ತಮ್ಮನ್ನು ಕಿರುತೆರೆಯಿಂದ ಬಹಿಷ್ಕರಿಸಬೇಕೆಂಬ ನಿರ್ಮಾಪಕರ ಸಂಘದ ನಿಲುವನ್ನು ಪ್ರಶ್ನಿಸಿ ನಟ ಅನಿರುದ್ಧ ಜತ್ಕರ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದು, ಶುಕ್ರವಾರ ನಡೆದ ಸಂಧಾನ ಸಭೆಗೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಗೈರಾದ ಕಾರಣ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ.

ಬೆಂಗಳೂರು (ಡಿ.10): ತಮ್ಮನ್ನು ಕಿರುತೆರೆಯಿಂದ ಬಹಿಷ್ಕರಿಸಬೇಕೆಂಬ ನಿರ್ಮಾಪಕರ ಸಂಘದ ನಿಲುವನ್ನು ಪ್ರಶ್ನಿಸಿ ನಟ ಅನಿರುದ್ಧ ಜತ್ಕರ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದು, ಶುಕ್ರವಾರ ನಡೆದ ಸಂಧಾನ ಸಭೆಗೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಗೈರಾದ ಕಾರಣ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಇತ್ತೀಚೆಗೆ ಕೈಬಿಡಲಾಗಿತ್ತು. ಬಳಿಕ ಅವರು ಎಸ್‌.ನಾರಾಯಣ್‌ ನಿರ್ದೇಶನದ ‘ಸೂರ್ಯವಂಶ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದರು. 

ಅದನ್ನು ವಿರೋಧಿಸಿ, ಅನಿರುದ್ಧ ಅವರನ್ನು ಕಿರುತೆರೆಯಿಂದ ತಾತ್ಕಾಲಿಕವಾಗಿ ಬಹಷ್ಕರಿಸಬೇಕೆಂದು ಆಗ್ರಹಿಸಿ ಕಿರುತೆರೆ ನಿರ್ಮಾಪಕರ ಸಂಘ ಎಸ್‌.ನಾರಾಯಣ್‌ ಮೇಲೆ ಒತ್ತಡ ತಂದಿತ್ತು. ಅದನ್ನು ಪ್ರಶ್ನಿಸಿ ಅನಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌ ಸಭೆ ಕರೆದಿದ್ದರು. ಈ ವೇಳೆ ಕಿರುತೆರೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಗೈರಾಗಿದ್ದರಿಂದ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.

ಎಸ್‌. ನಾರಾಯಣ್‌ ಜೊತೆ ಕೈ ಜೋಡಿಸಿ 'ಸೂರ್ಯವಂಶ'ಕ್ಕೆ ಎಂಟ್ರಿ ಕೊಟ್ಟ ಅನಿರುದ್ಧ್; ಸಿಂಹ ಘರ್ಜನೆ ಶುರು

ಸಭೆಯ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅನಿರುದ್ಧ, ‘ಜೊತೆಜೊತೆಯಲಿ ಸೀರಿಯಲ್‌ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತು. ಆದರೆ ನಿರ್ದೇಶಕ ಆರೂರು ಜಗದೀಶ್‌ ಸ್ಪಂದಿಸಲಿಲ್ಲ. ಈಗ ಹೊಸ ಧಾರವಾಹಿ ಮಾಡುತ್ತಿದ್ದೇನೆ. ಆದರೆ ಒಂದಿಷ್ಟುಜನ ಅನಿರುದ್ಧ ಅವರನ್ನು ಧಾರಾವಾಹಿಗೆ ಹಾಕಿಕೊಳ್ಳಬೇಡಿ ಎಂದು ನಿರ್ದೇಶಕ ಎಸ್‌.ನಾರಾಯಣ್‌ ಹಾಗೂ ಉದಯ ಟೀವಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಯಾರು ಏನೇ ಮಾಡಿದರೂ ನಾವು ಹೊಸ ಧಾರಾವಾಹಿ ಮಾಡುತ್ತೇವೆ. ನಮಗೆ ಎಲ್ಲರ ಬೆಂಬಲ ಬೇಕು’ ಎಂದು ತಿಳಿಸಿದ್ದಾರೆ.

ಕಾರ್ ಆಕ್ಸಿಡೆಂಟ್‌ನಲ್ಲಿ ಆರ್ಯವರ್ಧನ್ ಖಲಾಸ್, ಉಗಿದು ಉಪ್ಪಿನಕಾಯಿ ಹಾಕ್ತಿರೋ ವೀಕ್ಷಕರು!

ಅನಿರುದ್ಧ ನಟನೆಯ ಹೊಸ ಧಾರಾವಾಹಿ ಸೂರ್ಯವಂಶ: ನಟ ಅನಿರುದ್ಧ ಜತ್ಕರ್‌ ಇದೀಗ ಎಸ್‌ ನಾರಾಯಣ್‌ ನಿರ್ದೇಶನದ ‘ಸೂರ್ಯವಂಶ’ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಶೀಘ್ರದಲ್ಲಿ ಈ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ‘ಜೊತೆ ಜೊತೆಯಲಿ’ ಸೀರಿಯಲ್‌ ಬಳಿಕ ಅನಿರುದ್ಧ ಇದೀಗ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದ್ದಾರೆ. ಈ ವಿಚಾರ ತಿಳಿಸಿರುವ ಅನಿರುದ್ಧ, ‘ಸೂರ್ಯವಂಶ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದಿದ್ದಾರೆ. ಎಸ್‌ ನಾರಾಯಣ್‌ ಜೊತೆಗೆ ಅನಿರುದ್ಧ ಅವರ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದಶಕಗಳ ಹಿಂದೆ ವಿಷ್ಣುವರ್ಧನ್‌ ನಟನೆಯ ‘ಸೂರ್ಯವಂಶ’ ಸಿನಿಮಾವನ್ನು ಎಸ್‌ ನಾರಾಯಣ್‌ ನಿರ್ದೇಶಿಸಿದ್ದರು.