ಕಂಬಳ ನಿಲ್ಲಿಸುವವರ ವಿರುದ್ಧ ಸಂಘಟಿತ ಹೋರಾಟಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ!
ಅಜೆಂಡಾ ಇಟ್ಟುಕೊಂಡು ಕಂಬಳ, ಜಲ್ಲಿಕಟ್ಟಿನಂತ ಸಾಂಪ್ರದಾಯಿಕ ಕ್ರೀಡೆಯನ್ನು ನಿಷೇಧಗೊಳಿಸಲು ಮುಂದಾಗುವವರ ವಿರುದ್ಧ ಪಕ್ಷ, ಜಾತಿಗಳನ್ನು ಮೀರಿ ಒಂದಾಗಿ ಹೋರಾಡುವ ಅಗತ್ಯವಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
![Bengaluru kambala namma kambala MP Tejaswi Surya speech at bengaluru rav Bengaluru kambala namma kambala MP Tejaswi Surya speech at bengaluru rav](https://static-ai.asianetnews.com/images/01hg757dmr905cys01rcnn14mx/kambala_363x203xt.jpg)
ಬೆಂಗಳೂರು (ನ.27) : ಅಜೆಂಡಾ ಇಟ್ಟುಕೊಂಡು ಕಂಬಳ, ಜಲ್ಲಿಕಟ್ಟಿನಂತ ಸಾಂಪ್ರದಾಯಿಕ ಕ್ರೀಡೆಯನ್ನು ನಿಷೇಧಗೊಳಿಸಲು ಮುಂದಾಗುವವರ ವಿರುದ್ಧ ಪಕ್ಷ, ಜಾತಿಗಳನ್ನು ಮೀರಿ ಒಂದಾಗಿ ಹೋರಾಡುವ ಅಗತ್ಯವಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ‘ಬೆಂಗಳೂರು ಕಂಬಳ-ನಮ್ಮ ಕಂಬಳದಲ್ಲಿ ಪಾಲ್ಗೊಂಡು ಮಾತನಾಡಿ, ಬೆಂಗಳೂರಿನವರು ಕಂಬಳ ಕಣ್ತುಂಬಿಕೊಳ್ಳುವಂತೆ ಮಾಡಿರುವ ಈ ಕಾರ್ಯಕ್ರಮ ಅಪರೂಪ. ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆದಿರುವುದು ಸಂತಸದ ವಿಚಾರ. ಜಲ್ಲಿಕಟ್ಟು, ಕಂಬಳ ಸಾಂಪ್ರದಾಯಿಕ ಶೈಲಿಯ ಕ್ರೀಡೆಗಳನ್ನು ಬೇರೆ ರೀತಿಯ ಅಜೆಂಡಾ ಇಟ್ಟುಕೊಂಡು ನಿಲ್ಲಿಸಲು ಪ್ರಯತ್ನ ಮಾಡುತ್ತಿರುವುದನ್ನು ನೋಡಿದ್ದೇವೆ. ಆದರೆ ಎಲ್ಲರೂ ಪಕ್ಷ, ಭಿನ್ನಾಭಿಪ್ರಾಯಗಳನ್ನು ಮೀರಿ ಇಂತವುಗಳನ್ನು ಸಂಘಟಿತವಾಗಿ ಎದುರಿಸಬೇಕು ಎಂದರು.
ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ; ಕಾಂತಾರದಲ್ಲಿ ರಿಷಬ್ ಓಡಿಸಿದ್ದ ಕೋಣಗಳಿಗೆ ಪ್ರಥಮ ಬಹುಮಾನ!
ಮಾಜಿ ಸಚಿವ ಅರವಿಂದ ಲಿಂಬಾವಳಿ, ಕಂಬಳದ ಮೂಲಕ ಸನಾತನ ಧರ್ಮದ ಸಂಸ್ಕೃತಿಯನ್ನು ಪಸರಿಸುತ್ತಿರುವ ಕಾರ್ಯ ವಿಶೇಷ. ಇದರಂತೆ ದೈವಪೂಜೆ, ಕೋಲಗಳನ್ನು ಕೂಡ ಎಲ್ಲೆಡೆ ತೆಗೆದುಕೊಂಡು ಹೋಗಬೇಕು. ಕಂಬಳವನ್ನು ಒಂದೇ ವರ್ಷಕ್ಕೆ ನಿಲ್ಲಿಸದೆ ಪ್ರತಿ ವರ್ಷ ಇದು ನಡೆಯುವಂತಾಗಲಿ ಎಂದು ಹಾರೈಸಿದರು.
ಶಾಸಕ ಹ್ಯಾರಿಸ್ ನಲಪಾಡ್ ಮಾತನಾಡಿ, ಕಂಬಳ ಪ್ರತಿ ವರ್ಷ ನಡೆಯಬೇಕು. ನಗರದಲ್ಲಿ ಕಾಯಂ ಆಗಿ ಕಂಬಳ ನಡೆಸಲು ಸಾಧ್ಯವಾಗುವಂತೆ ಜಾಗವನ್ನು ನಿಗದಿಸಿ ಸರ್ಕಾರ ಕೊಡಬೇಕೆಂದು ಕಂಬಳ ಸಮಿತಿ ಒತ್ತಾಯಿಸಲಿ. ಅದಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಹೇಳಿದರು.