ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರ ‘ಭಾಗ್ಯ’: ಸಿಎಂ  ಭ್ರಷ್ಟಾಚಾರ ಬಯಲು ಭೀತಿಯಿಂದ ಲೋಕಾಯುಕ್ತ ಮುಚ್ಚಿದರು: ಬೊಮ್ಮಾಯಿ ರಾಜ್ಯದಲ್ಲೂ ಕಾಂಗ್ರೆಸ್‌ ಮುಳುಗಲಿದೆ: ಕಿಡಿ ಹಿರಿಯೂರು, ಚಳ್ಳಕೆರೆಯಲ್ಲಿ ಜನಸಂಕಲ್ಪ ಯಾತ್ರೆ

 ಚಿತ್ರದುರ್ಗ (ನ.23) : ‘ಭಾಗ್ಯ’ ಯೋಜನೆಗಳ ಮೂಲಕ ಕಾಂಗ್ರೆಸ್‌ ಕನ್ನ ಹೊಡೆಯುವ ಕೆಲಸ ಮಾಡಿತು. ಭ್ರಷ್ಟಾಚಾರ ಕಾರಣಕ್ಕೆ ಎಲ್ಲಾ ರಾಜ್ಯಗಳಲ್ಲಿ ಮೂಲೆಗುಂಪಾಯಿತು. ರಾಜ್ಯದಲ್ಲೂ ಮುಂಬರುವ ಚುನಾವಣೆ ಬಳಿಕ ಕಾಂಗ್ರೆಸ್‌ ಸಂಪೂರ್ಣ ಮುಳುಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿ ಮಂಗಳವಾರ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರದಲ್ಲಿ ಅನ್ನ ಭಾಗ್ಯದ ಅಕ್ಕಿಗೆ ಅವರೇ ಕನ್ನ ಹಾಕಿದರು. ಸಾರ್ವಜನಿಕರಿಗಾಗಿ ಕೊಟ್ಟಿರುವ ಅಕ್ಕಿಯನ್ನು ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ ಮಾರಾಟ ಮಾಡುವ ಕಾರ್ಯದಲ್ಲಿ ಅವರ ಜನರೇ ಶಾಮೀಲಾದರು ಎಂದು ಆರೋಪಿಸಿದರು.

ಬೊಮ್ಮಾಯಿ ವಿರುದ್ಧವೇ ದೂರು ಕೊಟ್ಟಿದ್ದೇವೆ, ಯಾರ ವಿರುದ್ಧ ಸಿಎಂ ತನಿಖೆ ಮಾಡಿಸ್ತಾರೆ?: ಸಿದ್ದು

ಭ್ರಷ್ಟಾಚಾರದ ಜನಕರೇ ಕಾಂಗ್ರೆಸ್ಸಿಗರು. ತಾವು ಮಾಡಿದ ಭ್ರಷ್ಟಾಚಾರ ಬಯಲಾಗುವ ಭಯಕ್ಕೆ ರಾಜ್ಯದಲ್ಲಿ ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದರು. 50ಕ್ಕೂ ಹೆಚ್ಚು ಪ್ರಕರಣದಲ್ಲಿ ರಾಜ್ಯದಲ್ಲಿ ಬಿ ರಿಪೋರ್ಚ್‌ ಆದವು ಎಂದರು.

ರಾಜ್ಯದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಶೋಷಿತರಿಗೆ ನೆರವು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕಡೇ ಪಕ್ಷ ಮೀಸಲಾತಿ ಸಹ ಹೆಚ್ಚಿಸುವ ಕೆಲಸ ಮಾಡಲಿಲ್ಲ. ತಮ್ಮ ಆಳ್ವಿಕೆಯಲ್ಲಿ ಭ್ರಷ್ಟಾಚಾರಕ್ಕೆ ಆದ್ಯತೆ ನೀಡಿ ಇದೀಗ ಕಾಂಗ್ರೆಸ್ಸಿಗರು ಬಿಜೆಪಿಯ ಮೇಲೆ ಸುಳ್ಳು ಆರೋಪ ಹೊರಿಸುವಲ್ಲಿ ನಿರತರಾಗಿದ್ದಾರೆ ಎಂದ ಬೊಮ್ಮಾಯಿ, ಭ್ರಷ್ಟಾಚಾರದ ಕಾರಣಕ್ಕೇ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್‌ ಮೂಲೆ ಗುಂಪಾಗಿದೆ. ಸದ್ಯದಲ್ಲೇ ನಡೆಯಲಿರುವ ಗುಜರಾತ್‌, ಹಿಮಾಚಲ ಪ್ರದೇಶದಲ್ಲೂ ಬಿಜೆಪಿಯೇ ಗೆಲ್ಲಲಿದೆ. ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದರು.

ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಲೆಳೆದ ಬೊಮ್ಮಾಯಿ, ಅವರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಥಳ ನಿಗದಿಯಾಗದಿದ್ದರೂ ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡಿ ಎಂದು ಜನ ಬೆಂಬಲ ಕೇಳುತ್ತಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಬೆಂಬಲ ಇದೆಯೇ ಎಂಬುದನ್ನು ಸಿದ್ದರಾಮಯ್ಯ ಜನತೆಗೆ ಮೊದಲು ಸ್ವಷ್ಟಪಡಿಸಲಿ ಎಂದರು.

ಮಹಾರಾಷ್ಟ್ರ ಗಡಿ ವಿವಾದದ ಕುರಿತು ರಾಜ್ಯದಲ್ಲೂ ತುರ್ತು ಸಭೆ

ಇತ್ತೀಚೆಗೆ ನಡೆದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಗಾಗಿ ರಾಜ್ಯದ ದೂರದೂರುಗಳಿಂದ ಜನರನ್ನು ಕರೆಸಲಾಯಿತು. ಆದರೂ ಆ ಯಾತ್ರೆ ಸಂಪೂರ್ಣ ವಿಫಲವಾಯಿತು. 2023ರ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್‌ ಕರ್ನಾಟಕದಲ್ಲೂ ಸಂಪೂರ್ಣ ಮುಳುಗಲಿದ್ದು, ಸಿದ್ರಾಮಣ್ಣನ ಮುಖ್ಯಮಂತ್ರಿಯಾಗುವ ಹಗಲು ಗನಸು ನನಸಾಗದಂತೆ ಮತದಾರರು ಜಾಗೃತಿ ವಹಿಸಬೇಕಿದೆ ಎಂದು ಬೊಮ್ಮಾಯಿ ತಿಳಿಸಿದರು.