ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುವ ಭೀತಿಯಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಆದೇಶಿಸಿದೆ. ತಮಿಳುನಾಡಿಗೆ ಮುಂದಿನ 15 ದಿನ ದಿನಕ್ಕೆ 12,000 ಕ್ಯೂಸೆಕ್ನಂತೆ ಭರ್ಜರಿ 16 ಟಿಎಂಸಿ ನೀರು ಬಿಡುವಂತೆ CWRC ಶಿಫಾರಸು ಮಾಡಿದೆ. ಇದನ್ನು ವಿರೋಧಿಸಲು ಕರ್ನಾಟಕ ಸಜ್ಜಾಗಿದೆ.
ಬೆಂಗಳೂರು/ನವದೆಹಲಿ (ಆ.11): ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದೆ. ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಿಡಬ್ಲ್ಯೂಆರ್ಸಿ (CWRC) ಮುಖ್ಯಸ್ಥ ವಿನೀತ್ ಗುಪ್ತಾ ನೇತೃತ್ವದಲ್ಲಿ ನಡೆದ 140ನೇ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಶಿಫಾರಸಿನಿಂದಾಗಿ ಕರ್ನಾಟಕವು ಮುಂದಿನ 15 ದಿನಗಳಲ್ಲಿ ತಮಿಳುನಾಡಿಗೆ ಅಂದಾಜು ಬರೋಬ್ಬರಿ 16 ಟಿಎಂಸಿ (TMC) ನೀರನ್ನು ಹರಿಸಬೇಕಾದ ಪ್ರಸಂಗ ಎದುರಾಗಿದೆ.
CWRC ಶಿಫಾರಸಿನಲ್ಲಿ ಏನಿದೆ?
- ನೀರು ಬಿಡುಗಡೆ ಪ್ರಮಾಣ: ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸಬೇಕು.
- ಒಟ್ಟು ನೀರಿನ ಪ್ರಮಾಣ: ನಿತ್ಯ 11,500 ಕ್ಯೂಸೆಕ್ ಹರಿಸಿದರೆ 1 ಟಿಎಂಸಿ ಆಗಲಿದ್ದು, 15 ದಿನಗಳಲ್ಲಿ ಒಟ್ಟು ಸುಮಾರು 16 ಟಿಎಂಸಿ ನೀರು ತಮಿಳುನಾಡು ತಲುಪಲಿದೆ.
- ಹಿಂದಿನ ಬಿಡುಗಡೆ: ಕರ್ನಾಟಕವು ಆಸ್ಟ್ 10 ರವರೆಗೆ ಈಗಾಗಲೇ 7.5 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ.
- ಮುಂದಿನ ಸಭೆ: ಸಿಡಬ್ಲ್ಯೂಆರ್ಸಿಯ ಮುಂದಿನ ಸಭೆಯನ್ನು ಆಗಸ್ಟ್ 24 ಕ್ಕೆ ನಿಗದಿಪಡಿಸಲಾಗಿದೆ.
ಕರ್ನಾಟಕದಿಂದ ತೀವ್ರ ವಿರೋಧ!
ಸಿಡಬ್ಲ್ಯೂಆರ್ಸಿಯ ಈ ಏಕಪಕ್ಷೀಯ ಶಿಫಾರಸಿಗೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಕುಡಿಯುವ ನೀರು ಮತ್ತು ಸ್ಥಳೀಯ ರೈತರ ಕೃಷಿಗೆ ನೀರನ್ನು ಕಾಯ್ದಿರಿಸುವುದು ಅತ್ಯಗತ್ಯವಾಗಿದೆ. ಅಲ್ಲದೆ, ತಮಿಳುನಾಡಿನಲ್ಲಿ ಮುಂದಿನ ತಿಂಗಳಿನಿಂದ ಮಳೆ ಆರಂಭವಾಗಲಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕದಿಂದ ಇಷ್ಟೊಂದು ಬೃಹತ್ ಪ್ರಮಾಣದ ನೀರನ್ನು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಈ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂಭಾಗ ಪ್ರಶ್ನಿಸಲು ಕರ್ನಾಟಕ ಸಜ್ಜಾಗಿದೆ.
ಇಂದೇ ತುರ್ತು CWMA ಸಭೆ, ಗುರುವಾರ ಸುಪ್ರೀಂ ವಿಚಾರಣೆ!
ತಮಿಳುನಾಡು ಸರ್ಕಾರ ತುರ್ತು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಇಂದು ಮಧ್ಯಾಹ್ನ 3:00 ಗಂಟೆಗೆ ತುರ್ತು ಸಭೆ ಕರೆದಿದೆ. ಬರುವ ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಸಿಡಬ್ಲ್ಯೂಎಂಎ (CWMA) ಸಭೆ ಅತ್ಯಂತ ಕುತೂಹಲ ಕೆರಳಿಸಿದೆ.


