ಬಸವಣ್ಣನವರ ತತ್ವ ಆದರ್ಶಗಳ ಮೇಲೆ ನಮ್ಮ ಸರ್ಕಾರದ ಆಡಳಿತ ನಡೆಸಿದ್ದೇವೆ. ಮುಂದೆ ಅಧಿಕಾರಕ್ಕೆ ಬಂದಾಗಲೂ ಇದೇ ಪಥದಲ್ಲೇ ನಡೆಯುತ್ತೇವೆ. ಹಾಗಾಗಿ ನಾಡಿನ ಜನರು ಮತ್ತೆ ಬಿಜೆಪಿಗೆ ಸಂಪೂರ್ಣ ಬಹುಮತದ ಅಧಿಕಾರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು (ಏ.24): ಬಸವಣ್ಣನವರ ತತ್ವ ಆದರ್ಶಗಳ ಮೇಲೆ ನಮ್ಮ ಸರ್ಕಾರದ ಆಡಳಿತ ನಡೆಸಿದ್ದೇವೆ. ಮುಂದೆ ಅಧಿಕಾರಕ್ಕೆ ಬಂದಾಗಲೂ ಇದೇ ಪಥದಲ್ಲೇ ನಡೆಯುತ್ತೇವೆ. ಹಾಗಾಗಿ ನಾಡಿನ ಜನರು ಮತ್ತೆ ಬಿಜೆಪಿಗೆ ಸಂಪೂರ್ಣ ಬಹುಮತದ ಅಧಿಕಾರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಬಸವ ಜಯಂತಿ ಅಂಗವಾಗಿ ಭಾನುವಾರ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಸಮಾನತೆಯ ಹರಿಕಾರ. ಮಾನವೀಯತೆಯ ವಿಚಾರಗಳನ್ನು ಕಾರ್ಯರೂಪಕ್ಕೆ ತಂದ ಕ್ರಾಂತಿಕಾರಿ ವ್ಯಕ್ತಿ. 

ಅವರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ನಾವು ಇದುವರೆಗೂ ರಾಜ್ಯದಲ್ಲಿ ಬಸವ ಚಿಂತನೆ, ತತ್ವ ಆದರ್ಶಗಳ ಮೇಲೆ ಬಸವ ಪಥದಲ್ಲಿ ಆಡಳಿತ ಮಾಡಿದ್ದೇವೆ. ಮುಂದೆಯೂ ಇದೇ ಪಥದಲ್ಲಿ ತುಳಿತಕ್ಕೊಳಪಟ್ಟಸಮುದಾಯಗಳಿಂದ ಹಿಡಿದು ಎಲ್ಲ ದುಡಿಯುವ ಸಮುದಾಯಗಳಿಗೆ ಗೌರವ, ಸ್ಥಾನಮಾನ, ಸನ್ಮಾನ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಧ್ಯೇಯವನ್ನಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ನಮ್ಮ ಧ್ಯೇಯ ಧೋರಣೆಗಳನ್ನು ಮುಂದಿಟ್ಟುಕೊಂಡು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಜನರು ನಮಗೆ ಸಂಪೂರ್ಣವಾಗಿ ಬೆಂಬಲಿಸಿ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ ವಿವಿಧೆಡೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ

ಈ ಬಾರಿ ಜನತೆ ಸತ್ಯ, ನ್ಯಾಯ ಮತ್ತು ಸಮಾನತೆಗೆ ಆಶೀರ್ವಾದ ಮಾಡುತ್ತಾರೆ. ಬಿಜೆಪಿ ಜಯ ನಿಶ್ಚಿತ. ನವ ಕರ್ನಾಟಕ ನಿರ್ಮಾಣ ಮಾಡುವ ಸಂಕಲ್ಪವಿದೆ. ಕುಲಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಕೆಲ ಶಕ್ತಿಗಳು ಕುಲಕುಲಗಳ ನಡುವೆ ಗಲಾಟೆ, ಬಡಿದಾಟ, ವ್ಯತ್ಯಾಸ ಉಂಟು ಮಾಡುತ್ತಿವೆ. ಆ ಶಕ್ತಿಗಳಿಗೆ ದೇವರು ಸದ್ಭುದ್ದಿ ಕೊಡಲಿ ಎಂದರು. ಸಚಿವರಾದ ಆರ್‌.ಅಶೋಕ್‌, ಕೋಟ ಶ್ರೀನಿವಾಸಪೂಜಾರಿ, ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಇದ್ದರು.

ದೊಡ್ಡಬಳ್ಳಾಪುರದಲ್ಲಿ ಬೊಮ್ಮಾಯಿ ರೋಡ್‌ಶೋ: ದೊಡ್ಡಬಳ್ಳಾಪುರದಲ್ಲಿ ರೋಡ್‌ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಧೀರಜ್‌ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿ ದೊಡ್ಡ ಹೆಮ್ಮರವಾಗಿದ್ದು, ಗಿಡಗಳನ್ನು ಮಾತ್ರ ಕಾಂಗ್ರೆಸ್‌ನವರು ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿಗೇನೂ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ ಕಾಲದಲ್ಲಿ ನೇಕಾರರು ಅನೇಕ ಸಮಸ್ಯೆ ಎದುರಿಸಿದ್ದರು. ನೇಕಾರ ಸಮ್ಮಾನ ಯೋಜನೆಯನ್ನು ನಮ್ಮ ನಾಯಕರಾದ ಯಡಿಯೂರಪ್ಪ ಆರಂಭಿಸಿದರು. ನೇಕಾರರಿಗೆ ನೀಡುತ್ತಿದ್ದ ಧನ ಸಹಾಯವನ್ನು 2 ಸಾವಿರದಿಂದ 5 ಸಾವಿರ ರುಪಾಯಿಗೆ ಹೆಚ್ಚಳ ಮಾಡಿದ್ದೇವೆ.

5 ಲಕ್ಷ ರು.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ನೇಕಾರರಿಗೆ ಆರೋಗ್ಯ, ಶಿಕ್ಷಣ ಕಲ್ಪಿಸಲು ಅಭಿವೃದ್ಧಿ ನಿಗಮ ಮಾಡಿದ್ದೇವೆ ಎಂದು ಹೇಳಿದರು. ಹೂವು ಹಣ್ಣು ವ್ಯಾಪಾರ ಮಾಡುವ ತಿಗಳ ಸಮುದಾಯಕ್ಕೆ ನಿಗಮ ಸ್ಥಾಪಿಸಿದ್ದೇವೆ. ಗಾಣಿಗರ ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸಿದೆ. ದೊಡ್ಡಬಳ್ಳಾಪುರದಲ್ಲಿ ಸ್ಯಾಟಲೈಟ್‌ ಟೌನ್‌ ನಿರ್ಮಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಎಲ್ಲ ಸೌಕರ್ಯ ದೊಡ್ಡಬಳ್ಳಾಪುರದಲ್ಲಿ ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಭ್ರಷ್ಟಾಚಾರ, ಹಗರಣದಿಂದಲೇ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌: ರಾಜೀವ್‌ ಚಂದ್ರಶೇಖರ್‌

ಶಾಸಕರನ್ನು ಮನೆಗೆ ಕಳುಹಿಸಿ: ದೊಡ್ಡಬಳ್ಳಾಪುರದ ಹಾಲಿ ಶಾಸಕರು ಹತ್ತು ವರ್ಷ ಶಾಸಕರಾಗಿದ್ದಾರೆ. ಅವರನ್ನು ಈ ಬಾರಿ ಮನೆಗೆ ಕಳಿಸಬೇಕು. ದೊಡ್ಡಬಳ್ಳಾಪುರ ಅಭಿವೃದ್ಧಿಗೆ ಧೀರಜ್‌ಗೆ ಅವಕಾಶ ಕಲ್ಪಿಸಬೇಕು. ಮತ್ತೆ ನಮ್ಮ ಸರ್ಕಾರ ರಚನೆಯಾಗುತ್ತದೆ. ಈ ಭಾಗದಲ್ಲಿ ಕೆರೆ ಅಭಿವೃದ್ಧಿ ಮಾಡಬೇಕೆಂದು ಜನರ ಬೇಡಿಕೆ ಇದೆ. ಅದನ್ನು ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ತೀರ್ಮಾನ ಮಾಡಲಾಗುವುದು. ಈ ಬಾರಿ ದೊಡ್ಡಬಳ್ಳಾಪುರದ ದೊಡ್ಡ ಜನರು ಧೀರಜ್‌ನನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.