Asianet Suvarna News Asianet Suvarna News

Covid 19 cases ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಭೀತಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ!

  • ರಾಜ್ಯದಲ್ಲಿ ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ, ಸರ್ಕಾರ ಆದೇಶ
  • ನಾಳೆ ಮೋದಿ ಜತೆ ಸಿಎಂ ಸಭೆ ಬಳಿಕ ಮಾರ್ಗಸೂಚಿ ಪ್ರಕಟ
Covid 19 fourth wave Karnataka issues fresh guidelines mask mandatory No spitting in public places ckm
Author
Bengaluru, First Published Apr 26, 2022, 3:08 AM IST

ಬೆಂಗಳೂರು(ಏ.26): ಕೊರೋನಾ ನಾಲ್ಕನೇ ಅಲೆ ರಾಜ್ಯಕ್ಕೆ ಕಾಲಿಟ್ಟಿರುವ ಬಗ್ಗೆ ತಜ್ಞರು ಎಚ್ಚರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ರಾಜ್ಯದಲ್ಲಿ ಮತ್ತೆ ಮಾಸ್‌್ಕ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಗೊಳಿಸಿದ್ದು, ಉಗುಳಿದರೆ ಅದು ದಂಡನಾರ್ಹ ಅಪರಾಧವಾಗುತ್ತದೆ ಎಂದು ಘೋಷಿಸಿದೆ.

ತನ್ಮೂಲಕ ಕೊರೋನಾ ಸೋಂಕು ಪ್ರಕರಣಗಳಲ್ಲಿ ತುಸು ಹೆಚ್ಚಳ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಬಳಿಕ ಮತ್ತೆ ರಾಜ್ಯದಲ್ಲಿ ಮಾಸ್‌್ಕ ಕಡ್ಡಾಯ, ಸಾಮಾಜಿಕ ಅಂತರ ಪಾಲನೆಯಂತಹ ಕೊರೋನಾ ಮಾರ್ಗಸೂಚಿ ನಿಯಮಾವಳಿಗಳನ್ನು ಸರ್ಕಾರ ಪ್ರಕಟಿಸಿದೆ. ಸಾರ್ವಜನಿಕವಾಗಿ ಉಗುಳುವುದು ದಂಡನಾರ್ಹ ಎಂದು ತಿಳಿಸಿದ್ದು, ಆಯಾ ಸ್ಥಳೀಯ ಸಂಸ್ಥೆಗಳ ನಿಯಮಾವಳಿಯಂತೆ ದಂಡ ವಿಧಿಸಲು ಸೂಚಿಸಲಾಗಿದೆ.

ಒಮಿಕ್ರಾನ್ ಉಪತಳಿ ವಿರುದ್ಧ ಕೋವಿಶೀಲ್ಡ್‌ ಲಸಿಕೆ ಪರಿಣಾಮಕಾರಿ ಅಲ್ಲ, ಅಧ್ಯಯನ ವರದಿ ತಂದ ಆತಂಕ!

ನಾಲ್ಕನೇ ಅಲೆ ಕುರಿತು ಮುನ್ನೆಚ್ಚರಿಕೆ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಯಿತು. ಸಭೆ ಬಳಿಕ ಮೊದಲ ಹಂತದ ನಿರ್ಬಂಧಗಳನ್ನಾಗಿ ಸೋಮವಾರ ಸಂಜೆ ಸರ್ಕಾರಿ ಆದೇಶದ ಮೂಲಕ ನಿಯಮಾವಳಿ ಪ್ರಕಟಿಸಿದ್ದು, ಪ್ರಕರಣ ಹೆಚ್ಚಾದರೆ ಸದ್ಯದಲ್ಲೇ ಕಠಿಣ ನಿಯಮ ರೂಪಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿಗಳ ನೇತೃತ್ವದ ಸಭೆ ಬಳಿಕ ಸಚಿವ ಸುಧಾಕರ್‌ ಅವರು ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಚಿಕಿತ್ಸೆಗೆ ಅಗತ್ಯವಾದ ಔಷಧ, ಆಕ್ಸಿಜನ್‌ ಮತ್ತಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೋನಾ 4ನೇ ಅಲೆ ಲಕ್ಷಣ ಗೋಚರ, ತಜ್ಞರ ಸಮಿತಿ ಎಚ್ಚರಿಕೆ!

ಮಾಸ್ಕ್ ಕಡ್ಡಾಯ ಆದರೆ ದಂಡ ಇಲ್ಲ:
ಮಾಸ್‌್ಕ ಧರಿಸುವುದನ್ನು ಕಡ್ಡಾಯಗೊಳಿಸಿದ್ದರೂ ಸದ್ಯಕ್ಕೆ ದಂಡ ಪ್ರಯೋಗಕ್ಕೆ ಮುಂದಾಗಿಲ್ಲ. ಆದರೆ, ಏ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿವಿಧ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಸಭೆಯ ಹೆಚ್ಚುವರಿ ನಿರ್ಬಂಧ ಸೇರಿದಂತೆ ಇತರೆ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ತಗ್ಗಿದ ಹಿನ್ನೆಲೆ ಫೆಬ್ರವರಿ 28 ರಂದು ಕೊರೋನಾ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತು. ಸದ್ಯ ದೆಹಲಿ, ಹರ್ಯಾಣ ಹಾಗೂ ತಮಿಳುನಾಡಿನಲ್ಲಿ ಸೋಂಕು ಪ್ರಕರಣಗಳು ಹೆಚ್ಚಳವಾಗಿವೆ. ಹೀಗಾಗಿ ಅಲ್ಲಿ ಮಾಸ್‌್ಕ ಕಡ್ಡಾಯಗೊಳಿಸಿ ದಂಡವನ್ನೂ ವಿಧಿಸಲಾಗುತ್ತಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದ್ದು, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಿದೆ. ಅಲ್ಲದೇ, ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.2ಕ್ಕೆ ಏರಿಕೆಯಾಗಿದೆ (ಪರೀಕ್ಷೆಗೊಳಪಟ್ಟ100ರಲ್ಲಿ ಇಬ್ಬರಿಗೆ ಸೋಂಕು ದೃಢ). ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಸೋಮವಾರ ತಜ್ಞರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿವಿಧ ಸಭೆಗಳನ್ನು ನಡೆಸಿ ಹೊಸ ಮಾರ್ಗಸೂಚಿ ಹೊರಡಿಸಿದೆ.

ಅದರಂತೆ, ಸಾರ್ವಜನಿಕ ಪ್ರದೇಶಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಪ್ರಯಾಣ ಸಂದರ್ಭದಲ್ಲಿ ಕಡ್ಡಾಯ ಮಾಸ್‌್ಕ ಧರಿಸಬೇಕು. ಜತೆಗೆ ಎರಡು ಅಡಿ ಸಾಮಾಜಿಕ ಅಂತರ ಪಾಲಿಸಬೇಕು. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ಹಾಕಬಹುದು. ಈ ಹೊಸ ನಿಯಮಗಳನ್ನು ಸೂಕ್ತವಾಗಿ ಜಾರಿಗೆ ತರುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.

Follow Us:
Download App:
  • android
  • ios