ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರು, ಪರಿಸರ ನಿಯಮ ಉಲ್ಲಂಘನೆಗಾಗಿ ಮುಚ್ಚಲಾಗಿದ್ದ 'ಬಿಗ್ ಬಾಸ್' ಮನೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ತೆರೆದಿರುವುದನ್ನ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯು ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ತುಘಲಕ್ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಕಳ (ಅ.11): ಆಡಳಿತ ಯಂತ್ರವೊಂದು ಭ್ರಷ್ಟಗೊಂಡು, ಕಾನೂನು ಮತ್ತು ನಿಯಮಗಳನ್ನು ಗಾಳಿಗೆ ತೂರಿದಾಗ ಏನಾಗಬಹುದು ಎಂಬುದಕ್ಕೆ ‘ಬಿಗ್ ಬಾಸ್’ ಮನೆಯಲ್ಲಿ ನಡೆದ ಘಟನೆ ಸಾಕ್ಷಿ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿದ್ದ ರಾಮನಗರದ ಜಾಲಿವುಡ್ ಪಾರ್ಕ್ನಲ್ಲಿ ಪರಿಸರ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪದ ಮೇರೆಗೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಯಂತೆ ಅ.6ರಂದು ಸ್ಥಳೀಯ ತಹಸೀಲ್ದಾರ್ ನೇತೃತ್ವದಲ್ಲಿ ಬಿಗ್ ಬಾಸ್ ಮನೆಯನ್ನು ಮುಚ್ಚಲಾಯಿತು. ಆದರೆ ಮರುದಿನದ ತಡರಾತ್ರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇರ ಸೂಚನೆಯ ಮೇರೆಗೆ ರಾಮನಗರ ಉಪಆಯುಕ್ತರು ಸ್ವತಃ ತೆರಳಿ ಬೀಗಮುದ್ರೆ ತೆರೆಸಿದ ಘಟನೆ ಈಗ ವಿವಾದಕ್ಕೆ ತುತ್ತಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಶೋ ಬಂದ್ ಮಾಡಿಸಿದ ನಟ್ಟು ಬೋಲ್ಟ್ ಮಿನಿಸ್ಟರ್? ಜೆಡಿಎಸ್ ಆರೋಪಕ್ಕೆ ಡಿಕೆಶಿ ಡೋಂಟ್ ಕೇರ್
ಎರಡು ದಿನ ನಡೆದ ಈ ಪ್ರಹಸನವು ತುಘಲಕ್ ಕಾಲದ ರಾಜಧಾನಿ ಬದಲಾವಣೆಯ ಆಡಳಿತವನ್ನು ನೆನಪಿಸುವಂತಿದೆ. ಇದು ನಿಯಮ ಪಾಲನೆಯಲ್ಲ, ನೇರ ರಾಜಕೀಯ ನಾಟಕ ಎಂದು ಕಿಡಿಕಾರಿದರು.
ಬಿಗ್ ಬಾಸ್ ಮನೆಯಲ್ಲಿ ಬೀಗಮುದ್ರೆ ಹಾಕಿ ತೆರವುಗೊಳಿಸಿದ ಈ ಕಾಳರಾತ್ರಿ ವ್ಯವಹಾರದಲ್ಲಿ ಎಷ್ಟು ಪರ್ಸೆಂಟ್ ‘ಕಪ್ಪು’ ನಿಗದಿಯಾಯಿತು ಎಂಬುದನ್ನು ರಾಜ್ಯವೇ ಕೇಳುತ್ತಿದೆ. ಇದಕ್ಕೆ ಉತ್ತರಿಸುವವರು ಯಾರು? ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಯೋ, ಮುಖ್ಯಮಂತ್ರಿಯೋ, ಅಥವಾ ಉಪಮುಖ್ಯಮಂತ್ರಿಯೋ? ಎಂಬ ಪ್ರಶ್ನೆ ಎದ್ದಿದೆ ಎಂದಿದ್ದಾರೆ
