Asianet Suvarna News Asianet Suvarna News

Corona Threat To Karnataka : ರಾಜ್ಯದ 4 ಜಿಲ್ಲೆಯಲ್ಲಿ ಕೋವಿಡ್‌ ಏರಿಕೆ : ಕಳವಳ

  • ಒಮಿಕ್ರೋನ್‌ ಭೀತಿ ಸೃಷ್ಟಿಯಾಗಿರುವ ನಡುವೆಯೇ ಕರ್ನಾಟಕದಲ್ಲಿ ಕೋವಿಡ್ ಏರಿಕೆ
  • ಬೆಂಗಳೂರು ನಗರ, ತುಮಕೂರು, ಧಾರವಾಡ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಏರಿಕೆ
Covid Cases raises in Karnataka 4 Districts snr
Author
Bengaluru, First Published Dec 5, 2021, 6:46 AM IST

ನವದೆಹಲಿ (ಡಿ.05): ಒಮಿಕ್ರೋನ್‌ (omicron) ಭೀತಿ ಸೃಷ್ಟಿಯಾಗಿರುವ ನಡುವೆಯೇ ಕರ್ನಾಟಕದ (karnataka) ಬೆಂಗಳೂರು(Bengaluru) ನಗರ, ತುಮಕೂರು (Tumakuru), ಧಾರವಾಡ ಹಾಗೂ ಮೈಸೂರು (Mysuru) ಜಿಲ್ಲೆಗಳಲ್ಲಿ (ಒಟ್ಟು 4 ಜಿಲ್ಲೆಗಳು) ಕೊರೋನಾ (Corona) ಪ್ರಕರಣಗಳು ಹಾಗೂ ಸಾವುಗಳು ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗಿವೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕಕ್ಕೆ ಪತ್ರ ಬರೆದಿದೆ.ಇದೇ ವೇಳೆ ಕರ್ನಾಟಕ ಮಾತ್ರವಲ್ಲದೆ ಕೇರಳದ 13 ಜಿಲ್ಲೆ, ತಮಿಳುನಾಡಿನ 3 ಜಿಲ್ಲೆ, ಜಮ್ಮು-ಕಾಶ್ಮೀರದ 4 ಜಿಲ್ಲೆ, ಒಡಿಶಾದ 6 ಜಿಲ್ಲೆ ಹಾಗೂ ಮಿಜೋರಂನ 5 ಜಿಲ್ಲೆಗಳಲ್ಲೂ ಕೋವಿಡ್‌ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚಿದ್ದು, ಇಲ್ಲೂ ಕ್ರಮ ಜರುಗಿಸಬೇಕು ಎಂದು ಅದು ಆಯಾ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಏರಿಕೆ: ಕರ್ನಾಟಕದಲ್ಲಿ (Karnataka)  ಡಿಸೆಂಬರ್‌ 3ರಂದು ಅಂತ್ಯಗೊಂಡ 30 ದಿನಗಳ ಅವಧಿಯಲ್ಲಿ 8,073 ಕೋವಿಡ್‌ (Covid) ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಡಿ.3ಕ್ಕೆ ಅಂತ್ಯವಾದ ಒಂದು ವಾರದಲ್ಲಿ 2,272 ಪ್ರಕರಣಗಳು ದಾಖಲಾಗಿವೆ. ಆದರೆ ನ.26ಕ್ಕೆ ಅಂತ್ಯಗೊಂಡ ವಾರದಲ್ಲಿ 1664 ಪ್ರಕರಣ ದಾಖಲಾಗಿದ್ದವು. ಇದೇ ವೇಳೆ ವಾರದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಈ ಅವಧಿಯಲ್ಲಿ 22ರಿಂದ 29ಕ್ಕೆ ಏರಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆಯ Health Department) ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

ಇದೇ ವೇಳೆ, ಬೆಂಗಳೂರು (Bengaluru) ನಗರದಲ್ಲಿ ಕೊರೋನಾ ಸಂಬಂಧಿ ಸಾವಿನ ಸಂಖ್ಯೆ ಹೆಚ್ಚಿದೆ. ನ.25ರಂದು ಅಂತ್ಯಗೊಂಡ ವಾರದಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಆದರೆ ಡಿ.2ರಂದು ಅಂತ್ಯಗೊಂಡ ವಾರದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಭೂಷಣ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ತುಮಕೂರು, ಧಾರವಾಡ, ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ವಾರದ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ತುಮಕೂರಿನಲ್ಲಿ (Tumakuru) ಶೇ.152ರಷ್ಟುಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಹೀಗಾಗಿ ಈ ನಾಲ್ಕೂ ಜಿಲ್ಲೆಗಳಲ್ಲಿ ಸರ್ಕಾರವು ‘ಕೊರೋನಾ ಪರೀಕ್ಷೆ-ಸೋಂಕಿತರ ಸಂಪರ್ಕಿತರ ಪತ್ತೆ-ಚಿಕಿತ್ಸೆ-ಲಸಿಕಾಕರಣ-ಕೊರೋನಾ ಸನ್ನಡತೆ ಪಾಲನೆ’ ಈ ತಂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಪ್ರಮಾಣ ನಿಯಂತ್ರಿಸಬೇಕು ಎಂದು ರಾಜೇಶ್‌ ಭೂಷಣ್‌ ಅವರು ಕರ್ನಾಟಕಕ್ಕೆ ಸೂಚಿಸಿದ್ದಾರೆ.

ಲಸಿಕಾ ಕೇಂದ್ರಗಲ ಸಂಖ್ಯೆ ಹೆಚ್ಚಳ : 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯಲ್ಲಿ ಒಮಿಕ್ರೋನ್‌ ಭೀತಿ ಹೆಚ್ಚಾಗಿದ್ದು, ಕೋವಿಡ್‌ ಲಸಿಕೆ(Covid Vaccine) ಪಡೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗಳ ಬೇಡಿಕೆ ಹೆಚ್ಚಳವಾಗಿದೆ.

ಕಳೆದೊಂದು ವಾರದ ಹಿಂದೆ ಲಸಿಕೆ ಪಡೆಯುವಂತೆ ಬಿಬಿಎಂಪಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಲಸಿಕಾ ಕೇಂದ್ರಗಳತ್ತ ಧಾವಿಸದ ಜನರು, ಒಮಿಕ್ರೋನ್‌(Omicron)  ಪತ್ತೆಯಾದ ಬೆನ್ನಲ್ಲೇ ಲಸಿಕೆ ಪಡೆಯುಲು ಮುಗಿಬೀಳುತ್ತಿದ್ದಾರೆ. ಹೀಗಾಗಿ ದಿನವಿಡೀ ಲಸಿಕಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಲಸಿಕೆಗಾಗಿ ಕಾಯುತ್ತಿರುವ ದೃಶ್ಯ ಶುಕ್ರವಾರ ಕಂಡುಬಂತು.

ದಿನಕ್ಕೆ ಕೇವಲ 100 ಲಸಿಕೆಯೂ ಖಾಲಿಯಾಗದಿದ್ದ ಜಾಗದಲ್ಲಿ ಇದೀಗ 300ಕ್ಕೂ ಹೆಚ್ಚು ಡೋಸ್‌ ಲಸಿಕೆಗೆ ಬೇಡಿಕೆ ಬಂದಿದೆ. ಇದರಿಂದ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. 2ನೇ ಡೋಸ್‌ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಹೀಗೆಯೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಶೇ.100ರಷ್ಟು ಗುರಿ ತಲುಪಬಹುದು ಎಂದು ಹೇಳುತ್ತಾರೆ.

Omicron Variant: ಕರ್ನಾಟಕಕ್ಕೆ ಕೊರೋನಾ ಮೂರನೇ ಅಲೆ ಅಪ್ಪಳಿಸುವ ಭೀತಿ?

ಕಳೆದೊಂದು ವಾರದಿಂದ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳ ಸಂಖ್ಯೆಯನ್ನೂ ಕೂಡ ಬಿಬಿಎಂಪಿ ಹೆಚ್ಚಿಸಿದೆ. ಶುಕ್ರವಾರ 380 ಸರ್ಕಾರಿ ಮತ್ತು 176 ಖಾಸಗಿ ಲಸಿಕಾ ಕೇಂದ್ರಗಳು ಸೇರಿ 556 ಲಸಿಕಾ ಕೇಂದ್ರಗಳಲ್ಲಿ 63,731 ಮಂದಿ ಲಸಿಕೆ(Vaccine) ಪಡೆದುಕೊಂಡಿದ್ದಾರೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1,42,24,617 ಡೋಸ್‌ ಲಸಿಕೆ ನೀಡಲಾಗಿದ್ದು, 81,43,025 ಮಂದಿ ಮೊದಲ ಮತ್ತು 60,81,592 ಜನರು ದ್ವಿತೀಯ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಇಳಿಕೆಯಾಗಿದೆ. ಶುಕ್ರವಾರ 57 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಬೊಮ್ಮನಹಳ್ಳಿ 22, ಪೂರ್ವ 12, ದಕ್ಷಿಣ ವಲಯ 7, ಯಲಹಂಕ 7, ಪಶ್ಚಿಮ 6, ಮಹದೇವಪುರ 3 ಮೈಕ್ರೋ ಕಂಟೈನ್ಮೆಂಟ್‌ಗಳಿದ್ದು, ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯ ಮೈಕ್ರೋ ಕಂಟೈನ್ಮೆಂಟ್‌ ಮುಕ್ತವಾಗಿವೆ.

Follow Us:
Download App:
  • android
  • ios