ಪೇದೆ ಹತ್ಯೆ, ಪೊಲೀಸರ ಶೂಟೌಟ್ ಪ್ರಕರಣ ಸಿಐಡಿಗೆ: ಸಚಿವ ಪರಮೇಶ್ವರ್
ಪ್ರಕರಣವನ್ನು ಸಿಐಡಿಯಿಂದ ತನಿಖೆ ಮಾಡಿಸಲಾಗುವುದು. ನಮಗೂ ಸತ್ಯಾಂಶ ಹೊರಬರಬೇಕೆಂಬ ಆಸೆ ಇದೆ, ಯಾರನ್ನೂ ದಿಕ್ಕು ತಪ್ಪಿಸುವ ಅಥವಾ ಯಾವುದೇ ವಿಷಯ ಮುಚ್ಚಿಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್.
ವಿಧಾನ ಪರಿಷತ್(ಜು.19): ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನಲ್ಲಿ ಇತ್ತೀಚೆಗೆ ಅಕ್ರಮ ಮರಳು ಸಾಗಣೆ ತಡೆಯಲು ಮುಂದಾದ ಪೊಲೀಸ್ ಪೇದೆ ಮೈಸೂರು ಚವ್ಹಾಣ್ ಹತ್ಯೆ ಹಾಗೂ ಟ್ರ್ಯಾಕ್ಟರ್ ಮಾಲೀಕ ಸಾಯಿ ಬಣ್ಣ ಕರ್ಜಗಿ ಎಂಬುವರ ಮೇಲೆ ಪೊಲೀಸರು ನಡೆಸಿದ ಶೂಟ್ಔಟ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರಕಟಿಸಿದರು.
ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಸಭಾಪತಿಗಳ ಮುಂದೆ ಬಂದು ಧರಣಿ ಆರಂಭಿಸಿ, ಘೋಷಣೆ ಕೂಗಲಾರಂಭಿಸಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಗೃಹ ಸಚಿವರು, ಪ್ರಕರಣವನ್ನು ಸಿಐಡಿಯಿಂದ ತನಿಖೆ ಮಾಡಿಸಲಾಗುವುದು. ನಮಗೂ ಸತ್ಯಾಂಶ ಹೊರಬರಬೇಕೆಂಬ ಆಸೆ ಇದೆ, ಯಾರನ್ನೂ ದಿಕ್ಕು ತಪ್ಪಿಸುವ ಅಥವಾ ಯಾವುದೇ ವಿಷಯ ಮುಚ್ಚಿಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು. ಸಚಿವರ ಮಾತಿನಿಂದ ಸಮಾಧಾನಗೊಂಡ ಬಿಜೆಪಿ ಸದಸ್ಯರು ಧರಣಿ ಹಿಂಪಡೆದು ಕಲಾಪದಲ್ಲಿ ಭಾಗಿಯಾದರು.
ಯುವಕನಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮ ಎಂದ ಗೃಹ ಸಚಿವರು
ಇದಕ್ಕೂ ಮುನ್ನ ಬಿಜೆಪಿಯ ಶಶೀಲ್ ನಮೋಶಿ ಅವರು ಪೊಲೀಸರ ಗುಂಡೇಟಿನಿಂದ ಸಾಯಿಬಣ್ಣ ಅವರ ಸ್ಥಿತಿ ಗಂಭೀರವಾಗಿದೆ. ಕಲಬುರಗಿಯಿಂದ ಮೈಸೂರಿಗೆ ಕರೆ ತರಲಾಗಿದೆ. ಅವರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಕಲಾಪ ಶುರುವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಆರಂಭಿಸಿ ಘೋಷಣೆ ಕೂಗತೊಡಗಿದಾಗ, ಸಭಾಪತಿ ಬಸವರಾಜ ಹೊರಟ್ಟಿಅವರು ಈ ಬಗ್ಗೆ ಸರ್ಕಾರ ಸೋಮವಾರ ಉತ್ತರ ಕೊಟ್ಟಿದೆ. ಧರಣಿ ಕೈ ಬಿಟ್ಟು ಕಲಾಪದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಆದರೂ ಘೋಷಣೆ ಕೂಗಿದಾಗ ಸ್ಪೀಕರ್ ಗರಂ ಆದರು.
ನಮಗೆ 136 ಸೀಟು ಬಂದಿದ್ದಕ್ಕೆ ಶೋಭಾಗೆ ಹೊಟ್ಟೆ ಉರಿ: ಸಚಿವ ಪರಮೇಶ್ವರ್
ಈ ಮಧ್ಯ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಅನೇಕ ಸದಸ್ಯರು ಜೋರಾಗಿ ಘೋಷಣೆ ಕೂಗತೊಡಗಿದಾಗ, ಸಭಾಪತಿಗಳು ಧರಣಿ ವೇಳೆ ಘೋಷಣೆ ಕೂಗಲು ಅವಕಾಶವಿಲ್ಲ. ಮಾತನಾಡುವುದಿದ್ದರೆ ತಮ್ಮ ಸ್ಥಳಕ್ಕೆ ಬಂದು ಮಾತನಾಡುವಂತೆ ಸೂಚಿಸಿದರು.
ಆಗ ನಾರಾಯಣಸ್ವಾಮಿ ಅವರು ಧಿಕ್ಕಾರ ಕೂಗುವ ಹಕ್ಕು ಪ್ರತಿಪಕ್ಷಗಳಿಗೆ ಇದೆ ಎಂದು ಸಮಜಾಯಿಷಿ ನೀಡಿದರು. ಇದರಿಂದ ಕೊಂಚ ಗರಂ ಆದ ಹೊರಟ್ಟಿಅವರು, ನಿಯಮದಂತೆ ನಡೆದುಕೊಳ್ಳಿ ಎಂದರು. ಅದಕ್ಕೆ ನಾರಾಯಣಸ್ವಾಮಿ ನೀವು ಇಲ್ಲಿದ್ದಾಗ ಧಿಕ್ಕಾರದ ಘೋಷಣೆ ಕೂಗಿದ್ದೀರಿ ಎಂದು ಪ್ರತ್ಯುತ್ತರಿಸಿದರು. ಇದಕ್ಕೆ ತಾವು ಎಂದೂ ಘೋಷಣೆ ಕೂಗಿಲ್ಲ ಎಂದು ಸಭಾಪತಿಗಳು ಹೇಳಿದರು. ಕೆಲ ನಿಮಿಷಗಳ ಕಾಲ ಇದೇ ವಿಷಯ ಕುರಿತು ಮಾತಿನ ಚಕಮಕಿ ಸಹ ನಡೆಯಿತು.