ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಶಂಕೆಯ ತನಿಖೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಐದು ಪಾಯಿಂಟ್‌ಗಳಲ್ಲಿ ಉತ್ಖನನ ಮುಕ್ತಾಯಗೊಂಡಿದ್ದು, ಇನ್ನೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ.

ಮಂಗಳೂರು (ಜುಲೈ.31): ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಶಂಕೆಯ ತನಿಖೆಯು ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿಶೇಷ ತನಿಖಾ ದಳ (ಎಸ್‌ಐಟಿ) ತಂಡವು ಈ ರಹಸ್ಯ ಪ್ರಕರಣದ ಉತ್ಖನನ ಕಾರ್ಯವನ್ನು ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಆರಂಭಿಸಲಿದೆ.

Add Asianetnews Kannada as a Preferred SourcegooglePreferred

ಈಗಾಗಲೇ ಐದು ಪಾಯಿಂಟ್‌ಗಳಲ್ಲಿ ಉತ್ಖನನ ಕಾರ್ಯ ಮುಕ್ತಾಯಗೊಂಡಿದ್ದು, ಇಂದಿನಿಂದ 6ನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ಶುರುವಾಗಲಿದೆ. ಆದರೆ, ಇದುವರೆಗೆ ಯಾವುದೇ ಅಸ್ಥಿಪಂಜರ ಅಥವಾ ಶವಗಳು ಪತ್ತೆಯಾಗಿಲ್ಲ, ಇದು ತನಿಖೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಜಿಲ್ಲೆಯಲ್ಲೇ ಪ್ರಣವ್ ಮೊಹಂತಿ ಮುಕ್ಕಾಂ

ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮುಕ್ಕಾಂ ಹೂಡಿದ್ದಾರೆ. ನಿನ್ನೆ ರಾತ್ರಿ 7 ರಿಂದ 9:30ರವರೆಗೆ ಬೆಳ್ತಂಗಡಿಯ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು, ಬಳಿಕ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಮೊಹಂತಿಯವರು ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವ ಸಾಧ್ಯತೆ ಇದೆ.

ಈ ಪ್ರಕರಣದ ಬಗ್ಗೆ ಸ್ಥಳೀಯರಲ್ಲಿ ಆತಂಕ ಮತ್ತು ಕುತೂಹಲ ಮಿಶ್ರಿತ ವಾತಾವರಣವಿದೆ. ಇಂದಿನ ಕಾರ್ಯಾಚರಣೆಯಲ್ಲಿ ಅಸ್ಥಿಪಂಜರ ಅಥವಾ ಬೇರೆ ಏನಾದರೂ ಸುಳಿವು ಸಿಗಲಿದೆಯಾ? ಒಂದು ವೇಳೆ ಅಸ್ತಿಪಂಜರ ಪತ್ತೆಯಾದರೆ ಮುಂದಿನ ತನಿಖೆ ಏನು?.. ತನಿಖೆಯ ಫಲಿತಾಂಶದ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಈ ಉತ್ಖನನವು ಯಾವ ರಹಸ್ಯವನ್ನು ಬಯಲಿಗೆಳೆಯಲಿದೆ ಎಂಬುದು ಇನ್ನೂ ಅನಿಶ್ಚಿತವಾಗಿದೆ. ಎಸ್‌ಐಟಿ ತಂಡವು ಎಲ್ಲ ಕಾನೂನು ಕ್ರಮಗಳನ್ನು ಅನುಸರಿಸಿ, ಈ ಗಂಭೀರ ವಿಷಯದ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಶ್ರಮಿಸುತ್ತಿದೆ.