ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆಗಳನ್ನು ನಡೆಸುತ್ತಿದ್ದು, 3.3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ಬಾರಿ ಮೊದಲ ಬಾರಿಗೆ, ರಾಜ್ಯಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಪಾಲನೆಗಾಗಿ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. 

ಬೆಂಗಳೂರು (ಏ.23) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ಗುರುವಾರ ಹಾಗೂ ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳು ಶುಕ್ರವಾರ ನಡೆಯಲಿವೆ.

Add Asianetnews Kannada as a Preferred SourcegooglePreferred

1,44,380 ವಿದ್ಯಾರ್ಥಿಗಳು ಹಾಗೂ 1,86,099 ವಿದ್ಯಾರ್ಥಿನಿಯರು ಸೇರಿ ಒಟ್ಟು 3,30,479 ಮಂದಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಅಭ್ಯರ್ಥಿಗಳು ನಿಗದಿತ ಅವಧಿಗಿಂತ ಎರಡು ಗಂಟೆ ಮುಂಚಿತವಾಗಿ ಹೋಗಿ ಪರಿಶೀಲನೆಗೆ ಒಳಗಾಗಬೇಕು ಎಂದು ಕೆಇಎ ತಿಳಿಸಿದೆ.

ಇದೇ ಮೊದಲ ಬಾರಿಗೆ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ವಸ್ತ್ರಸಂಹಿತೆ ಪಾಲನೆ ನೋಡಿಕೊಳ್ಳಲು ವಸ್ತ್ರಸಂಹಿತೆ ಅಧಿಕಾರಿ ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ ಒಟ್ಟು 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 745 ಮಂದಿ ವಸ್ತ್ರಸಂಹಿತೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ವಿದ್ಯಾರ್ಥಿಗಳು ಅರ್ಧತೋಳು ಉಡುಪು ಧರಿಸಬೇಕು ಮತ್ತು ಕಾಲರ್ ಇಲ್ಲದ ಬಟ್ಟೆಗಳನ್ನು ಧರಿಸುವುದು ಉತ್ತಮ ಎಂದು ಸೂಚಿಸಲಾಗಿದೆ. ಗಂಡುಮಕ್ಕಳು ಜೇಬಿಲ್ಲದ ಅಥವಾ ಕಡಿಮೆ ಜೇಬು ಇರುವ ಸರಳ ಪ್ಯಾಂಟ್ ಧರಿಸಲು ಅನುಮತಿ ಇದೆ. ಕುರ್ಥಾ-ಪೈಜಾಮಾ, ಜೀನ್ಸ್ ಹಾಗೂ ಶೂಗಳನ್ನು ನಿಷೇಧಿಸಲಾಗಿದೆ.

ಮೊಬೈಲ್ ಫೋನ್‌ಗಳು, ಬ್ಲೂಟೂತ್ ಸಾಧನಗಳು, ಇಯರ್‌ಫೋನ್‌ಗಳು, ಮೈಕ್ರೋಫೋನ್‌ಗಳು ಮತ್ತು ಎಲ್ಲಾ ವಿಧದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಬರುವ ಮೊದಲು ಕೆಇಎ ವೆಬ್‌ಸೈಟ್‌ನಲ್ಲಿ ನೀಡಿರುವ ವಸ್ತ್ರಸಂಹಿತೆ ತಿಳಿದುಕೊಳ್ಳಬೇಕು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

--

ಸಿಇಟಿ: ಕನ್ನಡ ಪರೀಕ್ಷೆಗೆ ಶೇ. 46ರಷ್ಟು ಹಾಜರು

ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ನಡೆಸಿದ ಸಿಇಟಿ ಕನ್ನಡ ಭಾಷಾ ಪರೀಕ್ಷೆಗೆ 1,792 ಅಭ್ಯರ್ಥಿಗಳ ಪೈಕಿ 822 (ಶೇ.46) ಮಂದಿ ಹಾಜರಾಗಿದ್ದರು.

ಬೆಂಗಳೂರು, ಮಂಗಳೂರು, ವಿಜಯಪುರ, ಬೆಳಗಾವಿ ನಗರಗಳ ಐದು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. 50 ಅಂಕಗಳ ಈ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.