿಕೃತ ಹಕ್ಕು ಒದಗಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ನನ್ನ ಖಾತೆ ನನ್ನ ಹಕ್ಕು: ಏನಿದು ಅಭಿಯಾನ?
ಬೆಂಗಳೂರಿನಲ್ಲಿ ಸುಮಾರು 23 ಲಕ್ಷ ಅಧಿಕೃತ ಆಸ್ತಿಗಳಿವೆ. ಇವುಗಳಲ್ಲಿ 16 ಲಕ್ಷ 'ಎ' ಖಾತಾ ಮತ್ತು 7 ಲಕ್ಷ 'ಬಿ' ಖಾತಾ ಆಸ್ತಿಗಳಿವೆ. ಈ ಆಸ್ತಿಗಳಿಗೆ ಸ್ಪಷ್ಟ ದಾಖಲಾತಿ ಒದಗಿಸಲು ಸರ್ಕಾರ ಡಿಜಿಟಲ್ ಮ್ಯಾಪಿಂಗ್ ಮಾಡಿದೆ. 'ಆಧಾರ್ ಕಾರ್ಡ್, ಫೋನ್ ನಂಬರ್ ಮತ್ತು ಗೂಗಲ್ ಲೊಕೇಶನ್ ಬಳಸಿ ಆಸ್ತಿಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇದರಿಂದ ನಿಮ್ಮ ಆಸ್ತಿಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಈ ಅಭಿಯಾನವು ಮೇ 16 ರಿಂದ ಪ್ರಾರಂಭವಾಗಲಿದ್ದು, ಮುಂದಿನ ಮೂರು ತಿಂಗಳ ಕಾಲ ಪ್ರತಿ ಶನಿವಾರ ಪಾಲಿಕೆಯ ನಿಗಧಿತ 10 ಕೇಂದ್ರಗಳಲ್ಲಿ ನಡೆಯಲಿದೆ.
ಬಿ-ಖಾತಾ ಟು ಎ-ಖಾತಾ: 100 ದಿನಗಳ ಸುವರ್ಣ ಅವಕಾಶ
ಆಸ್ತಿದಾರರಿಗೆ ಅತ್ಯಂತ ದೊಡ್ಡ ಸಮಾಧಾನಕರ ಸುದ್ದಿ ಎಂದರೆ ಬಿ-ಖಾತಾ ವರ್ಗಾವಣೆ. ಈ ಮೊದಲು ಬಿ-ಖಾತಾದಿಂದ ಎ-ಖಾತಾಗೆ ಬದಲಿಸಿಕೊಳ್ಳಲು ಮಾರ್ಗದರ್ಶಿ ದರದ (Guidance Value) ಶೇ. 5 ರಷ್ಟು ಶುಲ್ಕ ಪಾವತಿಸಬೇಕಿತ್ತು. ಆದರೆ, ಈಗಿನ ವಿಶೇಷ ಯೋಜನೆಯಡಿ 100 ದಿನಗಳ ಒಳಗೆ ಅರ್ಜಿ ಸಲ್ಲಿಸುವವರಿಗೆ ಕೇವಲ ಶೇ. 2 ರಷ್ಟು ಶುಲ್ಕದಲ್ಲಿ ಖಾತಾ ಬದಲಾವಣೆ ಮಾಡಿಕೊಡಲಾಗುವುದು. ಈ ಅವಧಿ ಮೀರಿದರೆ ಮತ್ತೆ ಶೇ. 5 ರಷ್ಟು ದರ ಅನ್ವಯವಾಗಲಿದೆ. 'ಒಂದು ರೂಪಾಯಿ ಲಂಚ ನೀಡದೆ ನಿಮ್ಮ ಮನೆ ಬಾಗಿಲಿಗೆ ಈ ಸೌಲಭ್ಯ ಬರಲಿದೆ' ಎಂದು ಡಿಕೆಶಿ ತಿಳಿಸಿದರು.
ಕಟ್ಟಡ ಉಲ್ಲಂಘನೆ ಮತ್ತು ಅಕ್ರಮ-ಸಕ್ರಮಕ್ಕೆ ರಿಯಾಯಿತಿ
ಮನೆ ನಿರ್ಮಾಣದ ಸಮಯದಲ್ಲಿ ಶೇ. 5 ರಷ್ಟು ನಿಯಮ ಉಲ್ಲಂಘನೆಯಾಗಿದ್ದರೆ ಮಾತ್ರ ಸಕ್ರಮ ಮಾಡಲು ಅವಕಾಶವಿತ್ತು. ಈಗ ಈ ಮಿತಿಯನ್ನು ಶೇ. 15 ಕ್ಕೆ ಏರಿಸಲಾಗಿದೆ. ಇದರಿಂದ 20/30, 30/40 ಮತ್ತು 40/60 ಅಳತೆಯ ನಿವೇಶನದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಅಕ್ರಮ-ಸಕ್ರಮ ಯೋಜನೆಗಾಗಿ 'ಒನ್ ಟೈಮ್ ಸೆಟ್ಲ್ಮೆಂಟ್' (OTS) ಘೋಷಿಸಲಾಗಿದ್ದು, ಜೂನ್ 15 ರಿಂದ ಅರ್ಜಿ ಸಲ್ಲಿಸಬಹುದು. ಮಾರ್ಗದರ್ಶಿ ದರದ ಶೇ. 5 ರಷ್ಟು ಹಣ ಪಾವತಿಸಿ ಆಸ್ತಿಯನ್ನು ಕ್ರಮಬದ್ಧಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಗ್ರೀನ್ ಬೆಂಗಳೂರು ಮತ್ತು ಬಿಡಿಎ ಫ್ಲಾಟ್ಸ್
ಕೆಂಪೇಗೌಡ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ 'ಗ್ರೀನ್ ಬೆಂಗಳೂರು' ಯೋಜನೆಗೆ ಚಾಲನೆ ನೀಡಲಾಗುವುದು. ಬಿಡಿಎ 50ನೇ ವರ್ಷದ ಸಂಭ್ರಮದಲ್ಲಿರುವ ಕಾರಣ, ಜನಸಾಮಾನ್ಯರಿಗಾಗಿ ರಿಯಾಯಿತಿ ದರದಲ್ಲಿ ಮನೆಗಳನ್ನು ನೀಡಲಾಗುತ್ತಿದೆ. 1BHK ಮನೆಗಳಿಗೆ 700 ಅಡಿ ವಿಸ್ತೀರ್ಣಕ್ಕೆ ಅಲ್ಪ ದರ ನಿಗದಿಪಡಿಸಲಾಗಿದ್ದು, 3BHK ಅಪಾರ್ಟ್ಮೆಂಟ್ಗಳು 1.48 ಕೋಟಿ ರೂಪಾಯಿಗೆ ಲಭ್ಯವಿವೆ.
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೆಬ್ಬಾಳದಿಂದ ಜಿಕೆವಿಕೆವರೆಗೆ ಶಾರ್ಟ್ ಟನಲ್ ನಿರ್ಮಾಣ ಕಾಮಗಾರಿಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಒಟ್ಟಾರೆಯಾಗಿ, ಡಿ.ಕೆ. ಶಿವಕುಮಾರ್ ಅವರ ಈ ಘೋಷಣೆಗಳು ಬೆಂಗಳೂರಿನ ಆಸ್ತಿದಾರರಲ್ಲಿ ಹೊಸ ಭರವಸೆ ಮೂಡಿಸಿವೆ.


