ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಯಲ್ಲಿ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. 

ಮೈಸೂರು (ಜೂ.6) : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಘಟನೆಯಲ್ಲಿ ತಪ್ಪುಗಳು ಆಗಿರುವುದು ಸತ್ಯ. ಸರ್ಕಾರ ಕೂಡ ತಪ್ಪನ್ನ ಒಪ್ಪಿಕೊಂಡಿದೆ. ಇಂಟಿಲಿಜೆನ್ಸಿ ಫೈಲೂರ್ ಆಗಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಅತಿ ಹೆಚ್ಚು ಜನ ಬಂದಿದ್ದಾರೆ. ಹೀಗಾಗಿ, ಇಂತಹ ಘಟನೆ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Add Asianetnews Kannada as a Preferred SourcegooglePreferred

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಸಿಎಂ ಹಾಗೂ ಡಿಸಿಎಂ ತಪ್ಪು ಯಾವುದೂ ಇಲ್ಲ. ಕಾರ್ಯಕ್ರಮ ಮಾಡಲು ಸರ್ಕಾರದ ಮೇಲೆ ಒತ್ತಡ ಇತ್ತು. ಈ ಒತ್ತಡದ ಕಾರಣಕ್ಕೆ ಕಾರ್ಯಕ್ರಮ ಮಾಡಲಾಗಿತ್ತು ಎಂದರು.

ವಿಧಾನಸೌಧದ ಮುಂದೆ ಮಾಡಿದ ಕಾರ್ಯಕ್ರಮಕ್ಕೆ ಯಾವುದೇ ಲೋಪ ಉಂಟಾಗಿಲ್ಲ. ಅಲ್ಲಿಗೆ ಅತಿ ಹೆಚ್ಚು ಜನ ಬರಲೇ ಇಲ್ಲ. ಸಚಿವರು ಅವರ ಸಂಬಂಧಿಕರು ಕುಟುಂಬಸ್ಥರು ಬಂದಿರಬಹುದು. ಅದರಲ್ಲಿ ಯಾವ ಲೋಪ ಉಂಟಾಗಿಲ್ಲ. ಜನ ಕ್ರಿಕೆಟರ್ ಗಳನ್ನ ನೋಡಲು ಸ್ಟೇಡಿಯಂ ಹೋದರು. ಸಮಾರಂಭದ ಮಾಡಿ ಎಂದು ಹೇಳುತ್ತಿದ್ದ ಬಿಜೆಪಿ ಈಗ ಹಿಪೋಕ್ರಸಿ ಪ್ಲೇ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಾರ್ಯಕ್ರಮ ಆಯೋಜನೆಯಲ್ಲಿ ತಪ್ಪಾಗಿರುವುದು ಸತ್ಯ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನ ಪತ್ತೆ ಮಾಡಲು ಮ್ಯಾಜಿಸ್ಟ್ರೇಟ್ ಕಮಿಟಿ ರಚನೆ ಮಾಡಲಾಗಿದೆ. ಈಗಲೇ ಇಂತಹವರೇ ತಪ್ಪಿತಸ್ಥರು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.

ಒಂದು ವೇಳೆ ರೋಡ್ ಶೋ ಮಾಡಿದ್ದರೇ ಕ್ರಿಕೆಟಿಗರ ಭದ್ರತೆಗೆ ತೊಂದರೆಯಾಗುತ್ತಿತ್ತು. ಹೀಗಾಗಿ, ರೋಡ್ ಶೋ ಮಾಡಲಿಲ್ಲ. ಎರೆಡೆರೆಡು ಕಡೆ ಕಾರ್ಯಕ್ರಮ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂಬುದು ಹೇಳುವುದು ಸರಿಯಲ್ಲ. ನಿರೀಕ್ಷೆಗಿಂತ 2- 3 ಲಕ್ಷ ಜನ ಬಂದರು. ಹೀಗಾಗಿ, ಅವಘಡ ಸಂಭವಿಸಿದೆ ಎಂದರು.