ಕನ್ಯಾಕುಮಾರಿಯಿಂದ ಆರಂಭಿಸಿರುವ ‘ಭಾರತ್‌ ಜೋಡೋ’ ಪಾದಯಾತ್ರೆಯು ಬಸವಣ್ಣನವರ ತತ್ವದಂತೆ ನಡೆಯುತ್ತದೆ ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಹೇಳಿದ್ದಾರೆ. 

ನಾಗಮಂಗಲ (ಅ.08): ಕನ್ಯಾಕುಮಾರಿಯಿಂದ ಆರಂಭಿಸಿರುವ ‘ಭಾರತ್‌ ಜೋಡೋ’ ಪಾದಯಾತ್ರೆಯು ಬಸವಣ್ಣನವರ ತತ್ವದಂತೆ ನಡೆಯುತ್ತದೆ ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಹೇಳಿದ್ದಾರೆ. ಕರ್ನಾಟಕದಲ್ಲಿ ಭಾರತ್‌ ಜೋಡೋ ಯಾತ್ರೆಯ ಆರನೇ ದಿನದ ಪಾದಯಾತ್ರೆಯ ಭಾಗವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಸವಣ್ಣನವರ ತತ್ವಾದರ್ಶಗಳ ಮೇಲೆ ನಾವು ಬದುಕಬೇಕು. ಯಾರಿಗೂ ಕೆಟ್ಟದ್ದನ್ನು ಬಯಸಬಾರದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ವಜನಾಂಗದ ಶಾಂತಿಯ ತೋಟವೆಂಬ ಬಸವಣ್ಣನವರ ತತ್ವಸಂದೇಶವನ್ನು ಮೈಗೂಡಿಸಿಕೊಳ್ಳಬೇಕು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ದೇಶದಲ್ಲಿಂದು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಸರ್ಕಾರ ಬಂದರೆ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದರೊಂದಿಗೆ ರೈತರ, ಬಡವರ ಪರ ನಿಲ್ಲುವುದಾಗಿ ರಾಹುಲ್‌ ಇದೇ ವೇಳೆ ಭರವಸೆ ನೀಡಿದರು. ತೆಂಗು ಮತ್ತು ರಾಗಿ ಬೆಳೆಗೆ ಕನಿಷ್ಠ ಬೆಂಬಲ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. 

ಪಾದಯಾತ್ರೆಯಲ್ಲಿ ರಾಹುಲ್‌ ಸರಳತೆ ಪ್ರದರ್ಶನ: ಮಗುವನ್ನು ಮುದ್ದಿಸಿ ಚಾಕೋಲೇಟ್‌ ನೀಡಿದ ಅಧಿನಾಯಕ

ಕಳೆದ ವರ್ಷ ಕ್ವಿಂಟಲ್‌ ರಾಗಿಗೆ .3500 ನೀಡಿದ್ದ ಸರ್ಕಾರ ಈ ವರ್ಷ .2500ಕ್ಕೆ ಇಳಿಸಿ ರೈತರಿಗೆ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಬಡ ಜನರ ಪರವಾಗಿಲ್ಲ. ದೇಶದ ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ನೀಡುವುದಿಲ್ಲ. ಬದಲಾಗಿ ರೈತರ ಟ್ರ್ಯಾಕ್ಟರ್‌ ಸೇರಿ ರೈತ ಪರಿಕರ ಹಾಗೂ ಕೃಷಿ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ದೇಶದ ಪ್ರಧಾನಿ ಗೆಳೆಯನೊಬ್ಬ ರಾಕೆಟ್‌ ವೇಗದಲ್ಲಿ ಶ್ರೀಮಂತರಾಗುತ್ತಿದ್ದಾರೆ. ಪ್ರಪಂಚದಲ್ಲಿ ಎರಡನೇ ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಆದರೆ ದೇಶದ ಬಡವರು, ರೈತರು ಹಾಗೂ ರೈತರ ಮಕ್ಕಳು ಏಕೆ ಶ್ರೀಮಂತರಾಗುತ್ತಿಲ್ಲ ಎಂದು ಇದೇ ವೇಳೆ ವ್ಯಂಗ್ಯವಾಡಿದರು.

ರಾಹುಲ್‌ ಯಾತ್ರೆಯಲ್ಲಿ ಸಿದ್ದು, ಡಿಕೆಶಿ, ನಟಿ ರಮ್ಯಾ ಗೈರು: ಶುಕ್ರವಾರ ನಡೆದ ರಾಹುಲ್‌ ಪಾದಯಾತ್ರೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಿದ್ದರೆ, ಇ.ಡಿ. ವಿಚಾರಣೆಗೆ ಹಾಜರಾಗಲು ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿದ್ದರಿಂದ ಶುಕ್ರವಾರದ ಪಾದಯಾತ್ರೆಗೆ ಇಬ್ಬರು ನಾಯಕರು ಗೈರು ಹಾಜರಾಗಿದ್ದರು. ಚಾಮರಾಜಪೇಟೆ ಶಾಸಕ ಜಮೀರ್‌ ಅಹಮ್ಮದ್‌ ಕೂಡ ಯಾತ್ರೆಗೆ ಗೈರಾಗಿದ್ದರು. ಪಕ್ಷದಲ್ಲಿ ತಮಗೆ ಪ್ರಾಶಸ್ತ್ಯ ಸಿಗುತ್ತಿಲ್ಲ ಎಂಬ ಅಸಮಾಧಾನ ಅವರಿಗಿದ್ದು, ಈ ಬಗ್ಗೆ ಇತ್ತೀಚೆಗೆ ಅವರು ಸುರ್ಜೇವಾಲ ಬಳಿ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.

ರಾಹುಲ್‌ ಯಾತ್ರೆಗೆ ಇಂದು ಸೋನಿಯಾ: ಪಾಂಡವಪುರದಲ್ಲಿ ಕಾಂಗ್ರೆಸ್‌ ನಾಯಕಿ ನಡಿಗೆ

ಯಾತ್ರೆಯಲ್ಲಿ ಕಾಣಿಸದ ರಮ್ಯಾ: ಈ ಮಧ್ಯೆ, ಕಾಂಗ್ರೆಸ್‌ ವರಿಷ್ಠರಾದ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿಯೇ ಜಿಲ್ಲೆಗೆ ಆಗಮಿಸಿದ್ದರೂ, ಮೂರು ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಯಾತ್ರೆ ನಡೆಸಿದರೂ, ಕಾಂಗ್ರೆಸ್‌ ನಾಯಕಿ, ಮಾಜಿ ಸಂಸದೆ ರಮ್ಯಾ ಯಾತ್ರೆಯಲ್ಲಿ ಪಾಲ್ಗೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.