ಮೆಟ್ರೋ ಮಾರ್ಗ ಉದ್ಘಾಟನೆಯಲ್ಲಿ ಕನ್ನಡ ಕಡೆಗಣನೆ, ಕೊನೆಗೂ ಕ್ಷಮೆಯಾಚನೆ
* ಮೆಟ್ರೋ ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ
* ಕನ್ನಡಿಗರ ಭೇಷರತ್ ಕ್ಷಮೆಯಾಚಿಸಿದ ನಮ್ಮ ಮೆಟ್ರೋ
*ಮೆಟ್ರೋ ಮಾರ್ಗ ಉದ್ಘಾಟನೆ ವೇದಿಕೆಯಲ್ಲಿ ಕನ್ನಡ ಯಾಕಿಲ್ಲ? ಎಂಬುದು ಹಲವರ ಪ್ರಶ್ನೆಯಾಗಿತ್ತು
ಬೆಂಗಳೂರು, (ಆ.30): ಮೆಟ್ರೋ ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಬಗ್ಗೆ ಬಿಎಂಆರ್ಸಿಎಲ್ ಕನ್ನಡಿಗರ ಕ್ಷಮೆಯಾಚಿಸಿದೆ.
ನಮ್ಮ ಮೆಟ್ರೋದ ಮೈಸೂರು ರಸ್ತೆ-ಕೆಂಗೇರಿ ಮಾರ್ಗಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಆದರೆ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಕನ್ನಡ ಕಾಣೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳ ವ್ಯಕ್ತವಾಗಿದ್ದವು. ವೇದಿಕೆಯಲ್ಲಿ ಕನ್ನಡ ಯಾಕಿಲ್ಲ? ಎಂದು ಪ್ರಶ್ನೆ ಮಾಡಲಾಗಿತ್ತು.
ಕೆಂಗೇರಿ ಮೆಟ್ರೋ ಆರಂಭ: ವೇದಿಕೆಯಲ್ಲಿ ಕನ್ನಡವೇ ಮಾಯ!
ಇನ್ನು ಈ ಬಗ್ಗೆ ಇಂದು (ಆ.30) ಟ್ವೀಟ್ ಮೂಲಕ ನಮ್ಮ ಮೆಟ್ರೋ ಇದಕ್ಕೆ ಸ್ಪಷ್ಟನೆ ನೀಡಿದ್ದು, ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಕ್ರಮ ವಹಿಸುತ್ತೇನೆ. ಈ ತಪ್ಪನ್ನು ಮನ್ನಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಟ್ವೀಟ್ ಮೂಲಕ ಕನ್ನಡಿಗರಲ್ಲಿ ಮನವಿ ಮಾಡಿದೆ.
ನಮ್ಮ ಮೆಟ್ರೋ ಟ್ವೀಟ್ ಇಂತಿದೆ.
ಮಾನ್ಯರೇ, ದಿನಾಂಕ:29.08.2021 ರಂದು ಮೆಟ್ರೋ ರೈಲು ಯೋಜನೆಯ ಹಂತ-2ರ ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗಿನ 7.5 ಕಿ.ಮೀ ವಿಸ್ತರಿಸಿದ ಮಾರ್ಗವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಮತ್ತು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಎಲ್ಲಾ ಫಲಕಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿಯೇ ಇದ್ದು, ಮುಖ್ಯ ವೇದಿಕೆಯ ಫಲಕವು ಮಾತ್ರ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಆಕ್ಷೇಪಣೆಗಳು ಮಾದ್ಯಮ ಮತ್ತು ಸಾಮಾಜಿಕ ಜಾಲಗಳಲ್ಲಿ ಬಂದಿರುತ್ತವೆ.
ಈ ತಪ್ಪು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಇದರ ಸಂಪೂರ್ಣ ಹೊಣೆ ನನ್ನದೆ ಎಂದು, ತಪ್ಪಿಗೆ ವಿಷಾದಿಸುತ್ತಾ, ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಕ್ರಮ ವಹಿಸುತ್ತೇನೆ. ಈ ತಪ್ಪನ್ನು ಮನ್ನಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಮೈಸೂರು ರಸ್ತೆ (ನಾಯಂಡಹಳ್ಳಿ) ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ ಮುಂತಾದವರು ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಆದರೆ ವೇದಿಕೆಯಲ್ಲಿ ಕನ್ನಡ ಯಾಕಿಲ್ಲ? ಎಂಬುದು ಹಲವರ ಪ್ರಶ್ನೆಯಾಗಿತ್ತು.