ಅಂತಾರಾಷ್ಟ್ರೀಯ ಬಿಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲ, ದೇಶದಲ್ಲಿ ಬೆಲೆ ಏರಿಕೆ ಮೋದಿ ಕೊಡುಗೆ, ಎಸ್ಐಆರ್ ಕುರಿತು ಎಲ್ಲಾ ಪಕ್ಷದ ನಾಯಕರೂ ಜಾಗೃತರಾಗಬೇಕು.
ಬೆಂಗಳೂರು (ಮೇ.16): ಅಂತಾರಾಷ್ಟ್ರೀಯ ಬಿಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದು, ಅದಕ್ಕಾಗಿ ದೇಶಕ್ಕೆ ಬೆಲೆ ಏರಿಕೆ ಕೊಡುಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು ಬೇರೆ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿ ವಿದ್ಯುತ್ ಉಳಿಸಿ, ಪೆಟ್ರೋಲ್ ವಾಹನ ಬಳಸಬೇಡಿ ಎಂದು ಹೇಳುತ್ತಿದ್ದಾರೆ. ಇಂಧನ ಬಳಸದೇ ನಿತ್ಯ ಜೀವನ ಮಾಡುವುದು ಹೇಗೆ? ಅನೇಕರು ತಮ್ಮ ಬೆಂಗಾವಲು ಪಡೆ ವಾಹನಗಳನ್ನು ಕಡಿತಗೊಳಿಸಿದ್ದಾರೆ. ಆದರೆ, ಜನ ಸಾಮಾನ್ಯರು ಓಡಾಟ ಮಾಡದೇ ಇರಲಾಗುತ್ತದೆ. ಬದುಕಿಗಾಗಿ ಪ್ರಯಾಣ ಮಾಡಬೇಕಲ್ಲವೇ? ಚಿನ್ನ ಖರೀದಿ ಮಾಡಬೇಡಿ ಎಂದಿದ್ದಾರೆ. ಅದು ಹೇಗೆ ಸಾಧ್ಯ? ವಿವಾಹಿತ ಮಹಿಳೆಯರಿಗೆ ಮಾಂಗಲ್ಯ ಸರಬೇಕು. ಹೀಗಿದ್ದಾಗ ಚಿನ್ನಕೊಳ್ಳಬೇಡಿ ಎಂಬುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಎಸ್ಐಆರ್ ಕುರಿತು ಎಲ್ಲಾ ಪಕ್ಷದ ನಾಯಕರೂ ಜಾಗೃತರಾಗಬೇಕು. ಎಸ್ಐಆರ್ ಬಗ್ಗೆ ನಾವೂ ಜಾಗೃತಿ ಮೂಡಿಸುತ್ತಿದ್ದೇವೆ. ಯಾವುದೇ ಪಕ್ಷದವರಾದರೂ ತಮ್ಮ ಪರವಾದ ಮತಗಳನ್ನು ರಕ್ಷಿಸಿಕೊಳ್ಳಬೇಕು. ಎಸ್ಐಆರ್ ಉದ್ದೇಶ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವುದಾಗಿದೆ. ಆ ಮತಗಳನ್ನು ನಾವು ಕಾಪಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


