ಕಳೆದ ವರ್ಷ ಬಿಜೆಪಿ ಸರ್ಕಾರ ಮಾಡಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ ಮರುವಿಂಗಡಣೆಯಲ್ಲಿ ಲೋಪವಾಗಿದ್ದು, ಅದನ್ನು ಸರಿಪಡಿಸಲು ಅವಕಾಶ ಕೊಡಬೇಕು ಎಂದು ಕೋರಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಚ್‌ ಪುರಸ್ಕರಿಸಿದೆ. ವಾರ್ಡ್‌ ಮರುವಿಂಗಡಣೆಯ ಲೋಪ ಸರಿಪಡಿಸಲು ರಾಜ್ಯ ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದೆ.

ಬೆಂಗಳೂರು( ಜೂ.20) : ಕಳೆದ ವರ್ಷ ಬಿಜೆಪಿ ಸರ್ಕಾರ ಮಾಡಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ ಮರುವಿಂಗಡಣೆಯಲ್ಲಿ ಲೋಪವಾಗಿದ್ದು, ಅದನ್ನು ಸರಿಪಡಿಸಲು ಅವಕಾಶ ಕೊಡಬೇಕು ಎಂದು ಕೋರಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಚ್‌ ಪುರಸ್ಕರಿಸಿದೆ. ವಾರ್ಡ್‌ ಮರುವಿಂಗಡಣೆಯ ಲೋಪ ಸರಿಪಡಿಸಲು ರಾಜ್ಯ ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದೆ.

ಕಳೆದ ವರ್ಷ ವಾರ್ಡ್‌ ವಿಂಗಡಣೆ ವೇಳೆ ತಮ್ಮ ಪಕ್ಷದ ಶಾಸಕರಿರುವ ಕ್ಷೇತ್ರಗಳಲ್ಲಿ ಕಡಿಮೆ ವಾರ್ಡ್‌ಗಳಿರುವಂತೆ ನೋಡಿಕೊಳ್ಳಲಾಗಿದೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಿದೆ ಎಂದು ಈ ಹಿಂದೆ ಕಾಂಗ್ರೆಸ್‌ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಮಾಡಿದ ವಾರ್ಡ್‌ ಮರುವಿಂಗಡಣೆಯಲ್ಲಿ ಅನೇಕ ಬದಲಾವಣೆಗಳನ್ನು ಹಾಲಿ ಕಾಂಗ್ರೆಸ್‌ ಸರ್ಕಾರ ಮಾಡುವುದು ಬಹುತೇಕ ನಿಶ್ಚಿತ.

ಬಿಬಿಎಂಪಿಯ 243 ವಾರ್ಡ್‌ಗಳಿಗೂ ಚುನಾವಣೆ ಸಾಧ್ಯತೆ: ರಾಮಲಿಂಗಾರೆಡ್ಡಿ ಸಮಿತಿ ವರದಿ

ಮರುವಿಂಗಡಣೆಗೆ ಆಗ್ರಹ:

ಬಿಬಿಎಂಪಿ ವಾರ್ಡ್‌ ಮರುವಿಂಗಣೆ ಮಾಡಿ ಹಿಂದಿನ ರಾಜ್ಯ ಸರ್ಕಾರ 2022ರ ಜು.14ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಎತ್ತಿಹಿಡಿದ ಹೈಕೋರ್ಚ್‌ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮಾಜಿ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯು ಸೋಮವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ಹಿರಿಯ ವಕೀಲ ಉದಯಹೊಳ್ಳ ಹಾಜರಾಗಿ, ವಾರ್ಡ್‌ ಮರು ವಿಂಗಡಣೆಯಲ್ಲಿ ಕೆಲವೊಂದು ಲೋಪದೋಷಗಳಾಗಿವೆ. ಈ ಅಂಶಗಳನ್ನು ಏಕ ಸದಸ್ಯ ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಆದರೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಲೋಪಗಳು ಕಂಡುಬಂದಾಗ ಅದನ್ನು ಸರಿಪಡಿಸುವುದು ಅನಿವಾರ್ಯ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.

ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿಹಾಜರಾಗಿ, ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಯಲ್ಲಿ ಕೆಲವೊಂದು ಲೋಪದೋಷಗಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿವೆ. ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಆದರೆ, ಲೋಪಗಳನ್ನು ಸರಿಪಡಿಸಿಕೊಂಡು ಹೊಸದಾಗಿ ವಾರ್ಡ್‌ ಮರು ವಿಂಗಡಣೆ ಮಾಡುವುದು ಅನಿವಾರ್ಯವಾಗಿದೆ. ನಂತರವೇ ಚುನಾವಣೆ ವಿಚಾರಣೆಯಲ್ಲಿ ಸರ್ಕಾರ ಮುಂದುವರಿಯುತ್ತದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಹೇಳಿಕೆ ದಾಖಲಿಸಿಕೊಂಡ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಿ ಮೇಲ್ಮನವಿ ವಿಚಾರಣೆ ಮುಂದೂಡಿದೆ.

ಏನಿದು ಪ್ರಕರಣ?

ಬಿಬಿಎಂಪಿ ವಾರ್ಡ್‌ಗಳನ್ನು(BBMP wards) ಪುನರ್‌ ರಚಿಸಿ 2022ರ ಜು.14ರಂದು ಹಿಂದಿನ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಹಾಗೂ ಹಾಲಿ ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌, ಮಾಜಿ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ, ಶಾಸಕ ಎಂ.ಸತೀಶ್‌ ರೆಡ್ಡಿ ಸೇರಿದಂತೆ ಹಲವರು ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದ ನ್ಯಾ.ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠ, ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿ 2022ರ ಸೆ.16ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ವಿಭಾಗೀಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿದಾರರ ಪರ ವಕೀಲ ಶತಭಿಶ್‌ ಶಿವಣ್ಣ ವಕಾಲತ್ತು ವಹಿಸಿದ್ದರು.

ಕಾಂಗ್ರೆಸ್‌ ವಾದವೇನಿತ್ತು?

ಬಿಬಿಎಂಪಿ ವ್ಯಾಪ್ತಿಯ 84 ಲಕ್ಷ ಜನಸಂಖ್ಯೆಯನ್ನು ಒಟ್ಟು 243 ವಾರ್ಡ್‌ಗಳಿಂದ ಭಾಗಿಸಿದರೆ ಪ್ರತಿ ವಾರ್ಡ್‌ಗೆ ಅಂದಾಜು 34,500 ಜನಸಂಖ್ಯೆಯಾಗುತ್ತದೆ. ವಾರ್ಡ್‌ ವಿಂಗಡಣೆಯಲ್ಲಿ ಜನಸಂಖ್ಯೆಯ ಪರಿಗಣಿಸುವಲ್ಲಿ ಶೇ.10ರಷ್ಟುಏರಿಳಿತದ ಅನುಪಾತ ಅನುಸರಿಸಲಾಗಿದೆ ಎಂಬುದಾಗಿ ಸರ್ಕಾರ ಹೇಳಿದೆ. ಸರ್ಕಾರ ಹೇಳಿದಂತೆ ಶೇ.10ರಷ್ಟುಏರಿಳಿತ ಅನುಪಾತ ಪರಿಗಣಿಸಿದರೂ ವಾರ್ಡ್‌ ಜನಸಂಖ್ಯೆ 31 ಸಾವಿರದಿಂದ 37 ಸಾವಿರದ ಆಸುಪಾಸಿಗೆ ಬರುತ್ತದೆ. ಆದರೆ, ಕೆಲ ವಾರ್ಡ್‌ಗಳಲ್ಲಿ 30 ಸಾವಿರ ಜನ ಸಂಖ್ಯೆಯಿದೆ. ಮತ್ತೆ ಕೆಲ ವಾರ್ಡ್‌ಗಳಲ್ಲಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಇನ್ನೂ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲಿ ಸಂಖ್ಯೆ ಕಡಿತಗೊಳಿಸಲಾಗಿದೆ. ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ವಾರ್ಡ್‌ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಲಾಗಿದೆ ಎಂಬುದು ತಕರಾರು ಅರ್ಜಿಯಲ್ಲಿ ಅರ್ಜಿದಾರರು (ಹಾಲಿ ಮೇಲ್ಮನವಿದಾರ) ಆಕ್ಷೇಪಿಸಿದ್ದರು.

BBMP Election: ಡಿ.31ರೊಳಗೆ ಪಾಲಿಕೆ ಎಲೆಕ್ಷನ್‌ ನಡೆಸಲು ಹೈಕೋರ್ಟ್‌ ಆದೇಶ

ಮಧ್ಯಪ್ರವೇಶ ಮಾಡಲ್ಲ ಎಂದಿದ್ದ ಏಕಸದಸ್ಯಪೀಠ

ವಾರ್ಡ್‌ ಮರು ವಿಂಗಡಣೆ ಸಂಕೀರ್ಣ ಕೆಲಸ. ಎಲ್ಲ ವಾರ್ಡ್‌ಗಳನ್ನೂ ಸಮಾನ ಜನಸಂಖ್ಯೆಗೆ ಅನುಗುಣವಾಗಿ ವಿಂಗಡಿಸುವುದು ಸುಲಭವಲ್ಲ. ಹಲವು ಅಂಶಗಳ ಆಧಾರದಲ್ಲಿ ವಿಸ್ತಾರವಾದ ಪ್ರದೇಶಗಳನ್ನು ವಿಂಗಡಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣಪುಟ್ಟಸಮಸ್ಯೆಗಳು ಉದ್ಭವಿಸುವುದು ಸಹಜ. ಆದ್ದರಿಂದ, ಸಣ್ಣಪಟ್ಟಲೋಪವಿದ್ದರೆ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ. ಗಂಭೀರ ಲೋಪ ಕಂಡುಬಂದರೆ ಮಾತ್ರ ಮಧ್ಯ ಪ್ರವೇಶಿಸಲಾಗುವುದು ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.