ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಕುರಿತು ಕರ್ನಾಟಕ ಸಂಸದರೊಂದಿಗೆ ಚರ್ಚೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಕ್ಕಿದ್ದೇನು ಗೊತ್ತಾ?

ನವದೆಹಲಿ (ಸೆ.20): ಕರ್ನಾಟಕದಲ್ಲಿ ಮತ್ತೆ ಸಂಕಷ್ಟದ ವರ್ಷ ಪ್ರಾರಂಭವಾಗಿದೆ. ಈ ಬಾರಿ ಜೂನ್ ಮತ್ತು ಆಗಸ್ಟ್‌ನಲ್ಲಿ ಮಳೆ ಬರಲಿಲ್ಲ. ಸಾಮಾನ್ಯ ವರ್ಷದಲ್ಲಿ 108 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ಆದರೆ, ಈಗಾಗಲೇ 39.6 ಟಿಎಂಸಿ ನೀರನ್ನು ಬಿಡಲಾಗಿದೆ. ಈಗ ಕೇವಲ 51 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ಮತ್ತು ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಸಭೆಗಳಲ್ಲಿ 5,000 ಕ್ಯೂಸೆಕ್ಸ್‌ ನೀರು ಹರಿಸವಂತೆ ಸೂಚನೆ ನೀಡಿದ್ದಾರೆ. ಆದರೂ, ದುರಾದೃಷ್ಟವಶಾತ್ ಈತನಕ ಕಾವೇರಿ ವಿಚಾರದಲ್ಲಿ ಸಂಕಷ್ಟದ ಸೂತ್ರ ತಯಾರಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Add Asianetnews Kannada as a Preferred SourcegooglePreferred

ನವದೆಹಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣಕ್ಕೆ ಇಲ್ಲಿ ಸಂಸದರ ಸಭೆ ಕರೆದು ಚರ್ಚೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮತ್ತೆ ಸಂಕಷ್ಟದ ವರ್ಷ ಪ್ರಾರಂಭವಾಗಿದೆ. ಬರಗಾಲ ಕಾಣುತ್ತಿದೆ. ವಾಡಿಕೆ ಮಳೆ ಬಂದಿಲ್ಲ. ಈ ಬಾರಿ ಆಗಸ್ಟ್, ಜೂನ್ ನಲ್ಲಿ ಮಳೆ ಬರಲಿಲ್ಲ. ದುರಾದೃಷ್ಟವಶಾತ್ ಈತನಕ ಕಾವೇರಿ ವಿಚಾರದಲ್ಲಿ ಸಂಕಷ್ಟದ ಸೂತ್ರ ತಯಾರಾಗಿಲ್ಲ. ಈಗ ನಾವು ನೀರು ಬಿಡಲಾಗಲ್ಲ ಎಂದು ಅರ್ಜಿ ಹಾಕಿದ್ದು ಎಲ್ಲ ಸಂಸದರು ಕಾವೇರಿ ಪರವಾಗಿ ನಿಲ್ಲಲಿದ್ದಾರೆ ಎಂದು ಹೇಳಿದರು. 

ಬೆಂಗಳೂರಿನ ಜನರಿಗೆ ಕುಡಿಯೋದಕ್ಕೂ ಕಾವೇರಿ ನೀರು ಕೊಡಲಾಗಲ್ಲ: ಗೃಹ ಸಚಿವ ಪರಮೇಶ್ವರ್‌ ಮಾಹಿತಿ

ಸಾಮಾನ್ಯ ವರ್ಷದಲ್ಲಿ 108 TMC ನೀರು ಕೊಡಬೇಕು. ಈತನಕ 39.6 TMC ನೀರು ಬಿಟ್ಟಿದ್ದೇವೆ. ಇನ್ನು ನಮ್ಮ ರಾಜ್ಯದಲ್ಲಿ ರೈತರು ಹಾಗೂ ಕುಡಿಯಲು 106 TMC ನೀರು ಬೇಕು. ಈಗ ಪ್ರಸ್ತುತ 51 TMC ಇದೆ. ನಾವು ನೀರಿಲ್ಲದೇ ಕಷ್ಟದಲ್ಲಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ಮತ್ತು ಕಾವೇರಿ ನೀರು ನಿಯಂತ್ರಣಾ ಸಮಿತಿ (Cauvery Water Regulation Committee- CWRC) ಮುಂದೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದೇವೆ. ನಾವು ನೀರು ಕೊಡಲು ಆಗಲ್ಲ ಅಂಥ ಹೇಳಿದ್ದೇವೆ ಎಂದರು.

ಈಗಾಗಲೇ ಕಾವೇರಿ ನೀರು ವಿಚಾರವಾಗಿ ನಾವು 2 ಸರ್ವ ಪಕ್ಷಗಳ ಸಭೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಅರ್ಜಿ ವಿಚಾರಣೆ ಇದೆ. ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಅರ್ಜಿ ಹಾಕಿ, 5,000 ಕ್ಯೂಸೆಕ್ ನೀರು ಕೊಡಲು ಆಗಲ್ಲ ಎಂದು ಅರ್ಜಿ ಹೇಳಿದ್ದೇವೆ. ಆದರೆ, ಸುಪ್ರೀಂ ಕೋರ್ಟ್‌ ಮುಂದೆ ವಾದ ಮಂಡನೆ ವೇಳೆ ಸಿಡಬ್ಲ್ಯೂಆರ್‌ಸಿ ಸೂಚನೆ ಪಾಲಿಸಲಾಗಿದೆಯೇ ಎಂದು ಪ್ರಶ್ನೆ ಮಾಡಿದಾಗ ಸಮಜಾಯಿಷಿ ನೀಡಲು ಅನುಕೂಲ ಆಗುವಂತೆ ಈಗ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಬಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಕಾವೇರಿ ನೀರನ್ನೆಲ್ಲ ತಮಿಳುನಾಡಿಗೆ ಬಿಟ್ಟಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಏನ್‌ ವಾದ ಮಾಡ್ತೀರಿ? ಮಾಜಿ ಸಿಎಂ ಬೊಮ್ಮಾಯಿ

ಪ್ರಧಾನಿ ಮೋದಿ ಮಧ್ಯಸ್ಥಿಕೆಗಾಗಿ ಮನವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾವೇರಿ ನೀರಿನ ವಿಚಾರವಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದ್ದೇನೆ. ಈ ಬಗ್ಗೆ ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೂ ಪತ್ರ ಬರೆದಿದ್ದೇನೆ. ಎರಡು ಬಾರಿ ಆದೇಶ ಬಂದಾಗೆಲ್ಲಾ ಸರ್ವ ಪಕ್ಷಗಳ ಸಭೆ ಕರೆದಿದ್ದೇವೆ. ಆದೇಶ ಬಂದ ಮೇಲೆ ಸಭೆ ಕರೆಯುವುದು. ವಾದ-ಪ್ರತಿವಾದ ನಡೆಯುವಾಗ ನಾವು 2,500 ಸಾವಿರ ಕ್ಯೂಸೆಕ್ ಬಿಟ್ಟಿದ್ದೇವೆ. ಜೊತೆಗೆ, ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಹಾಕಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಸ್ಟೇ ಕೇಳ್ತಿವಿ. ಇನ್ನು ಇಂದು ಸಂಜೆ 4:30ಕ್ಕೆ ಜಲಶಕ್ತಿ ಮಂತ್ರಿ ಭೇಟಿಗೆ ಸಮಯ ನಿಗಧಿ ಮಾಡಲಾಗಿದೆ ಎಂದು ಹೇಳಿದರು.