ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ.

ಬೆಂಗಳೂರು (ಆ.03): ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಮಣಿಪಾಲ್‌ ಆಸ್ಪತ್ರೆಯ ವೈದ್ಯರ ತಂಡ, ಬಿಎಸ್‌ವೈ ಹೆಲ್ತ್ ಬುಲೆಟಿನ್‌ ಬಿಡುಗಡೆ ಮಾಡಿದ್ದು, ಆಗಸ್ಟ್ 2 ರಂದು ರಾತ್ರಿ 11 ಗಂಟೆಗೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆರೋಗ್ಯ ಉತ್ತಮವಾಗಿದೆ ಎಂದು ತಿಳಿಸಲಾಗಿದೆ.

ಸಿಎಂಗೆ ಕೊರೋನಾ: ಯಾರನ್ನೆಲ್ಲಾ ಭೇಟಿಯಾಗಿದ್ರು, ಯಾರೆಲ್ಲಾ ಕ್ವಾರಂಟೈನ್ ಆದ್ರು...?

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಕೊರೋನಾ ರೋಗದ ಲಕ್ಷಣದ ತೀವ್ರತೆ ಕಡಿಮೆ ಇದೆ. ಅವರ ಆರೋಗ್ಯ ಸ್ಥಿರವಾಗಿದೆ. ಪ್ರೋಟೋಕಾಲ್‌ಗಳ ಪ್ರಕಾರ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಮಲ್ಟಿಡಿಸಿಪ್ಲಿನರಿ ವೈದ್ಯರ ತಂಡದಿಂದ ಸಿಎಂಗೆ ಚಿಕಿತ್ಸೆ ನೀಡುತ್ತಿದ್ದು, ಹೆದರುವ ಅಗತ್ಯ ಇಲ್ಲ ಎಂದು ಮಣಿಪಾಲ್‌ ಆಸ್ಪತ್ರೆ ಹೆಲ್ತ್‌ ಬುಲೆಟಿನ್‌ ಮೂಲಕ ಸ್ಮಷ್ಟಪಡಿಸಿದೆ. 

ಈಗಾಗಲೇ ಯಡಿಯೂರಪ್ಪನವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಾಗೂ ಅವರನ್ನು ಭೇಟಿ ಮಾಡಿದ್ದ ಕೆಲವರು ಹೋಮ್​​ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ.

ಅಲ್ಲದೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಮತ್ತು ಗೃಹ ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.