ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಮಹಿಳೆಯರ ಶವಗಳನ್ನು ಹೂತ ಪ್ರಕರಣದಲ್ಲಿ ಅನಾಮಿಕ ದೂರುದಾರನ ಹಿನ್ನೆಲೆ ಮತ್ತು ವೈಯಕ್ತಿಕ ಮಾಹಿತಿಯನ್ನು ಎಸ್ಐಟಿ ತೀವ್ರವಾಗಿ ಪರಿಶೀಲಿಸುತ್ತಿದೆ. ಲೈಂಗಿಕ ಕಿರುಕುಳದ ಆರೋಪ ಮತ್ತು ಕುಟುಂಬದೊಂದಿಗೆ ಧರ್ಮಸ್ಥಳದಿಂದ ಪಲಾಯನದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಧರ್ಮಸ್ಥಳ/ಬೆಂಗಳೂರು (ಜು.27): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಇದೀಗ ಅನಾಮಿಕ ದೂರುದಾರನ ವೈಯಕ್ತಿಕ ಹಿನ್ನೆಲೆಯನ್ನು ಅನಾಮಿಕ ವ್ಯಕ್ತಿಯನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಹಾಗೂ ಧರ್ಮಸ್ಥಳದಿಂದ ಕುಟುಂಬದೊಂದಿಗೆ ಓಡಿ ಹೋಗಿದ್ದೆ ಎನ್ನುವುದು ಸೇರಿದಂತೆ ಅನಾಮಿಕನ ವೈಯಕ್ತಿಕ ಮಾಹಿತಿಯನ್ನು ಕೂಡ ಕೆದಕಲಾಗುತ್ತಿದೆ.
2014ರ ಹೊತ್ತಿಗೆ ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಅನಾಮಿಕ ವ್ಯಕ್ತಿ ದೂರು ಸಲ್ಲಿಕೆ ಮಾಡಿದ್ದಾನೆ. ಇದರಿಂದಾಗಿ ತಾನು ಡಿಸೆಂಬರ್ 2014ರಲ್ಲಿ ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿ ಹೋದೆ ಎಂದು ಹೇಳಿದ್ದನು. ಎಸ್ಐಟಿ ಅಧಿಕಾರಿಗಳು ಸಾಲು ಸಾಲು ಗಂಭೀರ ಹಾಗೂ ವೈಯಕ್ತಿಕ ರೀತಿಯ ಪ್ರಶ್ನೆಗಳನ್ನು ಕೇಳಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಮೂಲವನ್ನು ತಿಳಿಯುವ ಉದ್ದೇಶದ ಜೊತೆಗೆ, ದೂರುದಾರನ ನೈಜ ಆಸಕ್ತಿಯ ಮೇಲಿರುವ ಅನುಮಾನವನ್ನೂ ತಿಳಿಗೊಳಿಸಿಕೊಳ್ಳುವಂತಹ ಪ್ರಶ್ನೆಗಳನ್ನು ಕೇಳಲಾಗಿದೆ
ಎಸ್ಐಟಿಯ ಪ್ರಶ್ನೆಗಳು ಹೇಗಿದ್ದವು?
- 2014ರಲ್ಲಿ ನೀವು ಅನುಭವಿಸಿದ್ದ ಮಾನಸಿಕ ಹಿಂಸೆ ಯಾವ ರೀತಿ ತೀವ್ರವಾಗಿತ್ತು?
- ಈ ಮಾನಸಿಕ ಹಿಂಸೆ ಯಾವುದಾದರೂ ವ್ಯಕ್ತಿಯಿಂದ ನಿರ್ದಿಷ್ಟವಾಗಿ ಆಗಿತ್ತಾ? ಅವರು ಯಾರ ಸಂಪರ್ಕದಲ್ಲಿದ್ದರು?
- ಲೈಂಗಿಕ ಕಿರುಕುಳವಾದ ಕುಟುಂಬದ ಬಾಲಕಿ ಅಂದರೆ ನಿಮಗೆ ಸಂಬಂಧ ಏನು?
- ಆ ಸಂದರ್ಭದಲ್ಲಿ ಆ ಬಾಲಕಿ ಯಾವ ವಯಸ್ಸಿನವಳಿದ್ದಳು?
- ಲೈಂಗಿಕ ಕಿರುಕುಳ ಮಾಡಿದ ವ್ಯಕ್ತಿ ಯಾರು? ಅವರು ಹೇಗೆ ನಿಮ್ಮ ಕುಟುಂಬದ ಸಂಪರ್ಕಕ್ಕೆ ಬಂದರು?
- ಡಿಸೆಂಬರ್ 2014ರಲ್ಲಿ ನೀವು ಯಾವ ದಿನಾಂಕ ಅಥವಾ ದಿನಗಳಲ್ಲಿ ಧರ್ಮಸ್ಥಳದಿಂದ ಹೊರಗೆ ಹೋಗಿದ್ದೀರಿ?
- ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಎಲ್ಲರು ಸೇರಿ ಹೊರ ಹೋದ್ರಾ? ಯಾರು ಯಾರು ಇದ್ದರು?
- ನೀವು ತಕ್ಷಣವೇ ಆಗ ಪೋಲಿಸರನ್ನ ಯಾಕೆ ಸಂಪರ್ಕ ಮಾಡಲಿಲ್ಲ?
- ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದೀರಿ ಅಂದರೆ, ನೀವು ಯಾವ ರಾಜ್ಯಕ್ಕೆ ಹೋದಿರಿ?
- ತಲೆ ಮರೆಸಿಕೊಂಡು ಬದುಕಿದ ಸಮಯದಲ್ಲಿ ನಿಮ್ಮ ಕುಟುಂಬದವರು ಸುರಕ್ಷಿತವಾಗಿದ್ದರಾ?
- ಈ ಸಮಯದಲ್ಲಿ ನಿಮ್ಮನ್ನ ಯಾರಾದರೂ ಹುಡುಕಾಟ ನಡೆಸಿದರಾ ಅಥವಾ ಬೆದರಿಕೆ ಹಾಕಿದರಾ?
- ನೀವು ಈ ಕಿರುಕುಳ ಅಥವಾ ಹಿಂಸೆ ನಡೆಸಿದ ವ್ಯಕ್ತಿಗಳನ್ನು ಗುರುತಿಸಲು ಸಹಕರಿಸುತ್ತೀರಾ?
- ನೀವು ಈ ಹೇಳಿಕೆ ನೀಡುವ ಮುನ್ನ ನಿಮ್ಮ ಕುಟುಂಬದ ಇತರ ಸದಸ್ಯರ ಸಹಮತವನ್ನು ಪಡೆದುಕೊಂಡಿದ್ದೀರಾ? ಎಂದು ಪ್ರಶ್ನೆ
ಅನಾಮಿಕನ ಸ್ಪಷ್ಟನೆ ಏನು?
2014ರ ಡಿಸೆಂಬರ್ನಲ್ಲಿ ತನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ನಿರ್ಗಮಿಸಿದ್ದಾಗಿ, ಅದಕ್ಕೆ ತನ್ನ ಕುಟುಂಬದ ಯುವತಿಗೆ ಕಿರುಕುಳ ನೀಡಿರುವುದು ಎಂದು ಕಾರಣ ನೀಡಿದ್ದಾನೆ. ಇದೀಗ ವಾಪಸ್ ಬಂದು ಧರ್ಮಸ್ಥಳದ ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ಕಿರುಕುಳವಾಗಿದೆ' ಎಂದು ದೂರು ನೀಡಿದ್ದಾನೆ. ಈಗ ತನ್ನ ವೈಯಕ್ತಿಕ ಅನುಭವದ ಹಿಂದೆಯಾದ ಸಂಕಷ್ಟಗಳ ಕುರಿತಂತೆ ಮಾತ್ರವಲ್ಲದೆ ತನ್ನ ಹೇಳಿಕೆಗೆ ಸಂಬಂಧಿಸಿದಂತೆ ಎಸ್ಐಟಿ ನೀಡಿದ ಪ್ರತಿ ಪ್ರಶ್ನೆಗಳಿಗೂ ಸತ್ಯವನ್ನು ಹೇಳಲು ಸಹಕಾರ ನೀಡಿದ್ದಾನೆ ಎಂದು ತಿಳಿದುಬಂದಿದೆ.
