ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ದೂರು ನೀಡಿದ ಮುಸುಕುಧಾರಿ ವ್ಯಕ್ತಿಯನ್ನು ಕಳೆದ 5 ಗಂಟೆಗಳಿಂದ ಸತತ ವಿಚಾರಣೆ ನಡೆಸಲಾಗುತ್ತಿದೆ. ಎಸ್‌ಐಟಿ ತಂಡ ಮಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಇದೀಗ ತನಿಖೆ ತೀವ್ರಗೊಂಡಿದೆ.

ಮಂಗಳೂರು (ಜು.26) ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣ ಹಾಗೂ ಸುತ್ತ ಮುತ್ತ ನಡೆದಿದೆ ಎಂದು ಆರೋಪಿಸಿರುವ ಕೊಲೆ ಹಾಗೂ ಅತ್ಯಾ*ರ ಪ್ರಕರಣ ಸಂಬಂಧ ರಚನೆಗೊಂಡಿರುವ ಎಸ್ಐಟಿ ತಂಡ ಈಗಾಗಲೇ ಮಂಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದೆ. ಮೊದಲ ದಿನವೇ ಶವ ಹೂತಿಟ್ಟ ಆರೋಪ ಮಾಡಿದ ಅನಾಮಿಕನ ಎಸ್ಐಟಿ ಕಚೇರಿಗೆ ಕರೆಯಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕಳೆದ 5 ಗಂಟೆಗಳಿಂದ ಸತತ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಕೂಡ ವಿಚಾರಣೆ ಮುಗಿದಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ.

Add Asianetnews Kannada as a Preferred SourcegooglePreferred

ದೂರುದಾರನ ಮುಸುಕುತೆಗೆದು ಎಸ್ಐಟಿ ವಿಚಾರಣೆ

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಎಸ್ಐಟಿ ಕಚೇರಿ ಇಂದು ವಕೀಲರ ಜೊತೆ ಮುಸುಕುಧಾರಿ ವ್ಯಕ್ತಿ ಆಗಮಿಸಿದ್ದಾನೆ. ಎಸ್ಐಟಿ ವಿಚಾರಣೆಗೆ ಹಾಜರಾಗಲು ಬುಲಾವ್ ನೀಡಿದ ಹಿನ್ನಲೆಯಲ್ಲಿ ದೂರುದಾರ ಹಾಜರಾಗಿದ್ದಾನೆ. ಮುಸುಕು ಹಾಕಿಕೊಂಡು ಆಗಮಿಸಿದ ಈತನ ವಿಚಾರಣೆಯನ್ನು ಎಸ್ಐಟಿ ತಂಡ ನಡೆಸುತ್ತಿದೆ. ಮುಸುಕು ತೆಗೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಮಗ್ರ ಹೇಳಿಕೆ ದಾಖಲಿಸಿಕೊಳ್ಳುತ್ತಿರುವ ಎಸ್ಐಟಿ

ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿಕೊಂಡಿರುವ ಈ ಮುಸುಕುಧಾರಿ ವ್ಯಕ್ತಿ ತನ್ನ ಕೆಲಸದ ಅವಧಿಯಲ್ಲಿ ಪ್ರಭಾವಿಗಳ ಆದೇಶದ ಮೇರೆಗೆ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ. ಈ ಬಗ್ಗೆ ತನಿಖೆ ನಡೆುವಂತೆ ಈ ಅನಾಮಿಕ ಮುಸುಕುಧಾರಿ ವ್ಯಕ್ತಿ ಆರೋಪಿಸಿದ್ದ. ಇದರಂತೆ ಎಸ್ಐಟಿ ಅಧಿಕಾರಿಗಳು ನೂರಾರು ಮೃತದೇಹ ಹೂತಿಟ್ಟಿರುವುದಾಗಿ ಆರೋಪಿಸಿರುವ ಕಾರಣ ಪ್ರತಿ ಮೃತದೇಹಗಳ ಕುರಿತು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಈಗಾಗಲೇ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೆಲ ಪ್ರಕರಣಗಳ ಕುರಿತು ಈತನಿಗಿರುವ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಮುಸುಕುಧಾರಿಯ ಆರೋಪವೇನು?

ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯ ಪ್ರಕರಣ ಕಾವು ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಮುಸುಕುಧಾರಿ ವ್ಯಕ್ತಿ ಕೆಲ ಸ್ಫೋಟಕ ಆರೋಪಗಳ ಮೂಲಕ ಪ್ರತ್ಯಕ್ಷರಾಗಿದ್ದ. ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮಾಜಿ ನೌಕರ ಎಂದು ಹೇಳಿಕೊಂಡ ಈ ಅನಾಮಿಕ ವ್ಯಕ್ತಿ ಕೆಲ ಬುರುಡೆಗಳನ್ನು ತೆಗೆಯುವ ವಿಡಿಯೋ ಕೂಡ ಮಾಡಿಕೊಂಡು ಗಂಭೀರ ಆರೋಪ ಮಾಡಿದ್ದ. ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೆ ನೀಡಿದ್ದ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಇದರಂತೆ ಎಸ್ಐಟಿ ತನಿಖಾ ತಂಡ ಇದೀಗ ಮಂಗಳೂರಿನಲ್ಲಿ ತನಿಖೆ ನಡೆಸುತ್ತಿದೆ.