ನಗರ ವೈಭವ ಮರಳಿ ಪಡೆಯಲು ಕೈಯಿಂದ ‘ಬೆಟರ್‌ ಬೆಂಗಳೂರು’ ಕ್ರಿಯಾ ಸಮಿತಿ ರಚನೆ ಕ್ರಿಯಾ ಸಮಿತಿ ರಚಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆದೇಶ 20 ದಿನದಲ್ಲಿ ವರದಿ ನೀಡಲು ಸೂಚನೆ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಸಮಿತಿ 

ಬೆಂಗಳೂರು (ಸೆ.12) : ನಗರದ ವೈಭವವನ್ನು ಮರಳಿ ತರಲು ಅಗತ್ಯವಿರುವ ಕ್ರಮಗಳ ಬಗ್ಗೆ ವರದಿ ನೀಡಲು ‘ಬೆಟರ್‌ ಬೆಂಗಳೂರು’ ಕ್ರಿಯಾ ಯೋಜನಾ ಸಮಿತಿ ರಚನೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. ಸಮಿತಿಯು ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಕುರಿತು ವಿವಿಧ ಕ್ಷೇತ್ರಗಳಲ್ಲಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಇಪ್ಪತ್ತು ದಿನಗಳಲ್ಲಿ ವರದಿ ಸಲ್ಲಿಸಲಿದೆ.

ನಿನ್ನ ಭ್ರಷ್ಟಾಚಾರದಿಂದಲೇ ಬೆಂಗಳೂರಿಗೆ ಈ ಸ್ಥಿತಿ: ಸಿಎಂ ವಿರುದ್ಧ ಏಕವಚನದಲ್ಲಿ ಡಿಕೆಶಿ ವಾಗ್ದಾಳಿ

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ(Ramalingareddy) ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದು, ರಾಜ್ಯಸಭಾ ಮಾಜಿ ಸಂಸದ ರಾಜೀವ್‌ ಗೌಡ(Rajeev Gowda) ಸಂಚಾಲಕರಾಗಿ, ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್‌(G.Parameshwar) ಮಾಜಿ ಸಚಿವರಾದ ಕೆ.ಜೆ.ಜಾಜ್‌ರ್‍(K.J.George) ಮತ್ತು ಕೃಷ್ಣ ಬೈರೇಗೌಡ(Krishnabairegowda) ಹಾಗೂ ಶಾಸಕರಾದ ಎನ್‌.ಎ.ಹ್ಯಾರಿಸ್‌(N.A.Haris) ಮತ್ತು ರಿಜ್ವಾನ್‌ ಅರ್ಷದ್‌(rizwan arshad) ಅವರು ಸದಸ್ಯರಾಗಿದ್ದಾರೆ. ಬೆಂಗಳೂರಿನ ಇಬ್ಬರು ಮಾಜಿ ಮೇಯರ್‌ಗಳಾದ ಪದ್ಮಾವತಿ ಮತ್ತು ಗಂಗಾಂಬಿಕೆ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ಹಿಂದೆ ಜನರಿಗೆ ನೀಡಿದ ಭರವಸೆಯಂತೆ ನಮ್ಮ ಬೆಂಗಳೂರಿನ ಹಿರಿಮೆಯನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ‘ಬೆಟರ್‌ ಬೆಂಗಳೂರು’ ಎನ್ನುವ ಕ್ರಿಯಾ ಸಮಿತಿಯನ್ನು ರಚಿಸಿದ್ದೇನೆ. ಈ ಸಮಿತಿಯು 20 ದಿನಗಳೊಳಗೆ ವರದಿಯನ್ನು ನೀಡಲಿದೆ. ಇದರ ಆಧಾರದ ಮೇಲೆ ನಾವು ಅಧಿಕಾರಕ್ಕೆ ಬಂದ ತಕ್ಷಣ ಕಾರ್ಯಗತಗೊಳಿಸಬೇಕಿರುವ ಯೋಜನೆ ರೂಪಿಸುತ್ತೇವೆ ಎಂದು ಶಿವಕುಮಾರ್‌(D.K.Shivakumar) ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಗೊಡ್ಡು ಬೆದರಿಕೆಗಳಿಗೆ ಹೆದರುವ ಮಗನಲ್ಲ: ಬಿಜೆಪಿ ತನಿಖಾಸ್ತ್ರಕ್ಕೆ ಡಿಕೆಶಿ ತಿರುಗೇಟು

ಸಮಿತಿಯು ಬೆಂಗಳೂರಿನ ನಿವಾಸಿಗಳು, ಸಿವಿಲ… ಎಂಜಿನಿಯರ್‌ಗಳು, ರಿಯಲ… ಎಸ್ಟೇಟ್‌ ಡೆವಲಪರ್‌ಗಳು, ಪರಿಸರ ಕಾರ್ಯಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದು, ಈ ವರ್ಷ ಬೆಂಗಳೂರಿನಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾದ ಪ್ರಾಥಮಿಕ ಕಾರಣಗಳನ್ನು ಪತ್ತೆ ಮಾಡುತ್ತದೆ. ತಜ್ಞರು ನೀಡಿದ ಸಲಹೆಗಳ ಆಧಾರದ ಮೇಲೆ ಸಮಿತಿಯು ತನ್ನ ವರದಿ ಮತ್ತು ಶಿಫಾರಸುಗಳನ್ನು ಸಿದ್ಧಪಡಿಸಿ ಪಕ್ಷಕ್ಕೆ ಸಲ್ಲಿಸಲಿದೆ ಎಂದು ಹೇಳಿದ್ದಾರೆ.