*  ಫೆ.12ಕ್ಕೆ ಖುದ್ದು ಹಾಜರಾತಿಗೆ ಜನಪ್ರತಿನಿಧಿ ಕೋರ್ಟ್‌ ಆದೇಶ*  ಅಕ್ರಮ ಅದಿರು ಮಾರಾಟ, ರಾಯಲ್ಟಿ ತೆರಿಗೆ ವಂಚನೆ ಪ್ರಕರಣ*  ಸರ್ಕಾರದ ಬೊಕ್ಕಸಕ್ಕೆ 23 ಲಕ್ಷ ರು. ನಷ್ಟ  

ಬೆಂಗಳೂರು(ಜ.28): ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ ಮತ್ತು ಸರ್ಕಾರಕ್ಕೆ ರಾಯಲ್ಟಿ ಹಾಗೂ ಇತರೆ ತೆರಿಗೆ ವಂಚನೆ ಆರೋಪ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Janardhana Reddy) ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ(Criminal Case) ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿ, ಫೆ.12ಕ್ಕೆ ಖುದ್ದು ಹಾಜರಾತಿಗೆ ಸೂಚನೆ ನೀಡಿದೆ.

ತನಿಖಾಧಿಕಾರಿಗಳು ನೀಡಿದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು(Court) ಆರೋಪಿಗಳಾದ ಜನಾರ್ದನ ರೆಡ್ಡಿ, ಅವರ ಆಪ್ತ ಕಾರ್ಯದರ್ಶಿ ಮೆಹಪೂಜ್‌ ಅಲಿಖಾನ್‌, ಓಬಳಾಪುರಂ ಮೈನಿಂಗ್‌ ಕಂಪನಿ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದೆ. ಜತೆಗೆ ಫೆ. 12ರಂದು ಹಾಜರಾಗುವಂತೆ ಸಮನ್ಸ್‌(Summons) ಜಾರಿಗೊಳಿಸಿದೆ.

ಪುನೀತ್‌ ಹೆಸರಲ್ಲಿ ಉಚಿತ ವಸತಿ ಶಾಲೆ, ಆಸ್ಪತ್ರೆ ನಿರ್ಮಾಣ : ಜನಾರ್ದನ ರೆಡ್ಡಿ ಘೋಷಣೆ

2009-10ನೇ ಸಾಲಿನಲ್ಲಿ ಐಟಿ ಅಧಿಕಾರಿಗಳು(IT Officers) ಆರೋಪಿತರ ಸ್ಥಳಗಳ ಮೇಲೆ ದಾಳಿ(Raid) ನಡೆಸಿದಾಗ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆದು ಸಾಗಿಸಿರುವುದು ಗೊತ್ತಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 23 ಲಕ್ಷ ರು. ನಷ್ಟವನ್ನುಂಟು ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.

3 ವರ್ಷದ ಬಳಿಕ ತವರಿಗೆ ರೆಡ್ಡಿ ಎಂಟ್ರಿ: ಬಳ್ಳಾರಿ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ

ಅಕ್ರಮ ಗಣಿಗಾರಿಕೆ ಆರೋಪಿ, ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್​ ಷರತ್ತುಬದ್ಧ ಅನುಮತಿ ನೀಡಿದೆ. 8 ವಾರ ಕಾಲ ಬಳ್ಳಾರಿಯಲ್ಲಿ ತಂಗಬಹುದು ಎಂದೂ ಕೋರ್ಟ್​ ಹೇಳಿದೆ. ಈ ಹಿನ್ನೆಲೆಯಲ್ಲಿ 2020 ರ ಆ. 20 ರಂದು ತವರಿಗೆ ಗಣಿ ಧಣಿ ಎಂಟ್ರಿ ಕೊಟ್ಟಿದ್ದು, ಕುಟುಂಬಸ್ಥರ ಜೊತೆಗೂಡಿ ವರಮಹಾಲಕ್ಷ್ಮೀ ಪೂಜೆ ಮಾಡಿದ್ದರು. 

ಒಂದು ಆದೇಶ, 10 ವರ್ಷ ನಂತ್ರ ಕುಟುಂಬ ಸದಸ್ಯರ ಜತೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಗಣಿ ಧಣಿ

ತವರಿಗೆ ಹೋಗಲು ಸುಪ್ರೀಂಕೋರ್ಟ್‌(Supreme Court) ಅನುಮತಿ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿದ್ದರು. 8 ವಾರ ಕಾಲ ಬಳ್ಳಾರಿಯಲ್ಲಿ ತಂಗಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿದ್ದು 3 ವರ್ಷಗಳ ಬಳಿಕ ಬಳ್ಳಾರಿಗೆ ಆಗಮಿಸಿದ್ದಾರೆ. ಇನ್ನು ವಿಶೇಷ ಅಂದ್ರೆ ಹತ್ತು ವರ್ಷಗಳ ನಂತರ ಹುಟ್ಟೂರು ಬಳ್ಳಾರಿಯ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದರು. 

ಬಳ್ಳಾರಿ: ಗಣೇಶ ವಿಸರ್ಜನೆಯಲ್ಲಿ ರೆಡ್ಡಿ-ರಾಮುಲು ಕುಚುಕು ಗೆಳೆಯರ ಸಂಭ್ರಮ

ರಾಯರ ಸನ್ನಿಧಿಯಲ್ಲಿ ಜನಾರ್ದನ ರೆಡ್ಡಿ, ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹೇಳಿದ್ದಿಷ್ಟು

ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕಳೆದ ವರ್ಷ ಆ.23 ರಂದು ಮಂತ್ರಾಲಯದ ಶ್ರೀ ಗುರುರಾಘವೇಂದ್ರ ರಾಯರ ದರ್ಶನ ಪಡೆದಿದ್ದರು. ಪತ್ನಿ ಅರುಣಾಲಕ್ಷ್ಮೀ ಜತೆ ಭೇಟಿ ನೀಡಿದ ರೆಡ್ಡಿ, 350ನೇ ಆರಾಧ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿದ್ದರು. 

ಬಳಿಕ ಸುದ್ದಿಗಾರರಿಂದಿಗೆ ಮಾತನಾಡಿದ್ದ ಜನಾರ್ದನ ರೆಡ್ಡಿ, ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ. ಕಳೆದ 10 ವರ್ಷಗಳ ಕಾಲ ನನ್ನ ಹುಟ್ಟೂರಿಗೆ ಬರಲಾಗದೇ ವನವಾಸದ ರೀತಿಯ ಸಂಕಷ್ಟ ಅನುಭವಿಸಿದ್ದೆ. ಅದರಿಂದ ಪಾರು ಮಾಡಿದ್ದು ಶ್ರೀ ರಾಘವೇಂದ್ರಸ್ವಾಮಿಗಳ ಪವಾಡ ಎಂದು ಹೇಳಿದ್ದರು. ಇನ್ನು ಇದೇ ವೇಳೆ ರಾಜಕೀಯಕ್ಕೆ ಪ್ರವೇಶ ಮಾಡುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯ ವಿಚಾರದ ಬಗ್ಗೆ ಮಾತಾಡಲ್ಲ. ಸಕ್ರಿಯ ರಾಜಕೀಯಕ್ಕೆ‌ ಮರಳುವ ಬಗ್ಗೆಯೂ ಏನೂ ಹೇಳಲ್ಲ ಎಂದು ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.