ಸಿಎಂ ರಾಜೀನಾಮೆ ಬಾಂಬ್ ಗೆ ಸಿದ್ದರಾಮಯ್ಯ ನೀಡಿದ ಸಮರ್ಥನೆ ಏನು..?
ಕಾಂಗ್ರೆಸ್ ನಾಯಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಗರಂ ಆದರೆ ಇತ್ತ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ತಮ್ಮವರ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು/ ಮೈಸೂರು : ಸಿದ್ದರಾಮಯ್ಯ ಅವರ ಆಪ್ತ ಶಾಸಕರು ನೀಡಿದ ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೆಂಡಾಮಂಡಲರಾದರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಉಳಿದ ನಾಯಕರು ಪರೋಕ್ಷವಾಗಿ ತಮ್ಮ ಶಾಸಕರನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಪರಮೇಶ್ವರ್ ಅವರು, ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಸರ್ಕಾರದ ಬಗ್ಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಬೇರೆ ಅರ್ಥದಲ್ಲಿ ಹೇಳಿರಬಹುದು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆ ಕ್ಷಣದ ಪ್ರತಿಕ್ರಿಯೆಯಾಗಿ ರಾಜೀನಾಮೆ ಮಾತು ಆಡಿರಬಹುದು. ಆದರೆ, ಈ ಬಗ್ಗೆ ನಾನು ಅವರೊಂದಿಗೆ ಮಾತನಾಡಿದ್ದೇನೆ. ಸ್ವಲ್ಪ ಬೇಜಾರಾಗಿತ್ತು ಅಷ್ಟೇ ಎಂದು ಅವರು ನನಗೆ ತಿಳಿಸಿದ್ದಾರೆ. ಇಷ್ಟಕ್ಕೂ ಇದು ಸಣ್ಣ ವಿಚಾರ. ಮಾಧ್ಯಮಗಳು ದೊಡ್ಡದು ಮಾಡಬಾರದು ಎಂದರು.
ಮುಖ್ಯಮಂತ್ರಿಯವರಿಗೆ ನಮ್ಮ ಶಾಸಕರ ಕೆಲ ಹೇಳಿಕೆಯಿಂದ ಸ್ವಲ್ಪ ನೋವಾಗಿರಬಹುದು. ಆದರೆ, ರಾಜೀನಾಮೆಯಂತಹ ಹಂತಕ್ಕೆ ಹೋಗುವ ಅಗತ್ಯವೇನಿಲ್ಲ. ಸೋಮಶೇಖರ್ ಹಿಂದಿನ ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಬಗ್ಗೆ ಹೇಳಿರಬಹುದು. ಬೆಂಗಳೂರು ನಗರ ಸಚಿವನಾಗಿ ನನಗೆ ಈ ಸರ್ಕಾರದಲ್ಲೂ ಎಷ್ಟುಅಭಿವೃದ್ಧಿ ನಡೆದಿದೆ ಎಂಬುದು ಗೊತ್ತು. 8 ಸಾವಿರ ಕೋಟಿ ರು. ಆ್ಯಕ್ಷನ್ ಪ್ಲಾನ್ ಆಗಿದೆ. ಎರಡು ಸರ್ಕಾರಗಳಲ್ಲೂ ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ ಎಂದರು.
ಇನ್ನು ಕೆಲ ಶಾಸಕರು ಸಿದ್ದರಾಮಯ್ಯ ಅವರೇ ನಮಗೆ ಮುಖ್ಯಮಂತ್ರಿ ಎಂದಿರಬಹುದು. ಕಳೆದ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿದ್ದರು. ಅಲ್ಲದೆ, ಸಿದ್ದರಾಮಯ್ಯ ನಮ್ಮ ಶಾಸಕಾಂಗ ಪಕ್ಷದ ನಾಯಕರು ಕೂಡ. ಹೀಗಾಗಿ ನಮ್ಮ ಶಾಸಕರು ಈ ಮಾತು ಹೇಳಿರಬಹುದು. ಆದರೆ, ಸಿದ್ದರಾಮಯ್ಯ ಎಲ್ಲೂ ನಾನು ಮುಖ್ಯಮಂತ್ರಿ ಎಂದಿಲ್ಲ. ನಾವ್ಯಾರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಿಲ್ಲವಲ್ಲ ಎಂದು ಸಮರ್ಥನೆ ನೀಡಿದರು.
ಕಾಂಗ್ರೆಸ್ ನಾಯಕ ಇಬ್ರಾಹಿಂ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರ ಅಸಮಾಧಾನ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಮುಂದುವರೆಯಬೇಕು. ತಮ್ಮ ತಂದೆ ದೇವೇಗೌಡರಂತೆ ಹೆಚ್ಚಿನ ತಾಳ್ಮೆಯ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರದಲ್ಲಿ ಗೊಂದಲವಿಲ್ಲ- ಸಿದ್ದು: ಮೈಸೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡುವ ಹೇಳಿಕೆ ನೀಡಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಇನ್ನು ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿಕೆ ನೀಡದಂತೆ ಕಾಂಗ್ರೆಸ್ ಶಾಸಕರನ್ನು ಆ ಪಕ್ಷದ ನಾಯಕರೇ ಕಂಟ್ರೋಲ್ ಮಾಡಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಶಾಸಕರನ್ನು ನಾವೇ ಕಂಟ್ರೋಲ್ ಮಾಡಬೇಕು. ಇನ್ನೇನು ಜೆಡಿಎಸ್ನವರು ಕಂಟ್ರೋಲ್ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.
ನಾವು ಮೈತ್ರಿ ಸರ್ಕಾರ ರಚಿಸಿದ್ದೇವೆ. ಜೆಡಿಎಸ್ನವರೇ ಮುಖ್ಯಮಂತ್ರಿ ಆಗಲಿ ಎಂದಿದ್ದೇವೆ. ಹೀಗಾಗಿ, ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆ ಇಲ್ಲಿ ಉದ್ಭವ ಆಗುವುದಿಲ್ಲ. ಎಸ್.ಟಿ. ಸೋಮಶೇಖರ್ ಅವರಿಗೆ ಕೆಪಿಸಿಸಿಯಿಂದ ನೋಟಿಸ್ ನೀಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲರ ಜೊತೆ ಮಾತನಾಡಿ ಪ್ರತಿಕ್ರಿಯಿಸುತ್ತೇನೆ ಎಂದು ಅವರು ಹೇಳಿದರು.