ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ನಾಳೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಕಾತರದಿಂದ ಕಾಯುವಂತೆ ಮಾಡಿದೆ. ಭಾರತ ತಂಡದ ಗೆಲುವಿಗಾಗಿ ಮುಸ್ಲಿಮರು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ, ಇತ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲೂ ಅರ್ಚಕರಿಂದ ಟೀಂ ಇಂಡಿಯಾ ಗೆಲುವಿಗೆ ಚಂಡಿಕಾ ಹೋಮ ನಡೆಸಲಾಗಿದೆ.

ಶಿವಮೊಗ್ಗ (ನ.18): 2023ರ ಏಕದಿನ ವಿಶ್ವಕಪ್‌ನಲ್ಲಿ ಸತತ ಗೆಲುವಿನ ಮೂಲಕ ಅಧಿಕಾರಯುತವಾಗಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಟೀಂ ಇಂಡಿಯಾ, ಇತ್ತ ಸೋತು ಪುಟಿದೆದ್ದು ಫೈನಲ್‌ಗೆ ಬಂದಿರುವ ಆಸ್ಟ್ರೇಲಿಯಾ ಎರಡೂ ಬಲಾಢ್ಯ ತಂಡಗಳ ನಡುವೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳನ್ನು ಕಾತರದಿಂದ ಕಾಯುವಂತೆ ಮಾಡಿದೆ.

Add Asianetnews Kannada as a Preferred SourcegooglePreferred

ವಿಶ್ವಕಪ್ ಗೆಲುವಿಗೆ ವಿಶೇಷ ಪೂಜೆ:

ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆಲ್ಲುವ ತಂಡವೆಂದೇ ಹೇಳಲಾಗುತ್ತಿದ್ದರೂ, ಎದುರಾಳಿ ಆಸ್ಟ್ರೇಲಿಯಾ ತಂಡವೂ ಬಲಿಷ್ಠ ತಂಡವಾಗಿರುವುದರಿಂದ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಕೊಂಚ ಆತಂಕವೂ ತಂದೊಡ್ಡಿದೆ. ಹೀಗಾಗಿ ದೇಶಾದ್ಯಂತ ಭಾರತ ವಿಶ್ವಕಪ್ ಗೆಲುವಿಗಾಗಿ ದೇವರಿಗೆ ವಿಶೇಷ ಪೂಜೆ, ಹೋಮ ಹವನಗಳು ನಡೆಸುತ್ತಿರುವ ಭಾರತೀಯರು.

ಮುಸ್ಲಿಮ್ ಬಾಂಧವರ ಪ್ರಾರ್ಥನೆ:

ಭಾರತ ವಿಶ್ವಕಪ್ ಗೆಲ್ಲಲಿ ಎಂದು ಶಿವಮೊಗ್ಗದ ಸೈಯದ್ ಷಾ ದಿವಾನ್ ಹಾಲಿ ದರ್ಗಾ ದಲ್ಲಿ ಮುಸ್ಲಿಮರ ಪ್ರಾರ್ಥನೆ ಮಾಡಿದ್ದಾರೆ. ದುರ್ಗಾ ಕಮಿಟಿ ಅಧ್ಯಕ್ಷ ಹುಸೇನ್ , ಫೈರೋಜ್ ಅಹಮದ್, ಫಿರ್ದೊಷ್ ಮೊದಲಾದವರ ನೇತೃತ್ವದಲ್ಲಿ ನಡೆದಿರುವ ಪ್ರಾರ್ಥನೆ. ಗುರುಗಳ ಸಮಾಧಿಗೆ ಹೂವಿನ ಚಾದರ ಹೊಂದಿಸಿ ಅತ್ತರ್ ಸಿಂಪಡಿಸಿ, ಪ್ರಾರ್ಥನೆ ಮಾಡಿದ್ದಾರೆ. ನಂತರ ದರ್ಗಾ ಮುಂದೆ ಭಾರತದ ಕ್ರಿಕೆಟ್ ತಂಡದ ಪರ ಘೋಷಣೆ ಕೂಗಿರುವ ಮುಸ್ಲಿಂ ಬಾಂಧವರು. "ಗೆಲ್ಲಲಿ ಗೆಲ್ಲಲಿ ಭಾರತ ಗೆಲ್ಲಲಿ' ಎಂದು ಘೋಷಣೆ ಹಾಕಿ ಸಂಭ್ರಮಾಚಾರಿಸಿದ ಮುಸ್ಲಿಮರು.

ನಾಳೆ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಪಂದ್ಯಾಕ್ಕಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು. ಟೀಂ ಇಂಡಿಯಾ ಗೆದ್ದು ಬಾ ಎಂದು ಘೋಷಣೆ ಕೂಗಿದ ಮಲೆನಾಡಿಗರು. ಆಲ್ ದ ಬೆಸ್ಟ್ ಟೀಂ ಇಂಡಿಯಾ ಎಂದು ಭಾರತ ತಂಡದ ಗೆಲುವಿಗೆ ಶುಭಹಾರೈಸಿದ ಕಾಲೇಜು ವಿದ್ಯಾರ್ಥಿಗಳು. ಇಂಡಿಯಾ ಮೂರನೇ ಬಾರಿ ಗೆದ್ದು ಬರಲಿ ಎಂದು ಘೋಷಣೆ ಕೂಗಿ ಚಿಯರ್ ಅಪ್ ಮಾಡಿದ ಕಾಲೇಜು ವಿದ್ಯಾರ್ಥಿನಿಯರು.

ಕೊಹ್ಲಿ, ರೋಹಿತ್, ರಾಹುಲ್ ಯಶಸ್ಸಿನ ಹಿಂದೆ ಕುಮಟಾ ಯುವಕ; 4 ವರ್ಷ ಸ್ಮಶಾನದಲ್ಲಿ ಮಲಗಿದ್ದವನೇ ಟೀಂ ಇಂಡಿಯಾದ ಅಸಲಿ ಬೆನ್ನೆಲುಬು..!

ಭಾರತ ವಿಶ್ವಕಪ್ ಗೆಲುವಿಗೆ ಚಂಡಿಕಾ ಹೋಮ:

ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇಗುಲದಲ್ಲಿ ವಿಶೇಷ ಹೋಮ ನಡೆಸಿದ ಅರ್ಚಕರು. ಚಂಡಿಕಾ ಹೋಮ ಮಾಡುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥಿಸಿದ ಅರ್ಚಕರು. 11 ಜನ ಆಟಗಾರರಿಗೆ 11 ಕಪ್ ಗಳನ್ನು ಇಟ್ಟು ಪೂಜೆ. 11 ಜನ ಪುರೋಹಿತರಿಂದ ಟೀಂ ಇಂಡಿಯಾ ಪರ ಚಂಡಿಕಾ ಹೋಮ ನಡೆಸಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಬಳಿಕ ಗೆದ್ದು ಬಾ ಇಂಡಿಯಾ ಎಂದು ಘೋಷಣೆ ಕೂಗಿ ಶುಭ ಹಾರೈಸಿದರು