ಬೆಂಗಳೂರಿನ ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆ ಬಳಿ ಟ್ರಕ್ ಡಿಕ್ಕಿಯಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ನ ಹೌಸ್ ಕೀಪಿಂಗ್ ಸಿಬ್ಬಂದಿ ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೇಷಾದ್ರಿಪುರಂ ಸಂಚಾರ ಪೊಲೀಸರಿಂದ ತನಿಖೆ.

ಬೆಂಗಳೂರು (ಡಿ.12): ನಗರದ ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆ ಬಳಿ ಸಂಭವಿಸಿದ ಭೀಕರ ಟ್ರಕ್ ಅಪಘಾತದಲ್ಲಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಸಂಜೆ ವೇಳೆ ಸಂಭವಿಸಿದ ದುರಂತ:

ಮೃತರನ್ನು ಲಲಿತಮ್ಮ ಎಂದು ಗುರುತಿಸಲಾಗಿದೆ. ಇವರು ಏಷ್ಯಾನೆಟ್ ಸುವರ್ಣನ್ಯೂಸ್ ಕಚೇರಿಯಲ್ಲಿ ಹೌಸ್ ಕೀಪಿಂಗ್ (Housekeeping) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಲಲಿತಮ್ಮ ಅವರು ಸಂಜೆ ತಮ್ಮ ಕೆಲಸವನ್ನು ಮುಗಿಸಿಕೊಂಡು, ಎಂದಿನಂತೆ ಮನೆಗೆ ಹಿಂದಿರುಗಲು ರಸ್ತೆ ದಾಟುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆಯಲ್ಲಿ ಅತೀ ವೇಗದಿಂದ ಬಂದ ಟ್ರಕ್ ಒಂದು ರಸ್ತೆ ದಾಟುತ್ತಿದ್ದ ಲಲಿತಮ್ಮ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಲಿತಮ್ಮ ಅವರು ಕೆಳಗೆ ಬಿದ್ದಿದ್ದು, ತಕ್ಷಣವೇ ಟ್ರಕ್‌ನ ಚಕ್ರ ಅವರ ತಲೆಯ ಮೇಲೆ ಹರಿದು ಹೋಗಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿದ್ದಾರೆ.

ಘಟನೆ ಸ್ಥಳಕ್ಕೆ ಪೊಲೀಸರ ಭೇಟಿ:

ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಶೇಷಾದ್ರಿಪುರಂ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ಮಾಹಿತಿ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆದು ಪೊಲೀಸರು ಪರಿಶೀಲನೆ ನಡೆಸಿದರು. ಸಾವನ್ನಪ್ಪಿರುವ ಲಲಿತಮ್ಮ ಅವರ ಮೃತದೇಹವನ್ನು ಪೊಲೀಸರು ಸ್ಥಳ ಮಹಜರು ಮಾಡಿದ ನಂತರ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಟ್ರಕ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಘಟನಾ ಸ್ಥಳದಲ್ಲಿಯೇ ಇದ್ದ ಟ್ರಕ್ ಹಾಗೂ ಅಪಘಾತ ಮಾಡಿದ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

ತಮ್ಮ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ನೌಕರರೊಬ್ಬರು ಈ ರೀತಿ ಅಕಾಲಿಕವಾಗಿ ಸಾವನ್ನಪ್ಪಿರುವುದು ಸಹೋದ್ಯೋಗಿಗಳಲ್ಲಿ ಮತ್ತು ಕುಟುಂಬಸ್ಥರಲ್ಲಿ ದುಃಖವನ್ನುಂಟು ಮಾಡಿದೆ. ಶೇಷಾದ್ರಿಪುರಂ ಸಂಚಾರ ವಿಭಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.