ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹೊರಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲಗಳೇ ಆದವು. ಇದೀಗ ಈ ಪ್ರಕರಣದಿಂದ ರಾಜಕಾರಣಿಗಳೆಂದರೆ ಹೇಸರಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. 

ಬೆಂಗಳೂರು (ಮಾ.07): ಜನರು ಹೇಸಿಗೆ ಪಡುವ ಮಟ್ಟಕ್ಕೆ ಇಂದಿನ ರಾಜಕಾರಣ ಬಂದಿದೆ. ಕೆಲವರು ಮಾಡುವ ತಪ್ಪಿನಿಂದ ರಾಜಕಾರಣಿಗಳ ಸಮೂಹವನ್ನೇ ಜನರು ದೂಷಿಸುವಂತಾಗಿದೆ. ಇಂತಹ ಕೆಲವರ ನಡವಳಿಕೆಗಳಿಂದ ‘ರಾಜಕಾರಣಿಗಳು ಎಂದರೆ ಲಫಂಗಗಳು’ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ರಮೇಶ್‌ ಜಾರಕಿಹೊಳಿರಾಸಲೀಲೆ ಸಿ.ಡಿ. ಪ್ರಕರಣ ಹಾಗೂ ಆರು ಮಂದಿ ಸಚಿವರು ತಮ್ಮ ವಿರುದ್ಧ ಮಾನಹಾನಿ ವರದಿ ಪ್ರಸಾರ ಮಾಡದಂತೆ ಕೋರ್ಟ್‌ ಮೊರೆ ಹೋಗಿರುವ ಕುರಿತು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಬಿಜೆಪಿಯಲ್ಲಿ ಯಾರೂ ಪ್ರಾಮಾಣಿಕರು ಇಲ್ಲ. ಅಲ್ಲಿರುವವರೆಲ್ಲರೂ ಕಳ್ಳರೇ. ಇತ್ತೀಚಿನ ಪ್ರಕರಣಗಳನ್ನು ಗಮನಿಸಿದರೆ ರಾಜಕಾರಣದ ಬಗ್ಗೆ ಜನ ಹೇಸಿಗೆ ಪಡುವ ಸ್ಥಿತಿ ಬಂದಿದೆ. ರಾಜಕಾರಣಿಗಳು ಎಂದರೆ ಲಫಂಗಗಳು ಎನ್ನುವಂತಾಗಿದೆ. ಇದನ್ನು ನಾನು ಹೇಳುತ್ತಿಲ್ಲ. ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದರು. ರಮೇಶ್‌ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ನಿಮ್ಮ ಹಿನ್ನೆಲೆ ಏನು?: ಸಿದ್ದುಗೆ ಯಡಿಯೂರಪ್ಪ ತಿರುಗೇಟು ...

ಪಕ್ಷ ಬಿಟ್ಟವರ ಬಗ್ಗೆ ಅನುಕಂಪವಿಲ್ಲ: ಸಿ.ಡಿ. ವಿಚಾರದಲ್ಲಿ ಪ್ರಸ್ತಾಪವಾಗಿರುವ ಹೆಸರಿನ ಯಾವ ಸಚಿವರ ಬಗ್ಗೆಯೂ ನನಗೆ ಅನುಕಂಪ ಇಲ್ಲ. ನಾನು ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೇನೆ. ಆರು ಮಂದಿ ಸಚಿವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ವಿವರ ಪಡೆದು ಆ ಬಗ್ಗೆಯೂ ಭಾನುವಾರ ಮಾತನಾಡುತ್ತೇನೆ. ನಮ್ಮ ಸರ್ಕಾರ ಬೀಳಿಸಿ, ಪಕ್ಷ ದ್ರೋಹ ಮಾಡಿ ಹೋಗಿರುವವರ ಬಗ್ಗೆ ನನಗೆ ಅನುಕಂಪ ಬರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.