Asianet Suvarna News Asianet Suvarna News

ಬೆಂಗಳೂರು: ನಗರ ಸುತ್ತ 287 ಕಿ.ಮೀ ರಿಂಗ್‌ರೈಲ್‌ ನಿರ್ಮಾಣ: ಕೇಂದ್ರ ಸಚಿವ ವೈಷ್ಣವ್

ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊರವಲಯದ ಸುತ್ತಲೂ ಸುಮಾರು 287 ಕಿ.ಮೀ ಉದ್ದದ ‘ರಿಂಗ್‌ ರೈಲ್‌’ ಯೋಜನೆ ರೂಪಿಸಲು ನಿರ್ಧರಿಸಿದ್ದು, ಇದರ ಅಧ್ಯಯನಕ್ಕಾಗಿ ₹7 ಕೋಟಿ ಮಂಜೂರಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

Construction of 287 km circular railway around the city says UM Vaishnav rav
Author
First Published Nov 28, 2023, 12:01 PM IST

ಬೆಂಗಳೂರು (ನ.28): ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊರವಲಯದ ಸುತ್ತಲೂ ಸುಮಾರು 287 ಕಿ.ಮೀ ಉದ್ದದ ‘ರಿಂಗ್‌ ರೈಲ್‌’ ಯೋಜನೆ ರೂಪಿಸಲು ನಿರ್ಧರಿಸಿದ್ದು, ಇದರ ಅಧ್ಯಯನಕ್ಕಾಗಿ ₹7 ಕೋಟಿ ಮಂಜೂರಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ವಿಭಾಗೀಯ ರೈಲ್ವೇ ಕಚೇರಿಯಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು ಉಪನಗರ ರೈಲ್ವೇ ಯೋಜನೆ (ಬಿಎಸ್‌ಆರ್‌ಪಿ), ನಮ್ಮ ಮೆಟ್ರೋ ರೈಲಿಗೆ ಪೂರಕವಾಗಿ ನಗರದ ಸುತ್ತ ವೃತ್ತಾಕಾರವಾಗಿ ‘ರಿಂಗ್‌ ರೈಲ್‌’ ಯೋಜನೆ ನಿರ್ಮಾಣಗೊಳ್ಳಲಿದೆ. ‘ರಿಂಗ್ ರೈಲ್‌’ಗೆ ಸುತ್ತಲಿನ ನಗರಗಳಾದ ನಿಡವಂದ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೀಲಲಿಗೆ, ಸೋಲೂರು, ಮಾಲೂರು ಸೇರಿ ಇತರೆ 8 ಕಡೆಗಳಿಂದ ಸಂಪರ್ಕ ಇರಲಿದೆ. ಅದೇ ರೀತಿ ಹತ್ತು ಕಡೆ ನಗರದ ಒಳಭಾಗದಿಂದ ಸಂಪರ್ಕ ಇರಲಿದೆ ಎಂದು ಹೇಳಿದರು.

ಏನೇ ಕೆಲಸ ಮಾಡಲಿ, ಬಿಹಾರಿಗಳ ದೀಪಾವಳಿ ಕುಟುಂಬದೊಂದಿಗೆ, ಈ ಟೈಮಲ್ಲಿ 4 ಹೆಚ್ಚು ರೈಲು ಬಿಡಬಾರಾದಾ ಅಶ್ವಿನ್ ವೈಷ್ಣವ್?

ಪೂರ್ವ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ₹ 7 ಕೋಟಿ ಮಂಜೂರಾಗಿದೆ. ನಿಲ್ದಾಣ, ಹಳಿಯ ಮಾರ್ಗ ಸೇರಿ ನೀಲನಕ್ಷೆ ಕುರಿತು ಅಧ್ಯಯನ ನಡೆಯಲಿದ್ದು, ಬಳಿಕ ವಿಸ್ತ್ರತ ಯೋಜನಾ ವರದಿ ರೂಪಿಸಿಕೊಳ್ಳಲಾಗುವುದು. ಯೋಜನೆಯನ್ನು ನೈಋತ್ಯ ರೈಲ್ವೇ ವಲಯ ಕಾರ್ಯಗತಗೊಳಿಸಲಿದೆ. ನಗರದಲ್ಲಿ ಮುಂದಿನ 20-30 ವರ್ಷಗಳ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಲ್ಲಿ ರಿಂಗ್‌ ರೈಲ್‌ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿವರಿಸಿದರು.

ಬೆಂಗಳೂರು ಉಪನಗರ ರೈಲ್ವೇ ಯೋಜನೆ ಜಾರಿ ವಿಳಂಬ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ಕೆ ರೈಡ್‌ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆ. ಕಾಯಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಇಲ್ಲದಿರುವುದು ಗಮನಕ್ಕಿದೆ. ಆದರೆ, ಇದು ಯೋಜನೆ ವಿಳಂಬಕ್ಕೆ ಕಾರಣವಾಗಲ್ಲ. ತಾಂತ್ರಿಕ ಕೌಶಲ್ಯ, ರೈಲ್ವೇ ಹಾಗೂ ಆಡಳಿತಾತ್ಮಕ ಅನುಭವ ಇರುವ ಅಧಿಕಾರಿ ಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಜೊತೆಗೆ ಚರ್ಚಿಸಿ ಕಾಯಂ ಎಂಡಿ ನಿಯೋಜನೆಗೆ ಕ್ರಮ ವಹಿಸಲಿದ್ದೇವೆ ಎಂದು ಸಚಿವರು ಹೇಳಿದರು.

ಉಪನಗರ ರೈಲ್ವೇ ಯೋಜನೆ ಜಾರಿಗೆ ಅನುದಾನ ಸಂಗ್ರಹ ಒಪ್ಪಂದ ಇದೇ ವರ್ಷ ಮುಗಿಯಲಿದೆ ಎಂದು ಕೆ ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯಿಂದ ನಿವೇಶನ, ಮನೆ ಕಳೆದುಕೊಳ್ಳುವವರಿಗೆ ಪರಿಹಾರ ವಿತರಣೆ ಹಾಗೂ ತಂತ್ರಜ್ಞಾನ ಅಳವಡಿಕೆ ಕುರಿತು ಕ್ರಮ ವಹಿಸಲಾಗಿದೆ. ಬೆಂಗಳೂರು ದಂಡು ಹಾಗೂ ವೈಟ್‌ಫೀಲ್ಡ್‌ ನಡುವಿನ ಎರಡು ಜೋಡಿಹಳಿ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಇನ್ನು, ಹಿಂದೆ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಕೇವಲ ₹ 835ಕೋಟಿ ಬಿಡುಗಡೆ ಆಗುತ್ತಿತ್ತು. ಆದರೆ, ನಮ್ಮ ಸರ್ಕಾರ ₹ 7561 ಕೋಟಿ ಬಿಡುಗಡೆ ಮಾಡಿದೆ. ಒಟ್ಟಾರೆ ರೈಲ್ವೆಯ ಅಭಿವೃದ್ಧಿಗೆ ಇಲಾಖೆ 47,346 ಹೂಡಿಕೆ ಮಾಡುತ್ತಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಕೆಟ್ಟ ಯೋಜನೆಗಳಿಂದಾಗಿ ನಿರೀಕ್ಷಿತ ಪ್ರಗತಿ ಆಗಿರಲಿಲ್ಲ. ಅವರ ಅವಧಿಯಲ್ಲಿ ಕೇವಲ ವರ್ಷಕ್ಕೆ 1500 ಕಿಮೀ ಉದ್ದದಷ್ಟು ಹೊಸ ಟ್ರ್ಯಾಕ್‌ ಅಳವಡಿಕೆ ಆಗುತ್ತಿದ್ದವು. ಆದರೆ, ಕಳೆದ ವರ್ಷವೊಂದರಲ್ಲೇ ನಾವು 5ಸಾವಿರ ಕಿಮೀ ಅಳವಡಿಕೆ ಮಾಡಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಜಾಗತಿಕ ಮಟ್ಟದ ವಿನ್ಯಾಸದಲ್ಲಿ 57 ನಿಲ್ದಾಣಗಳು ನಿರ್ಮಾಣ ಆಗುತ್ತಿವೆ ಎಂದರು.

 

ವಂದೇ ಭಾರತ್ ರೈಲೇಕೆ ಮೋದಿಗೆ ಅಚ್ಚುಮೆಚ್ಚು? ಅವರೇ ಯಾಕೆ ಉದ್ಘಾಟಿಸೋದು?

ಬೆಂಗಳೂರು-ಮಂಗಳೂರು ಮಾರ್ಗ ಭೂ ಕುಸಿತ ನಿವಾರಣೆಗೆ ಸೂಚನೆ

ಮಂಗಳೂರಿಗೆ ವಂದೇ ಭಾರತ್‌ ರೈಲು ಸಂಪರ್ಕ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ ಎಂದು ನೈಋತ್ಯ ರೈಲ್ವೇ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಇವುಗಳನ್ನು ನಿವಾರಿಸಿ ವಿದ್ಯುದೀಕರಣ ಸೇರಿ ಇತರೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚಿಸಿದ್ದೇವೆ. ಅದೇ ರೀತಿ ಬೆಂಗಳೂರು-ಮಂಗಳೂರು ನಡುವಿನ ರೈಲ್ವೇ ಮಾರ್ಗದಲ್ಲಿ ಉಂಟಾಗುವ ಭೂಕುಸಿತ ಸೇರಿ ಇತರೆ ತಾಂತ್ರಿಕ ಸಮಸ್ಯೆ ನಿವಾರಣೆಗೆ ಹಾಸನ-ಮಂಗಳೂರು ರೈಲ್ ಡೆವಲಪ್‌ಮೆಂಟ್‌ ಕಂಪನಿಗೆ ಸೂಚಿಸಲಾಗಿದೆ ಎಂದರು.

Latest Videos
Follow Us:
Download App:
  • android
  • ios