2 ಎಂಪಿ ಸೀಟಿಗೆ ‘ಕೈ’ ಅಲ್ಪಸಂಖ್ಯಾತರ ಬೇಡಿಕೆ; ಗೆಲ್ಲುವ ಕಡೆ ಅವಕಾಶ: ಡಿಕೆಶಿ
ಕಾಂಗ್ರೆಸ್ನ ಅಲ್ಪಸಂಖ್ಯಾತ ನಾಯಕರ ಜತೆ ಸಭೆ ನಡೆಸಲಾಗಿದೆ. ಈ ವೇಳೆ ಲೋಕಸಭೆಯಲ್ಲಿ ಎರಡು ಸ್ಥಾನ ಹಾಗೂ ಪಾಲಿಕೆ ಚುನಾವಣೆಗಳಲ್ಲಿ ಆದ್ಯತೆ ಕೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಗೆಲ್ಲುವ ಕಡೆ ಅವಕಾಶ ನೀಡುತ್ತೇವೆ ಎಂದು ಡಿಸಿಎಂ ಡಿಕೆಶಿ ತಿಳಿಸಿದರು
ಬೆಂಗಳೂರು (ಆ.7) : ಕಾಂಗ್ರೆಸ್ನ ಅಲ್ಪಸಂಖ್ಯಾತ ನಾಯಕರ ಜತೆ ಸಭೆ ನಡೆಸಲಾಗಿದೆ. ಈ ವೇಳೆ ಲೋಕಸಭೆಯಲ್ಲಿ ಎರಡು ಸ್ಥಾನ ಹಾಗೂ ಪಾಲಿಕೆ ಚುನಾವಣೆಗಳಲ್ಲಿ ಆದ್ಯತೆ ಕೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಗೆಲ್ಲುವ ಕಡೆ ಅವಕಾಶ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜತೆಗೆ, ಬಿಬಿಎಂಪಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವಂತೆ ಕೋರಿದ್ದಾರೆ. ಈ ಬಗ್ಗೆ ಚುನಾವಣಾ ಸಮಿತಿ ಮುಂದೆ ಪ್ರಸ್ತಾವನೆಯಿಟ್ಟು ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದೂ ಹೇಳಿದ್ದಾರೆ.
ಕಿಂಗ್ ಮೇಕರ್ ಕನಸು ಭಗ್ನಗೊಂಡು ಕುಮಾರಸ್ವಾಮಿ ಹತಾಶೆ ಕೂಪದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ: ಕಾಂಗ್ರೆಸ್ ಟೀಕೆ
ಭಾನುವಾರ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಸಚಿವರಾದ ರಹೀಂ ಖಾನ್, ಶಾಸಕರಾದ ತನ್ವೀರ್ಸೇಠ್, ಎನ್.ಎ. ಹ್ಯಾರಿಸ್ ಸೇರಿದಂತೆ 30ಕ್ಕೂ ಹೆಚ್ಚು ನಾಯಕರ ಸಭೆ ನಡೆಯಿತು.
ಬಳಿಕ ಮಾತನಾಡಿದ ಶಿವಕುಮಾರ್, ಇಂದು ಪಕ್ಷದ ಅಲ್ಪಸಂಖ್ಯಾತ ನಾಯಕರ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಳಿದ್ದಾರೆ. ಬಿಜೆಪಿ ಸರ್ಕಾರ ವಾರ್ಡ್ ಮರುವಿಂಗಡಣೆ ಹೆಸರಲ್ಲಿ ಇವರ ಕ್ಷೇತ್ರಗಳನ್ನು ವಿಭಜಿಸಿ, ಈ ಸಮುದಾಯದವರು ಅವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗದ ರೀತಿಯಲ್ಲಿ ಮಾಡಿತ್ತು. ಆ ಮೂಲಕ ಅವರ ಮತಗಳನ್ನು ಒಡೆಯುವ ಕೆಲಸ ಮಾಡಲಾಗಿತ್ತು. ಹೀಗಾಗಿ ಅಲ್ಪಸಂಖ್ಯಾತರು ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿದ್ದಾರೆ. ಈ ವಿಚಾರವನ್ನು ಪಾಲಿಕೆ ಚುನಾವಣೆ ಸಮಿತಿ ಮುಂದೆ ಇಡಲಾಗುವುದು. ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ 2 ಸ್ಥಾನ ನೀಡಬೇಕು ಎಂಬ ಬೇಡಿಕೆ ಬಗ್ಗೆ, ‘ಅವರ ಬೇಡಿಕೆಯಂತೆ ಸ್ಥಾನ ನೀಡಬೇಕು. ಅದರಲ್ಲಿ ತಪ್ಪೇನಿದೆ? ಅವರ ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಪ್ರಾತಿನಿಧ್ಯ ನೀಡಬೇಕು. ಎಲ್ಲಿ ಅವರು ಗೆಲ್ಲುವ ಅವಕಾಶ ಇರುತ್ತದೆಯೋ ಅಲ್ಲಿ ಟಿಕೆಟ್ ನೀಡಲಾಗುವುದು’ ಎಂದರು.
ನಿಗಮ-ಮಂಡಳಿ ಸ್ಥಾನಗಳಿಗೆ ಬೇಡಿಕೆ- ಸಲೀಂ:
ಸಲೀಂ ಅಹಮದ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಬಜೆಟ್ನಲ್ಲಿ ಅನ್ಯಾಯವಾಗಿಲ್ಲ. ಹೆಚ್ಚು ಅನುದಾನವನ್ನು ನೀಡಿದ್ದಾರೆ. ಇನ್ನು ನಾವು ಪರಿಷತ್ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಬದಲಿಗೆ ನಿಗಮ-ಮಂಡಳಿಯಲ್ಲಿ ಸಮುದಾಯದ ಹೆಚ್ಚು ಮಂದಿಗೆ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಅವಕಾಶ ನೀಡುವಂತೆ ಕೋರಿದ್ದೇವೆ ಎಂದರು.
'ನಾನಾ-ನೀನಾ' ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ?: ಬಂಡೆ ವಿರುದ್ಧ 'ಕಮಿಷನ್ ಬಾಂಬ್' ಸಿಡಿಸಿದ ದಳಪತಿ
ಈ ಬಾರಿ ಶೇ.95ರಷ್ಟುಮಂದಿ ಅಲ್ಪಸಂಖ್ಯಾತರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕೂಡ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಎಲ್ಲೆಲ್ಲಿ ಅವಕಾಶ ಇದೆಯೋ ಅಲ್ಲಿ ನೀಡುವ ಭರವಸೆ ನೀಡಿದ್ದಾರೆ. ಪರಿಷತ್ ಸ್ಥಾನವನ್ನೂ ನೀಡುವ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.