ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಕೇರಳ ಮೂಲದ ಯೂಟ್ಯೂಬರ್ ಮನಾಫ್ ಪಾತ್ರವಿದೆಯೆಂದು SIT ಶಂಕಿಸಿದೆ. ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಮನಾಫ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆಯ ಪ್ರಮುಖ ಹಂತದಲ್ಲಿರುವ SIT ತಂಡಕ್ಕೆ ಮಹತ್ವದ ಪುರಾವೆಗಳು ಲಭ್ಯವಾಗಿವೆ.

ಬೆಂಗಳೂರು (ಸೆ.05): ಧರ್ಮಸ್ಥಳದ ಸುತ್ತಮುತ್ತ ನೂರಾರು ಯುವತಿಯರ ಕೊಲೆ ಮಾಡಲಾಗಿದೆ ಮತ್ತು ಅವರ ಬುರುಡೆಗಳು ದೊರೆತಿವೆ ಎಂದು ಸುಳ್ಳು ಸುದ್ದಿ ಹರಡಿದ 'ಬುರುಡೆ ಪ್ರಕರಣ' ತನಿಖೆ ತೀವ್ರಗೊಂಡಿದೆ. ಈ ಪ್ರಕರಣದ ಹಿಂದೆ ಕೇರಳದ ಯೂಟ್ಯೂಬರ್ ಮನಾಫ್ ಪಾತ್ರವಿದೆ ಎಂದು SIT ತಂಡ ಶಂಕೆ ವ್ಯಕ್ತಪಡಿಸಿದ್ದು, ಮನಾಫ್‌ಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

Add Asianetnews Kannada as a Preferred SourcegooglePreferred

ಮನಾಫ್ ವಿರುದ್ಧ ಆರೋಪಗಳು:

ಕೇರಳ ಮೂಲದ ಯೂಟ್ಯೂಬರ್ ಮನಾಫ್ ಈ ಪ್ರಕರಣದ ಆರಂಭದಿಂದಲೂ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸುಳ್ಳು ಕಥೆಗಳನ್ನು ಹಬ್ಬಿಸಿದ್ದನು. ಜಯಂತ್.ಟಿ ಎಂಬ ವ್ಯಕ್ತಿಯ ಮೂಲಕ ಈ ಕಥೆಯನ್ನು ಕೇರಳದ ಮಾಧ್ಯಮಗಳಿಗೂ ತಲುಪಿಸಿ, ಅವು ಸಹ ಸುಳ್ಳು ಕಥೆಯನ್ನು ನಂಬುವಂತೆ ಮಾಡಿದ್ದ. ಮನಾಫ್ ಧರ್ಮಸ್ಥಳಕ್ಕೆ ಬಂದು ಸುಜಾತ ಭಟ್ ಮತ್ತು ಇತರ ಪ್ರಕರಣಗಳ ಬಗ್ಗೆ ಕಟ್ಟುಕಥೆಗಳನ್ನು ಹೇಳಿ, ಧರ್ಮಸ್ಥಳದ ಸುತ್ತಮುತ್ತ ನೂರಾರು ಹೆಣ್ಣುಮಕ್ಕಳ ಮೇಲೆ ಅತ್ಯಾ*ಚಾರ ನಡೆಸಿ, ಕೊಲೆ ಮಾಡಿ ಹೂಳಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದನು.

ಮನಾಫ್‌ರ ಹಿನ್ನೆಲೆ

ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಸಿಲುಕಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಿದ್ದ. ಆ ಲಾರಿಯ ಮಾಲೀಕರೇ ಕೇರಳದ ಯೂಟ್ಯೂಬರ್ ಮನಾಫ್. ಇದೇ ಮನಾಫ್ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬ್‌ನಲ್ಲಿ ಕಥೆ ಕಟ್ಟಿದ್ದು, ಜಯಂತ್.ಟಿ ಮೂಲಕ ಈ ಕಥೆಯನ್ನು ಕೇರಳಕ್ಕೂ ಹಬ್ಬಿಸಿದ್ದಾನೆ. ಸುಜಾತ ಭಟ್ ಹಾಗೂ ಬುರುಡೆ ಪ್ರಕರಣದ ಕಥೆಗಳನ್ನು ಕೂಡಾ ಈ ಹಿನ್ನೆಲೆಯಲ್ಲಿ ಗಟ್ಟಿಯಾಗಿ ಹರಿಬಿಟ್ಟಿದ್ದಾನೆ. ಕೇರಳದ ಮಾಧ್ಯಮಗಳೂ ಸಹ ಈ ಸುಳ್ಳು ಪ್ರಚಾರಕ್ಕೆ ಒಳಗಾಗಿದ್ದವು ಎಂಬ ಆರೋಪ ಕೇಳಿಬಂದಿದೆ.

ಪ್ರಮುಖ ಪುರಾವೆಗಳ ಲಭ್ಯತೆ:

ಈ ಪ್ರಕರಣದ ತನಿಖೆ ನಡೆಸುತ್ತಿರುವ SIT ತಂಡಕ್ಕೆ ಕಾಡಿನಿಂದ ಬುರುಡೆ ತಂದಿರುವ ಮೂಲ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋವನ್ನು ಮನಾಫ್ ಜುಲೈ 11ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ವಿಡಿಯೋದಲ್ಲಿ ಜಯಂತ್ ಬಂಗ್ಲೆಗುಡ್ಡೆಯಿಂದಲೇ ಬುರುಡೆಯನ್ನು ತಂದಿರುವುದಾಗಿ ಹೇಳಿದ್ದಾನೆ. ಇದು ಭೂಮಿಯ ಮೇಲ್ಭಾಗದಲ್ಲಿಯೇ ದೊರೆತ ಬುರುಡೆಯಾಗಿದ್ದು, ಮರಕ್ಕೆ ಸೀರೆ ಕಟ್ಟಿದ ಸ್ಥಳದ ಪಕ್ಕದಲ್ಲಿಯೇ ಪತ್ತೆಯಾಗಿದೆ. ಕತ್ತಿ ಬಳಸಿ ಬುರುಡೆಯನ್ನು ಎತ್ತಿ ತಂದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಇದರಿಂದ ಬುರುಡೆಯನ್ನು ಧರ್ಮಸ್ಥಳದ ಸುತ್ತಮುತ್ತಲ ಪ್ರದೇಶಗಳಿಂದಲೇ ತರಲಾಗಿದೆ ಎಂಬ ಅನುಮಾನಗಳು ಬಲಗೊಂಡಿವೆ ಎಂದು ವಿಡಿಯೋದಲ್ಲಿ ತೋರಿಸಿದ್ದನು.

ತನಿಖೆ ಮತ್ತು ವಿಚಾರಣೆಗಳು:

SIT ಮುಖ್ಯಸ್ಥ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದು ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ಮೊಹಾಂತಿ ಅವರ ನಿರ್ದೇಶನದಂತೆ ಇಂದು ಜಯಂತ್, ಗಿರೀಶ್ ಮಟ್ಟಣ್ಣವರ್ ಮತ್ತು ಅಭಿಷೇಕ್ ಅವರನ್ನು SIT ತನಿಖಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ತನಿಖಾಧಿಕಾರಿಗಳು ಈ ಮೂವರನ್ನು ಯೂಟ್ಯೂಬ್ ಮತ್ತು ನ್ಯೂಸ್ ಚಾನೆಲ್‌ಗಳಿಗೆ ನೀಡಿದ ಸಂದರ್ಶನಗಳ ಆಧಾರದ ಮೇಲೆ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಪ್ರಸ್ತುತ, ಈ ಪ್ರಕರಣವು ತೀವ್ರ ಮತ್ತು ನಿರ್ಣಾಯಕ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಸತ್ಯಾಂಶ ಹೊರಬರಲಿದೆ ಎಂದು ನಿರೀಕ್ಷಿಸಲಾಗಿದೆ.