ಒಕ್ಕಲಿಗ ಸಮುದಾಯ ಹೆಚ್ಚಿನ ಮೀಸಲಾತಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರು (ಅ.19): ಒಕ್ಕಲಿಗ ಸಮುದಾಯ ಹೆಚ್ಚಿನ ಮೀಸಲಾತಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದ್ದಾರೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಬೇಕು ಎಂಬ ಹೇಳಿಕೆ ನೀಡಿರುವ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಬಗ್ಗೆ ವಿಧಾನಸಭೆಯಲ್ಲೇ ಉತ್ತರ ನೀಡಿದ್ದೇನೆ. ಎಲ್ಲ ಸಮುದಾಯಗಳಿಗೆ ಆಕಾಂಕ್ಷೆ ಹೆಚ್ಚಾಗಿದೆ. ಹಲವು ನ್ಯಾಯಾಲಯದ ತೀರ್ಪುಗಳಿವೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವಿದೆ. ಈ ಎಲ್ಲದರ ಆಧಾರದ ಮೇಲೆ ಪರಿಶೀಲಿಸಬೇಕಾಗುತ್ತದೆ. ಈ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮರಾಠಾ 3ಬಿ ಇಂದ 2ಎಗೆ ಸೇರಲಿ: ಕಾರಂಜಾದಿಂದ ಔರಾದ್‌ವರೆಗೆ ಕುಡಿವ ನೀರಿನ ಪೂರೈಕೆಗೆ ಸಿಎಂ ಅನುಮೋದಿಸಲಿ. ಕಮಲನಗರ ಗ್ರಾಪಂ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೇಗಿಸುವದು ಅಲ್ಲದೆ ಮರಾಠಾ ಸಮಾಜವನ್ನು 3ಬಿ ಇಂದ 2ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಪಶು ಸಂಗೋಪನಾ ಸಚಿವ ಹಾಗೂ ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಆಗ್ರಹಿಸಿದರು.

ಆರೆಸ್ಸೆಸ್‌, ಸಿಎಂ, ಬಿಜೆಪಿ ಹೆಸರೆತ್ತದೆ ಸಿದ್ದು ಮಾತಾಡಲಿ: ಬೊಮ್ಮಾಯಿ ತಿರುಗೇಟು

ಔರಾದ್‌ ಪಟ್ಟಣದ ಅಮರೇಶ್ವರ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಔರಾದ್‌ ಕ್ಷೇತ್ರಕ್ಕೆ 200ಕೋಟಿ ರು.ಗಳ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಜೂರು ಮಾಡಿದ್ದು ಕಾಮಗಾರಿಗಳು ಟೆಂಡರ್‌ ಹಂತದಲ್ಲಿವೆ. ಮುಂಗಾರು ಬೆಳೆ ನಾಶದಿಂದ ಸಂಕಷ್ಟದಲ್ಲಿದ್ದ ಔರಾದ್‌ ಕ್ಷೇತ್ರದ ಜನತೆಗೆ 36 ಕೋಟಿ ರು.ಗಳ ಪರಿಹಾರ ಮಂಜೂರಾಗಿ ಬಂದಿದೆ. ಕೇಂದ್ರದಲ್ಲಿ ಸಚಿವರಾಗಿ ಭಗವಂತ ಖೂಬಾ ಅಧಿಕಾರ ಸ್ವೀಕರಿಸುತ್ತಿದ್ದಂತೆ ಔರಾದ್‌ನಲ್ಲಿ ಸಿಪೆಟ್‌ ಮಂಜೂರಾಗಿದ್ದು ಸಂತಸದ ವಿಷಯ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದು, ಔರಾದ್‌ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿಪರ ಕೆಲಸಗಳಿಗೆ 200 ಕೋಟಿ ರು. ಮಂಜೂರು ಮಾಡಿದ್ದು, ಕೆಲವೆಡೆ ಕೆಲಸ ಚಾಲ್ತಿಯಲ್ಲಿದ್ದು, ಇನ್ನೂ ಒಂದಿಷ್ಟುಕಾಮಗಾರಿಗಳ ಟೆಂಡರ್‌ ಬಾಕಿ ಇದೆ ಹಾಗೆಯೇ ಮಳೆಯಿಂದ ಬೆಳೆ ಹಾನಿಯಾಗಿರುವ ರೈತರ ಖಾತೆಗೆ ಹಣ ಜಮಾ ಆಗುವಂತೆ ಔರಾದ್‌ ವಿಧಾನಸಭಾ ಕ್ಷೇತ್ರಕ್ಕೆ 36 ಕೋಟಿ ರು. ಮಂಜೂರಾಗಿದ್ದು, ರೈತರ ಖಾತೆಗಳಿಗೆ ಜಮಾ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಮಾತನಾಡಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನಿಟ್ಟಿನಲ್ಲಿ ಬಸವಾದಿ ಶರಣರ ಅನುಭವ ಮಂಟಪ ನಿರ್ಮಾಣಕ್ಕೆ 612 ಕೋಟಿ ರು. ಮಂಜೂರು ಮಾಡಿದ್ದು, ಶರಣರ ಆಶಯದಂತೆ ನಾಡು ಮತ್ತು ದೇಶ ಕಟ್ಟುವ ಕನಸನ್ನು ಸಿಎಂ ಬೊವಮ್ಮಾಯಿ ಹೊಂದಿದ್ದಾರೆ. ಸಂಕಲ್ಪ ಯಾತ್ರೆ ವಿಜಯ ಯಾತ್ರೆಯಾಗಿ ಮಾರ್ಪಡಲಿದೆ ಎಂದರು.

ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಜನಜಾತ್ರೆ

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಾರಿಗೆ ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಭಗವಂತ ಖೂಬಾ, ನಗರಾಭಿವೃದ್ಧಿ ಖಾತೆ ಸಚಿವ ಬಸವರಾಜ ಭೈರತಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌ ರವಿಕುಮಾರ, ಶಾಸಕ ಶರಣು ಸಲಗರ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್‌ ಠಾಕೂರ್‌ ಸೇರಿದಂತೆ ಮತ್ತಿರರು ಇದ್ದರು.