ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ, ಮನೆ ವಿವಾದ ನ್ಯಾಯಾಲಯದಲ್ಲಿದ್ದರೂ 88 ವರ್ಷದ ಹುಸೇನಸಾಬ್ ಮುಲ್ಲಾ ಎಂಬ ವೃದ್ಧರನ್ನು ಕೆಲವರು ಬಲವಂತವಾಗಿ ಮನೆಯಿಂದ ಹೊರಹಾಕಿದ್ದಾರೆ. ಈ ದಬ್ಬಾಳಿಕೆಯಿಂದ ಮನನೊಂದ ವೃದ್ಧರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಗಲಕೋಟೆ (ಫೆ.3): ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸಿದ್ದೇಶ್ವರ ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯ ವಿವಾದ ನ್ಯಾಯಾಲಯದಲ್ಲಿದ್ದರೂ ಸಹ, ಲೆಕ್ಕಿಸದ ಕೆಲ ವ್ಯಕ್ತಿಗಳು 88 ವರ್ಷದ ವೃದ್ಧ ಹುಸೇನಸಾಬ್ ಮುಲ್ಲಾ ಅವರನ್ನು ಉಟ್ಟಬಟ್ಟೆಯಲ್ಲೇ ಮನೆಯಿಂದ ಹೊರಹಾಕಿ ದಬ್ಬಾಳಿಕೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಹುಸೇನಸಾಬ್ ಹಾಗೂ ಶಕುಂತಲಾ ಘೋರ್ಪಡೆ ಎಂಬುವವರು ಜಂಟಿಯಾಗಿ ಈ ಮನೆಯನ್ನು ನಿರ್ಮಿಸಿದ್ದರು. ಶಕುಂತಲಾ ಅವರು ವಿಜಯಪುರದ ಬಸವನಬಾಗೇವಾಡಿಯಲ್ಲಿ ವಾಸವಿದ್ದರೆ, ಹುಸೇನಸಾಬ್ ಅವರು ಬೀಳಗಿಯ ಈ ಮನೆಯಲ್ಲಿ ವಾಸವಿದ್ದರು. ಆದರೆ, ಇತ್ತೀಚೆಗೆ ಶಕುಂತಲಾ ಅವರು ಹುಸೇನಸಾಬ್ ಅವರ ಗಮನಕ್ಕೆ ತರದೆ ಮನೆಯನ್ನು ದುಂಡಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ನೇಪಾಳಿ ಯುವತಿಗಾಗಿ ಗ್ಯಾಂಗ್‌ವಾರ್, ಮಸೀದಿ ಮುಂಭಾಗವೇ ರಕ್ತ ಹರಿಸಿದ ಪುಂಡರು!

ನ್ಯಾಯಾಲಯದಲ್ಲಿದೆ ವಿವಾದ:

ಮನೆ ಮಾರಾಟದ ವಿಷಯ ತಿಳಿಯುತ್ತಿದ್ದಂತೆ ಹುಸೇನಸಾಬ್ ಅವರು ಬೀಳಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಆರಂಭಿಸಿದ್ದರು. ಪ್ರಕರಣ ಇನ್ನು ಕೋರ್ಟ್‌ನಲ್ಲಿರುವಾಗಲೇ, 'ನಾವು ಮನೆ ಖರೀದಿ ಮಾಡಿದ್ದೇವೆ, ಈಗಲೇ ಖಾಲಿ ಮಾಡಿ' ಎಂದು ಬೆದರಿಕೆ ಹಾಕಿದ ದುಂಡಪ್ಪ, ರಾಜು ಮತ್ತು ಸಿದ್ದು ಎಂಬುವವರು ವೃದ್ಧನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ 'ಎಗ್ ರೈಸ್' ಸದ್ದು: ವಾಟ್ಸಪ್ ಸ್ಟೇಟಸ್ ಇಟ್ಟು ಕಿಡಿಹಚ್ಚಿದ ಪೇದೆ ವಿರುದ್ಧ ಎಸ್ಪಿ ಗರಂ!

ಆಸ್ಪತ್ರೆಗೆ ದಾಖಲಾದ ವೃದ್ಧ:

ಬಲವಂತವಾಗಿ ಮನೆಯಿಂದ ಹೊರಹಾಕಲ್ಪಟ್ಟ ಹುಸೇನಸಾಬ್ ಅವರು ತೀವ್ರ ಮನನೊಂದಿದ್ದಾರೆ. ಈ ಆಘಾತದಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಬೀಳಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧಾಪ್ಯದಲ್ಲೂ ಇಂತಹ ಕಿರುಕುಳ ನೀಡಿದ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.