2020ರ ಕೆ.ಜಿ.ಹಳ್ಳಿ ಮತ್ತು ಡಿಜೆ.ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ತಪ್ಪು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಬೆಂಗಳೂರು (ಜು.23): ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿಜೆ.ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ 2020ರ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯವು 7 ವರ್ಷಗಳ ಕಾಲದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

ಶಿಕ್ಷೆಗೆ ಗುರಿಯಾದವರು ಯಾರು?

  • ತಪ್ಪು ಒಪ್ಪಿಕೊಂಡ 3 ಆರೋಪಿಗಳು:
  • ಎ14 - ಇಕ್ರಮುದ್ದೀನ್ ಸೈಯದ್ ನವೀದ್
  • ಎ16 - ಸೈಯದ್ ಆಸಿಫ್
  • ಎ18 - ಮೊಹಮ್ಮದ್ ಅತೀಫ್

ಈ ಮೂವರು ಆರೋಪಿಗಳು ಕೋರ್ಟ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಎನ್ಐಎ ವಿಶೇಷ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ. ಈ ಪ್ರಕರಣದ ವಿಚಾರಣೆಯಲ್ಲಿ ಎನ್ಐಎ ಪರವಾಗಿ ಹಿರಿಯ ಸರ್ಕಾರಿ ವಕೀಲರಾದ ಪ್ರಸನ್ನ ಕುಮಾರ್ ವಾದಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 138 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಇವರಲ್ಲಿ ಮೊದಲಿಗೆ ಈ 3 ಮಂದಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ.

ಪ್ರಕರಣದ ಹಿನ್ನಲೆ:

2020ರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾದ ಎಂಬ ಕಾರಣ ನೀಡಿ ಹಲವಾರು ಜನರು ಕೆ.ಜಿ.ಹಳ್ಳಿ ಮತ್ತು ಡಿಜೆ.ಹಳ್ಳಿ ಪೊಲೀಸ್ ಠಾಣೆಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಈ ವೇಳೆ ಸಾರ್ವಜನಿಕ ಆಸ್ತಿ, ವಾಹನಗಳು ಮತ್ತು ದಾಖಲೆಗಳಿಗೆ ಭಾರಿ ಹಾನಿಯುಂಟಾಗಿತ್ತು. ಈ ಪ್ರಕರಣವನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಎನ್ಐಎಗೆ ಪ್ರಕರಣ ಹಸ್ತಾಂತರಿಸಿತ್ತು. ಇನ್ನೂ 135ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀರ್ಪುಗಳು ಹೊರಬರುವ ನಿರೀಕ್ಷೆಯಲ್ಲಿವೆ. ತಪ್ಪು ಒಪ್ಪಿಕೊಂಡಿರುವ ಆರೋಪಿಗಳಿಗೆ ಈಗ ಶಿಕ್ಷೆ ವಿಧಿಸಿದ್ದು, ಇದರಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷೆ ಖಚಿತ ಎಂಬ ಸಂದೇಶವನ್ನು ನ್ಯಾಯಾಲಯ ರವಾನಿಸಿದೆ.