ದೆಹಲಿಯ ಜಂಡೇವಾಲನ್‌ನಲ್ಲಿರುವ 1500 ವರ್ಷಗಳಷ್ಟು ಹಳೆಯ ಗೋರಖನಾಥ್ ದೇವಾಲಯವನ್ನು ಸರ್ಕಾರಿ ಅಧಿಕಾರಿಗಳ ಪಾರ್ಕಿಂಗ್‌ಗಾಗಿ ನೆಲಸಮಗೊಳಿಸಲಾಗುತ್ತಿದೆ ಎಂಬ ಆರೋಪ. ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ₹300 ಕೋಟಿ ಮೌಲ್ಯದ RSS ಕಚೇರಿ ಹಣಕಾಸಿನ ಮೂಲ ಪ್ರಶ್ನಿಸಿದ್ದಾರೆ.

ನವದೆಹಲಿ (ನ.30): ರಾಷ್ಟ್ರ ರಾಜಧಾನಿ ದೆಹಲಿಯ ಜಂಡೇವಾಲನ್‌ನಲ್ಲಿರುವ 1500 ವರ್ಷಗಳಷ್ಟು ಪುರಾತನವಾದ ಗೋರಖನಾಥ್ ದೇವಾಲಯವನ್ನು ದೆಹಲಿ ಸರ್ಕಾರವು ನೆಲಸಮಗೊಳಿಸುತ್ತಿರುವ ವರದಿಯು ದೇಶಾದ್ಯಂತ ಭಾರಿ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) 'ಹಿಂದುತ್ವ'ದ ಲೇಬಲ್ ಹಾಕಿಕೊಳ್ಳುತ್ತಿದ್ದರೂ, ಹಿಂದೂ ದೇವಾಲಯಗಳನ್ನೇ ಕೆಡವಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಆರ್‌ಎಸ್‌ಎಸ್ ಕಚೇರಿ ಬಳಿ ಇರುವ ಈ ದೇವಾಲಯ ತೆರವು ಮಾಡುತ್ತಿರುವ ಕಾರಣ, ಸಚಿವ ಪ್ರಿಯಾಂಕ್ ಖರ್ಗೆ ಅವರು, ಇಲ್ಲಿನ ಆರ್‌ಎಸ್‌ಎಸ್ ಕಟ್ಟಡದ ಮೌಲ್ಯ 300 ಕೋಟಿ ರೂ. ಆಗಿದೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸುವ ಮೂಲಕ ಪುನಃ ಆರ್‌ಎಸ್‌ಎಸ್ ಕೆಣಕುವುದಕ್ಕೆ ಮುಂದಾಗಿದ್ದಾರೆ.

ರಿತು ರಥೌರ್ ಅವರು ತಮ್ಮ ಟ್ವಿಟ್ಟರ್ (ಈಗ X) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. 'ದೆಹಲಿ ಸರ್ಕಾರವು ಜಂಡೇವಾಲನ್‌ನಲ್ಲಿನ ಆರ್‌ಎಸ್‌ಎಸ್ ಕಚೇರಿ ಬಳಿಯಿರುವ 1500 ವರ್ಷಗಳಷ್ಟು ಹಳೆಯದಾದ ಗೋರಖನಾಥ್ ದೇವಸ್ಥಾನವನ್ನು ನೆಲಸಮಗೊಳಿಸುತ್ತಿದೆ. 24x7 ರಾಮ ಕಥೆ ನಡೆಯುವ ಪ್ರಾಚೀನ ದೇವಾಲಯವನ್ನು ಕೆಡವಲಾಗುತ್ತಿದೆ!' ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

ಪಾರ್ಕಿಂಗ್‌ಗಾಗಿ ದೇಗುಲ ಧ್ವಂಸದ ಆರೋಪ

ಈ ದೇವಸ್ಥಾನವನ್ನು ಧ್ವಂಸಗೊಳಿಸಲು ಪ್ರಮುಖ ಕಾರಣ, ಕೇವಲ ಸರ್ಕಾರಿ ಅಧಿಕಾರಿಗಳಿಗೆ ಪಾರ್ಕಿಂಗ್ ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ಎಂಬ ಆರೋಪ ಕೇಳಿ ಬಂದಿದೆ. 'ಯಾವಾಗಲೂ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರೂ, ಬಿಜೆಪಿ ಆಡಳಿತವಿರುವಲ್ಲೆಲ್ಲಾ ಹಿಂದೂ ದೇವಾಲಯಗಳನ್ನು ಗುರಿಯಾಗಿಸಲಾಗುತ್ತಿದೆ. ಹಿಂದೂಗಳು ತಮ್ಮ ದೇವಾಲಯಗಳು ರಕ್ಷಿಸಲ್ಪಡುತ್ತವೆ ಎಂದು ನಂಬಿದರೆ, ಬದಲಾಗಿ ಅವುಗಳನ್ನು ಸದ್ದಿಲ್ಲದೆ ಅಳಿಸಲಾಗುತ್ತಿದೆ' ಎಂದು ರಿತು ರಥೌರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್ ಹಣಕಾಸಿನ ಮೂಲದ ಬಗ್ಗೆ ಸಚಿವರ ಪ್ರಶ್ನೆ

ಈ ವಿವಾದಕ್ಕೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಧ್ವನಿಗೂಡಿಸಿದ್ದಾರೆ. ಆದರೆ ಅವರು ವಿವಾದವನ್ನು ಆರ್‌ಎಸ್‌ಎಸ್‌ನತ್ತ ತಿರುಗಿಸಿದ್ದಾರೆ. "ಆರ್‌ಎಸ್‌ಎಸ್ ಎಂಬುದು ನೋಂದಣಿಯಾಗದ, ನಿಯಂತ್ರಣವಿಲ್ಲದ 'ವ್ಯಕ್ತಿಗಳ ಸಮೂಹ'ವಾಗಿದ್ದು, ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಮತ್ತು ಅನುಮಾನಾಸ್ಪದ ದೇಣಿಗೆಗಳು ಮತ್ತು ಅಕ್ರಮ ಹಣ ವರ್ಗಾವಣೆ (Money-laundering) ಮೂಲಕ ತನ್ನ ಸಾಮ್ರಾಜ್ಯವನ್ನು ನಿರ್ಮಿಸುತ್ತಿದೆ" ಎಂದು ಖರ್ಗೆ ಆರೋಪಿಸಿದ್ದಾರೆ.

ಜಂಡೇವಾಲನ್‌ನಲ್ಲಿರುವ ಆರ್‌ಎಸ್‌ಎಸ್ ಕಚೇರಿಯು 300 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಟ್ಟಡವಾಗಿದೆ. 'ಇವರಿಗೆ ಅಷ್ಟು ಹಣ ಎಲ್ಲಿಂದ ಬಂತು? ಗುರು ದಕ್ಷಿಣೆಯೇ? ಖಂಡಿತ!' ಎಂದು ಪ್ರಶ್ನಿಸಿದ್ದಾರೆ. ಸದ್ಯ ದೆಹಲಿಯಲ್ಲಿ ಪುರಾತನ ದೇವಸ್ಥಾನದ ನೆಲಸಮದ ಸುದ್ದಿ ಮತ್ತು ಅದಕ್ಕೆ ಸಂಬಂಧಿಸಿದ ರಾಜಕೀಯ ಆರೋಪ-ಪ್ರತ್ಯಾರೋಪಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಿಂದೂಪರ ಸಂಘಟನೆಗಳು ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.